ಭೀಕರ ಅಪಘಾತದಲ್ಲಿ ನಾಲ್ವರ ದುರಂತ ಅಂತ್ಯ | ಕಣ್ಣೀರ ಕಡಲಲ್ಲಿ ಕುಟುಂಬಗಳು | ನ್ಯಾಯ ಕೊಡಿಸುವವರಿಗೆ ಅನ್ಯಾಯ
ಉದಯರಶ್ಮಿ ದಿನಪತ್ರಿಕೆ
– ಚೇತನ ಶಿವಶಿಂಪಿ
ಮುದ್ದೇಬಿಹಾಳ: ಮನೆ ಮಾರಿ ಮಗನ ಉದ್ಯೋಗಕ್ಕಾಗಿ ಕಾರು ಕೊಡಿಸಿದ್ದ ಒಂದು ಕುಟುಂಬ, ಸಾರ್ವಜನಿಕರ ನ್ಯಾಯವನ್ನು ಸರಳವಾಗಿ ಬಗೆಹರಿಸಿ ಸಾಕಷ್ಟು ನೊಂದ ಕುಟುಂಬಗಳಿಗೆ ಆಸರೆಯಾಗಿದ್ದ ಸೀದಾ ಸಾದಾ ನಾಯಕನ ಇನ್ನೊಂದು ಕುಟುಂಬ, ಘಟನೆಯೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡು ಎದೆಗುಂದದೆ ಬಾಳ ಪಯಣದಲ್ಲಿ ದಿನ ನಿತ್ಯ ಹೋರಾಟ ಮಾಡುತ್ತ ಸಾಗುತ್ತಿದ್ದ ವ್ಯಕ್ತಿಯ ಮತ್ತೊಂದು ಕುಟುಂಬ, ಬಡತನದ ಕುಟುಂಬದಲ್ಲಿ ಬೆಳೆದು ಗುತ್ತಿದಾರನಾಗಿ ಹೆಸರುವಾಸಿಯಾಗಿದ್ದವನ ಕುಟುಂಬ, ಈ ನಾಲ್ಕೂ ಕುಟುಂಬಗಳು ಸಧ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.
ಈ ಕುಟುಂಬಗಳು ಕಣ್ಣೀರಿಡಲು ಕಾರಣವಾಗಿದ್ದೇ ಆ ಭಯಾನಕ ವಾಹನ ಅಪಘಾತ. ಬುಧವಾರ ಮಧ್ಯರಾತ್ರಿ ಮುದ್ದೇಬಿಹಾಳ-ಹುನಗುಂದ ಹೈವೇ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಡೆದ ನಾಲ್ವರ ದುರಂತ ಅಂತ್ಯಕ್ಕೆ ನಾಲ್ಕೂ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ.
ದೇವರ ದರ್ಶನಕ್ಕೆಂದು ಮನೆಯಿಂದ ಹೊರಟವರು ಮರಳಿ ಮನೆಗೆ ಬಾರದೆ ಮಸಣದತ್ತ ಪಯಣ ಬೆಳೆಸಿದರೆ ಅವರನ್ನೇ ನಂಬಿದ ಜೀವಗಳಿಗೆ ಹೇಗೆ ಆಗ್ಬೇಡಾ ಹೇಳಿ. ಊಹೆ ಮಾಡ್ಕೊಳ್ಳೋಕೂ ಸಾಧ್ಯವಾಗದ ರೀತಿಯಲ್ಲಿ ಆ ದುರಂತ ನಡೆದು ಹೋಗಿದೆ.

ಅಂದು ಯಾವುದೋ ಒಂದು ನ್ಯಾಯ ಬಗೆಹರಿಸುವ ಉತ್ಸಾಹದಲ್ಲಿ ಮುದ್ದೇಬಿಹಾಳದ ಮಹಾಂತೇಶ ನಗರದ ರಾಮಣ್ಣ ನಾಯಕಮಕ್ಕಳ, ಬಿದರಕುಂದಿಯ ಗುತ್ತಿಗೆದಾರ ಲಕ್ಷ್ಮಣ ವಡ್ಡರ ಮತ್ತು ಬೈಲಪ್ಪ ಬಿರಾದಾರ ಈ ಮೂವರು ಮಹಮ್ಮದ ರಫೀಕ ಎನ್ನುವವನ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೊರಟಿದ್ದಾರೆ. ನ್ಯಾಯ ಬಗೆಹರಿಸಿ ಬರುವಾಗ ಮಾರ್ಗ ಮಧ್ಯದಲ್ಲಿ ಹೊಸಪೇಟೆಯ ಹುಲಿಗೆಮ್ಮ ದೇವಿಯ ದರ್ಶನ ಪಡೆದಿದ್ದಾರೆ. ಮರಳಿ ತಮ್ಮೂರ ಕಡೆಗೆ ಬರುವಾಗ ಹೊಂಚು ಹಾಕಿದ್ದ ಜವರಾಯ ಈ ನಾಲ್ವರನ್ನೂ ಬಲಿ ಪಡೆದು ನಾಲ್ಕೂ ಕುಟುಂಬಗಳ ಕಣ್ಣೀರಿಗೆ ಕಾರಣನಾಗಿದ್ದಾನೆ.
