ಡೋಣಿ ನದಿ ಪಾತ್ರದ ಜಮೀನುಗಳಲ್ಲಿ ಪ್ರವಾಹದಿಂದ ನೀರು ನಿಂತು ಹಾಳಾಗಿರುವ ಬೆಳೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದ ಡೋಣಿ ನದಿಯ ಅಕ್ಕಪಕ್ಕದ ಜಮೀನುಗಳು ಡೋಣಿ ಪ್ರವಾಹದಿಂದ ನೀರು ನಿಂತು ಬೆಳೆಗಳು ಹಾಳಾಗಿದ್ದು ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಗ್ರೇಡ್-೨ ತಹಶೀಲ್ದಾರ ಎಸ್.ಎಚ್. ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಕೊಂಡಗೂಳಿ ಗ್ರಾಮದ ರೈತ ಪ್ರಮುಖರು ಗ್ರಾಮದ ಜಮೀನುಗಳಲ್ಲಿ ಡೋಣಿ ನೀರು ನಿಂತು ಬೆಳೆಗಳ ಹಾಳಾದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತಪ್ರಮುಖರಾದ ಎಸ್.ಎಮ್.ನಾಗಾವಿ ಮಾತನಾಡಿ, ಸತತ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ನಮ್ಮ ಗ್ರಾಮದ ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ಸಂಪೂರ್ಣ ಹಾಳಾಗಿವೆ. ಈಗಲೂ ಜಮೀನುಗಳಲ್ಲಿ ನಡೆಯಲು ಬಾರದಂತ ಪರಿಸ್ಥಿತಿಯಿದೆ. ಇಂತಹ ನೀರು ನಿಂತ ಜಮೀನುಗಳ ಬೆಳೆಗಳ ಫಸಲು ಬರುವುದು ಸಾಧ್ಯವೇ ಇಲ್ಲ.
ಜಮೀನುಗಳ ವಾಸ್ತವಿಕ ಅಂಶಗಳನ್ನು ಅರಿಯಲು ತಾವು ಹಾಗೂ ಸಂಬಂಧಿಸಿದ ಸಿಬ್ಬಂದಿ ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲಿಸಬಹುದಾಗಿದೆ. ಜಮೀನುಗಳ ವೀಕ್ಷಣೆ ಹಾಗೂ ಪರಿಶೀಲನೆಯ ನಂತರ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಸಿದ್ದಣ್ಣ ಸಿಂದಗೇರಿ, ಪ್ರಕಾಶ ಕರಭಂಟನಾಳ, ಸಿದ್ಧನಗೌಡ ಪಾಟೀಲ, ಈರಣ್ಣ ಗಾಣಿಗೇರ, ಶಿವು ಗೊಬ್ಬೂರ, ನಾನಾಸಿಂಗ್ ಕುಲಕರ್ಣಿ, ಶಿವು ಮಲ್ಲಾಬಾದಿ, ಬಸನಗೌಡ ಪಾಟೀಲ, ಲೋನಾರ್ಗೌಡ್ರ, ಮಹಾಂತಗೌಡ ಮಲಗೊಂಡ ಇದ್ದರು.

