ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್ನೆಟ್ ಹಾಗೂ ಸ್ಕ್ಯಾನರ್ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಹೆಚ್.ಕೆ.ಅಂಗಡಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲೇಖನಿ ಸ್ಥಗಿತಗೊಳಿಸುವ ಮೂಲಕ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾತನಾಡಿದ ಅವರು, ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.೨೬ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ನಮ್ಮ ಬೇಡಿಕೆ ಈಡೇರಿಕೆಯಾಗದೇ ಹೋದರೆ ಈ ಮುಷ್ಕರ ಹೀಗೆ ಲೇಖನಿ ಸ್ಥಗಿತಗೊಳಿಸುವುದು ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠ ಮಾತನಾಡಿ, ಆಧುನಿಕ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅವಶ್ಯ ಸೌಲಭ್ಯವನ್ನು ಕಲ್ಪಿಸುವವರೆಗೆ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ. ಪದೋನ್ನತಿ, ವರ್ಗಾವಣೆ, ನೌಕರರ ಅಮಾನತ್ತು ಸೇರಿ ಹಲವಾರು ಬೇಡಿಕೆಗಳನ್ನು ಸರ್ಕಾರ ಒದಗಿಸಬೇಕು. ಮೊಬೈಲ್ ಆಫ್ ಬಳಕೆ, ವೆಬ್ ಪೇಜ್ ಸಮಸ್ಯೆ ಸೇರಿದಂತೆ ರಜಾ ದಿನನಗಳಲ್ಲಯೂ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಸದಾ ಮಾನಸಿಕ ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ರಾಜ್ಯ ಸರಕಾರ ಮಾನವೀಯ ನೆಲಗಟ್ಟಿನ ಆಧಾರದ ಮೇರೆಗೆ ಪರಿಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಆಯ್.ಎ.ಮಕಾಂದಾರ, ಗ್ರಾಮ ಆಡಳಿತಾಧಿಕಾರಿಗಳಾದ ಪಿ.ಕೆ. ಹಿಡೇದ, ಮಲೀಕ ಭಾಗವಾನ, ಪಿ.ಎಸ್. ಕದಂ, ಎಚ್.ಜಿ. ಶೇಖ, ನಿಖಿಲ್ಅಹ್ಮದ ಖಾನಾಪುರ, ಎಸ್.ಎಸ್.ಬಿದರಕುಂದಿ, ಬಸಯ್ಯ ಮಠ, ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ ಮೋರೆ, ಪ್ರಧಾನ ಕಾರ್ಯದಿರ್ಶಿ ವಿನೋದ ಕರ್ನಾಳ, ಆಶೀಫ್ ಜಮಾದಾರ, ರೆಹಮಾನ ಕಣಮೇಶ್ವರ, ಕಜಾಂಚಿ ಮೇಘಾ ಕುಳಗೇರಿಮಠ, ಗೌರವಾಧ್ಯಕ್ಷ ಬಿ.ಬಿ.ಕಾರಿಮುಂಗಿ, ಬನ್ನೆಪ್ಪ ಅತ್ನೂರ, ಸುನೀಲ ಬಂಡಿವಡ್ಡರ, ನಾಗಮ್ಮ ಸಾಲಿ ನಿಂಗಮ್ಮ ದೊಡಮನಿ, ವಿಜಯಲಕ್ಷಿö್ಮ ಸೇರಿದಂತೆ ವಿವಿಧ ಸಂಘ, ಸಂಘಟನೆಯ ಮುಖಂಡರು, ಅಟಲ್ ಜನಸ್ನೇಹಿ ಕೇಂದ್ರವು ಮುಷ್ಟರಕ್ಕೆ ಸಾಥ್ ನೀಡಿದ್ದಾರೆ.

