ಆಲಮಟ್ಟಿ: ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಅಧಿಕಾರಿಗಳು ಹಾಳು ಮಾಡುತ್ತಿದ್ದು ಕೂಡಲೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಗುರುವಾರ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ‘ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಹಾಳು ಮಾಡುತ್ತಿದ್ದು ಕೂಡಲೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಜಿಟಿ.ಜಿಟಿ ಮಳೆ ಆದ ಕಾರಣ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತ ಗೊಳಸಿದ್ದಾರೆ. ಈ ಅಧಿಕಾರಿಗಳ ಧೋರಣೆ ಸಂಪೂರ್ಣ ರೈತ ವಿರೋಧಿ ಆಗಿದೆ ಈ ಸದ್ಯ ಮುಂಗಾರು ಬೆಳೆಗೆ ತುರ್ತಾಗಿ ನೀರು ಅಗತ್ಯವಿದೆ. ಮುಂಗಾರು ಹಂಗಾಮಿನ ಮಳೆ ಮೊದಲು ಸಕಾಲಕ್ಕೆ ಆಯಿತು ಖುಷಿಯಿಂದ ರೈತರು ಬಿತ್ತನೆ ಮಾಡಿದ್ದಾರೆ. ನಂತರದಲ್ಲಿ ಮಳೆ ಮಾಯವಾಗಿದೆ. ಈ ಆಷಾಢ ಮಾಸದ ಗಾಳಿ ಪ್ರಬಲವಾಗಿ ಬೀಸುತ್ತಿರುವದರಿಂದ ಭೂಮಿಯ ತೇವಾಂಶ ಕಡಿಮೆಯಾಗಿದೆ. ಇದನ್ನು ಅರಿತು ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು ಆದರೆ ಅಧಿಕಾರಿಗಳು ರೈತರನ್ನು ಹಾಳುಮಾಡಬೇಕೆಂಬ ಉದ್ದೇಶದಿಂದ ನಮ್ಮ ರೈತರಿಗೆ ನೀರು ಕೊಡುತ್ತಿಲ್ಲ ಎಂದರು.
ಯಾವ ಭಾಗದಲ್ಲಿ ಮಳೆಯಾಗಿದೆ ಯಾವ ಯಾವ ಹಳ್ಳಿಯ ರೈತರು ನೀರು ಬೇಡ ನೀರಿನ ಅಗತ್ಯ ವಿಲ್ಲವೆಂದು ಮನವಿ ಕೊಟ್ಟಿದ್ದಾರೋ ಹೇಗೆ? ಅದನ್ನು ಲಿಖಿತವಾಗಿ ಅಥವಾ ಆಧಾರ ಸಹಿತ ಬಹಿರಂಗ ಪಡಿಸಲಿ ಕಳೆದ ಆರು ತಿಂಗಳ ಹಿಂದೆಯೇ ಕಾಲುವೆ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಕಾಲುವೆಗಳಿಗೆ ನೀರು ಹರಿಸದೆ ಇರುವ ಸಂದರ್ಭದಲ್ಲಿ ಕಾಮಗಾರಿ ಮಾಡುವದನ್ನು ಬಿಟ್ಟು ಈಗ ಉದ್ದೇಶ ಪೂರ್ವಕವಾಗಿ ರೈತರಿಗೆ ನೀರು ಅಗತ್ಯವಿದ್ದಾಗ ಕಾಮಗಾರಿ ಕೈಗೊಳ್ಳುವುದು ಹಣ ಕೊಳ್ಳೆ ಹೊಡಿಯುವ ಕುತಂತ್ರ ಅಡಗಿದೆ. ಅದು ಏನೆ ಇದ್ದರು ಕಾಮಗಾರಿ ಸ್ಥಗಿತಗೊಳಿಸಿ ಎಲ್ಲ ಕಾಲುವೆಗಳಿಗು ನೀರು ಹರಿಸಲು ಇವತ್ತಿನಿಂದಲೆ ಪ್ರಾರಂಭಿಸಬೇಕು ಒಂದು ವೇಳೆ ನೀರು ಹರಿಸದಿದ್ದರೆ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ಈರಣ್ಣ ದೇವರಗುಡಿ, ಬಸಪ್ಪ ಮುಳವಾಡ, ವಿಠ್ಠಲ ಬಿರಾದಾರ, ಹೊನಕೇರಪ್ಪ ತೆಲಗಿ, ಪ್ರಹ್ಲಾದ ನಾಗರಾಳ, ಲಾಲಸಾಬ ಹಳ್ಳೂರ, ಮರಿಗೆಪ್ಪ ಸಾಸನೂರ ಇದ್ದರು.
ಮೂರು ದಿನಗಳೊಳಗೆ ನೀರು ಬಿಡುಗಡೆ
ನೀರು ಹರಿಸಲು ರೈತರ ಬೇಡಿಕೆಯಿಲ್ಲ ಎಂಬುದು ತಪ್ಪಾಗಿ ಪ್ರಕಟವಾಗಿದೆ, ಉಪವಿಭಾಗಗಳ ಬೇಡಿಕೆ ಪಡೆದು,
ಆಲಮಟ್ಟಿ ಎಡದಂಡೆ ಕಾಲುವೆ ಕಿ.ಮೀ ೧೦.೦೦ ರಲ್ಲಿ ತುರ್ತು ಕಾಲುವೆ ರಿಪೇರಿ ಪೂರ್ಣಗೊಳಿಸಿ ಮೂರು ದಿನಗಳ ಒಳಗೆ ನೀರು ಬಿಡಲಾಗುವುದು ಎಂದು ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಲಿಖಿತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