ಇಲ್ಲಿ ಶಿವನ ಪಾದ ಸೇರಿದವರಲ್ಲಿ ವಾಹನ ಚಾಲಕ ಮಹಮ್ಮದ ರಫೀಕ ಮುದ್ದೇಬಿಹಾಳ ತಾಲೂಕಿನ ಗುಡ್ನಾಳ ಗ್ರಾಮದ ೨೩ರ ಹರೆಯದ ಯುವಕ. ಇನ್ನೂ ಮದುವೆಯಿಲ್ಲ. ಉದ್ಯೋಗಕ್ಕಾಗಿ ಪರದಾಡುವಾಗ ತಮ್ಮ ಮನೆಯೊಂದನ್ನ ಮಾರಿ ಕಾರು ಕೊಡಿಸಿದ್ದ ಆತನ ಪಾಲಕರಿಗೆ ಅದೇ ಕಾರಿನಲ್ಲಿ ಅವನ ಅಂತ್ಯವಾಗುತ್ತೆ ಅಂತ ಕನಸು-ಮನಸಲ್ಲೂ ಎಣಿಸಿರಲಿಲ್ಲ.
ಇದು ಯುವಕನ ಕಥೆಯಾದರೆ ಕಳೆದ ೧೦ ವರ್ಷಗಳ ಹಿಂದೆ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ತಾಲೂಕಿನ ಬಿದರಕುಂದಿ ಗ್ರಾಮದ ಬೈಲಪ್ಪ ಬಿರಾದಾರ(೪೬) ಯಾವತ್ತೂ ಎದೆಗುಂದದೆ ಪ್ಲಾಸ್ಟಿಕ್ ಕೈಗಳ ಸಹಾಯದಿಂದ ತನ್ನ ಭೂಲೋಕದ ಪಯಣವನ್ನು ಮುಂದುವರೆಸಿದ್ದು ಬುಧವಾರ ತನ್ನ ಪಯಣ ಅಂತ್ಯವಾಗುವ ಬಗ್ಗೆ ಅವಗೆ ಯಾವ ಸುಳಿವೂ ಸಿಕ್ಕಿರಲಿಲ್ಲ.
ಮತ್ತೋರ್ವ ವಾಲ್ಮೀಕಿ ಸಮಾಜದ ಹೆಸರಾಂತ ನಾಯಕ ರಾಮಣ್ಣ ನಾಯಕಮಕ್ಕಳ(೫೭) ನ್ಯಾಯ ಬಗೆಹರೆಸುವಲ್ಲಿ ಎತ್ತಿದ ಕೈ. ತನ್ನ ಬಳಿ ನ್ಯಾಯ ಅಂತ ಬಂದವರಿಗೆ ಸರಿಯಾದ ನ್ಯಾಯ ಕೊಡಿಸುವವರೆಗೂ ಸಮಾಧಾನವಿರುತ್ತಿರಲಿಲ್ಲ. ಆದರೆ ತನಗೇ ಅನ್ಯಾವಾಗುತ್ತದೆಂಬ ಕಲ್ಪನೆಯೂ ಆತನಿಗಿರಲಿಲ್ಲ.
ಕೊನೆಯದವ ಬಡ ಕುಟುಂಬದಲ್ಲಿ ಹುಟ್ಟಿ ಗುತ್ತಿಗೆದಾರನಾಗಿ ಸಾಕಷ್ಟು ಹೆಸರು ಮಾಡಿದ್ದ ಲಕ್ಷ್ಮಣ ವಡ್ಡರ(೫೫). ಈತನೂ ನ್ಯಾಯ ಪಂಚಾಯತಿ ನಡೆಸುವಲ್ಲಿ ಸಾಕಷ್ಟು ಪಳಗಿದ್ದ. ಈ ನಾಲ್ವರ ಅಧ್ಯಾಯದ ಅಂತಿಮ ಪುಟಗಳನ್ನು ಆ ಕಾರಿನಲ್ಲಿ ಬರೆದಿದ್ದ ಯಮರಾಜ.
ದರ್ಶನ ಪಡೆದು ಮರಳಿ ತಮ್ಮೂರಿಗೆ ಬರುವಾಗ ರದ್ದಿ ತುಂಬಿಕೊಂಡು ಹೊರಟಿದ್ದ ದೊಡ್ಡ ಲಾರಿಗೆ ಮುಖಾ ಮುಖಿ ಡಿಕ್ಕಿಯಾಗಿ ಕ್ಷಣ ಮಾತ್ರದಲ್ಲಿ ಕಾರಿನಲ್ಲಿದ್ದವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಈ ನಾಲ್ವರ ದುರಂತ ಅಂತ್ಯ ರಾತ್ರಿ ವೇಳೆ ಪ್ರಯಾಣ ಸೂಕ್ತವಲ್ಲ ಎನ್ನುವ ಸಂದೇಶ ಸಾರಿ ನಮ್ಮನ್ನೇ ನಂಬಿದ ಜೀವಗಳ ಬಗ್ಗೆ ಒಂದು ಕ್ಷಣ ಯೋಚಿಸಲು ದಾರಿ ಮಾಡಿ ಕೊಟ್ಟಿದೆ. ಯಾರೊಬ್ಬರೂ ರಾತ್ರಿ ವೇಳೆ ಪ್ರಯಾಣ ಬೆಳೆಸದೇ ಬೆಳಕಿನಲ್ಲಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಪ್ರಯಾಣ ಬೆಳೆಸಬೇಕೆಂಬುದು ’ಉದಯ ರಶ್ಮಿ’ ಸದಾಶಯ.

