ಎಸ್.ಆರ್.ಪಿ ಹೆಸರಿನ ಟೀಶರ್ಟ್ಸ್, ಗೋಡೆ ಗಡಿಯಾರಗಳ ಸಂಗ್ರಹ
ಮುದ್ದೇಬಿಹಾಳ: ತಾಲೂಕಿನ ಯರಗಲ್ಲದಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಮಾಜಿ ಶಾಸಕರ ಭಾವಚಿತ್ರ ಹಾಗೂ ಹೆಸರು ಇರುವ ಟೀ-ಶರ್ಟ ಮತ್ತು ಗೋಡೆ ಗಡಿಯಾರಗಳು ಪತ್ತೆಯಾಗಿದ್ದು ಸಂಶಯಾಸ್ಪದವಾಗಿ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚುನಾವಣಾಧಿಕಾರಿ ಸುರೇಶ ಭಾವಿಕಟ್ಟಿ ಅವರಿಗೆ ಬಂದ ಮಾಹಿತಿಯನ್ನಾಧರಿಸಿ ಕಾರ್ಖಾನೆಯ ಗೋಡಾವನ ಮೇಲೆ ಸಂಶಯಾಸ್ಪದವಾಗಿ ದಾಳಿ ನಡೆಸಿದ್ದು ವಸ್ತುಗಳು ಇರುವುದು ಖಚಿತಗೊಂಡಿದೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿರುವ ಎಸ್.ಆರ್.ಪಾಟೀಲರು ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹಬ್ಬಿರುವಂತೆಯೇ ಎಸ್.ಆರ್.ಪಿ. ಎಂದು ಬರೆದಿರುವ ಅಪಾರ ಪ್ರಮಾಣದ ಟೀ ಶರ್ಟುಗಳ ಬಾಕ್ಸುಗಳನ್ನು, ಹಾಗೂ ಎಸ್.ಆರ್.ಪಾಟೀಲ ಅವರ ಭಾವಚಿತ್ರ ಇರುವ ಗೋಡೆ ಗಡಿಯಾರಗಳ ಪರಿಶೀಲನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಚುನಾವಣಾ ಸೆಕ್ಟರ್ ಆಫೀಸರ್ ಸುರೇಶ ಭಾವಿಕಟ್ಟಿ ಅವರು, ಗೋಡಾವನದಲ್ಲಿ ಅಪಾರ ಪ್ರಮಾಣದ ಸರಕುಗಳಿವೆ. ಅವುಗಳನ್ನು ಯಾಕೆ ತರಿಸಲಾಯಿತು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಇಲ್ಲಿ ಸಿಕ್ಕ ಎಲ್ಲ ಸರಕುಗಳ ಬಗ್ಗೆ ಮುದ್ದೇಬಿಹಾಳ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾAತ ಪವಾರ ಅವರಿಗೆ ತಿಳಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ದಾಳಿಯಲ್ಲಿ ೨೨ ಲಕ್ಷ ಮೌಲ್ಯದ ರಶೀದಿ ಸಿಕ್ಕಿದ್ದು, ಸರಕಿನ ಮೌಲ್ಯ ಸ್ಪಷ್ಟವಾಗಿ ಗೊತ್ತಾಗಬೇಕಿದೆ.
ಬೀಳಗಿ ಸಕ್ಕರೆ ಕಾರ್ಖಾನೆ ಹಾಗೂ ಯರಗಲ್ಲದ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಹಣಮಂತಗೌಡ ಪಾಟೀಲ ಅವರು ನಿರ್ದೇಶಕರಾಗಿದ್ದು, ಪ್ರತಿ ವರ್ಷದಂತೆ ಕಾರ್ಖಾನೆಯ ನೌಕರರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಹಂಚಲೆAದು ಇವುಗಳನ್ನು ತರಿಸಿ ಇಡಲಾಗಿದೆ ಎಂದು ಬಾಲಾಜಿ ಸಕ್ಕರೆ ಕಾರ್ಖಾನೆಯ ಸಿಬ್ಬಂದಿ ಮಾರುತಿ ಗುರವ ಸಮಜಾಯಿಷಿ ನೀಡಿದ್ದಾರೆ. ಪೂರ್ಣ ಪ್ರಮಾಣದ ತನಿಖೆಯಿಂದ ಮಾತ್ರವೇ ಸತ್ಯ ಹೊರಬರಲಿದೆ.