ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ 100 ದಿನಗಳ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಅಭಿಯಾನದ ಅಂಗವಾಗಿ ಸಂಶಯಾಸ್ಪದ ಕ್ಷಯರೋಗಿಗಳಿಗೆ ಎ.ಐ ಆಧಾರಿತ ಎಕ್ಸ್-ರೇ ಯಂತ್ರದ ಮೂಲಕ ಸ್ಥಳದಲ್ಲೇ ತಪಾಸಣೆ ನಡೆಸಿ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಆಡಳಿತ ವೈದ್ಯಾಧಿಕಾರಿಗಳಾದ ಡಾ.ನಂದಿನಿ.ಡಿ, ಈ ವೇಳೆ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಇಳಿಕೆಯಾಗುವುದು, ಹಸಿವು ಕಡಿಮೆಯಾಗುವುದು ಕ್ಷಯರೋಗದ ಪ್ರಮುಖ ಲಕ್ಷಣಗಳು. ಸಕ್ಕರೆ ಕಾಯಿಲೆ ಇರುವವರು ಮತ್ತು ಧೂಮಪಾನ ಮಾಡುವವರು ಹೆಚ್ಚಿನ ಜಾಗ್ರತೆ ವಹಿಸಬೇಕು. ಟಿಬಿ ರೋಗವು ಕೇವಲ ಶ್ವಾಸಕೋಶಕ್ಕೆ ಮಾತ್ರ ಸೀಮಿತವಲ್ಲದೆ ದೇಹದ ಇತರೆ ಭಾಗಗಳಿಗೂ ಹರಡಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕ್ಷಯರೋಗ ಘಟಕದಿಂದ ತರಿಸಲಾದ ಮೊಬೈಲ್ ಎಕ್ಸ್-ರೇ ಯಂತ್ರದ ಮೂಲಕ ಉಚಿತ ತಪಾಸಣೆ ಮಾಡಿಸಲಾಯಿತು. ಸಂಶಯಾಸ್ಪದ ರೋಗಿಗಳಿಗೆ ಕಫ ಪರೀಕ್ಷೆ (ಸ್ಪ್ಯೂಟಮ್ ಟೆಸ್ಟ್) ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಕ್ಸ್-ರೇ ತಜ್ಞರಾದ ಶ್ರೀಶೈಲ್ ವಾಗ್ಮುರಿ, ಪ್ರವೀಣ, ಎಸ್ ಟಿಎಸ್ ಸಿಬ್ಬಂದಿಗಳಾದ ಎಸ್.ಕೆ. ದೊಡ್ಮನಿ ಸೇರಿದಂತೆ ಪಾಂಡುರಂಗ ಹಳ್ಳದ, ಜಿ.ಸಿ. ಸಂಗಳದ, ಬಿ.ಎಸ್. ಪ್ಯಾಟಿಗೌಡರ, ಬಿ.ಎಸ್. ನೇಕಾರ, ಮಹೇಶ ಬಿರಾದಾರ, ಸುರೇಶ್ ಛಲವಾದಿ, ಶರಣಬಸು ಗುದ್ದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

