– ಜಯಶ್ರೀ ಜೆ ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: 9449234142
ಉದಯರಶ್ಮಿ ದಿನಪತ್ರಿಕೆ
ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬ ಯುವ ಶಿಲ್ಪಿ ಇದ್ದನು. ಅವನಿಗೆ ಕಲ್ಲಿನಲ್ಲಿ ಸುಂದರವಾದ ಮೂರ್ತಿಗಳನ್ನು ಕೆತ್ತಬೇಕೆಂಬ ದೊಡ್ಡ ಕನಸಿತ್ತು. ಒಮ್ಮೆ ಅವನು ದೊಡ್ಡದೊಂದು ಕಲ್ಲನ್ನು ಆಯ್ದುಕೊಂಡು, ಸುತ್ತಿಗೆ ಮತ್ತು ಉಳಿ ಹಿಡಿದು ಕೆತ್ತಲು ಕುಳಿತನು. ಮೊದಲ ಏಟು ಬಿದ್ದಾಗ ಕಲ್ಲಿನಿಂದ ಕಿಡಿ ಹಾರಿತು, ಅವನ ಕೈಗೆ ಪೆಟ್ಟಾಗಿ ರಕ್ತ ಬಂದಿತು. ಅತಿಯಾದ ಬಿಸಿಲು, ಕೈಯಲ್ಲಾದ ಗಾಯಗಳು ಅವನನ್ನು ಸುಸ್ತು ಮಾಡಿದವು. ಹಳ್ಳಿಯ ಜನರೆಲ್ಲಾ ಬಂದು, "ಈ ಕಠಿಣ ಕಲ್ಲಿನಲ್ಲಿ ಮೂರ್ತಿ ಮಾಡಲು ನಿನ್ನ ಕೈಲಾಗಲ್ಲ, ಬಿಟ್ಟುಬಿಡು" ಎಂದು ಉದಾಸೀನ ಮಾಡಿದರು. ಆದರೆ ಯುವಕ ಧೃತಿಗೆಡಲಿಲ್ಲ. ಹಗಲಿರುಳು ಬೆವರು ಹರಿಸಿ, ನೋವನ್ನು ನುಂಗಿ, ತಿಂಗಳುಗಟ್ಟಲೆ ಆ ಕಲ್ಲಿನ ಮೇಲೆ ಕಠಿಣ ಪರಿಶ್ರಮ ಪಟ್ಟನು. ಕೊನೆಗೊಂದು ದಿನ, ಆ ಕಠಿಣ ಕಲ್ಲು ಜಗತ್ತೇ ಬೆರಗಾಗುವಂತಹ ಅದ್ಭುತ ದೇವರ ಮೂರ್ತಿಯಾಗಿ ಬದಲಾಯಿತು! ಅಂದು ಅವನನ್ನು ಆಡಿಕೊಂಡ ಜನರೇ ಇಂದು ಆ ಮೂರ್ತಿಯ ಮುಂದೆ ಕೈಮುಗಿದು ನಿಂತರು. ಆ ಮೂರ್ತಿಯ ಹಿಂದಿದ್ದದ್ದು ಕೇವಲ ಕಲ್ಲಲ್ಲ, ಯುವಕನ ಕಠಿಣ ಪರಿಶ್ರಮದ ಬೆವರ ಹನಿಗಳು!ಯಶಸ್ಸಿನ ಅಸಲಿ ರಹಸ್ಯ
ಇಂದಿನ ಯುವಜನತೆ ಎಲ್ಲವೂ ಚುಟಕಿ ಹೊಡೆಯುವಷ್ಟಲ್ಲಿ ಆಗಲಿ. ಕಣ್ಣು ಮುಚ್ಚಿ ಕಣ್ಣು ತೆಗೆಯುವುದರಲ್ಲಿ ಯಶಸ್ಸಿನ ಶಿಖರದ ತುದಿಯ ಮೇಲೆ ನಿಲ್ಲಬೇಕೆಂದು ಬಯಸುತ್ತಾರೆ. ಆದರೆ, ರಾತ್ರೋರಾತ್ರಿ ಯಶಸ್ಸು ಸಿಗುತ್ತದೆ ಎಂಬುದು ಕೇವಲ ಭ್ರಮೆ. ಪ್ರತಿಯೊಂದು ಯಶಸ್ಸಿನ ಸೌಧದ ಅಡಿಪಾಯದಲ್ಲಿಯೂ ಕಠಿಣ ಪರಿಶ್ರಮ, ತ್ಯಾಗ ಮತ್ತು ಕಣ್ಣೀರಿನ ಕಥೆಗಳಿರುತ್ತವೆ. ಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ಹೇಳುತ್ತಾರೆ: “ಪ್ರತಿಭೆ ಎಂಬುದು ಕೇವಲ ಶೇಕಡಾ ಒಂದರಷ್ಟು ಮಾತ್ರ, ಉಳಿದ ಶೇಕಡಾ ತೊಂಬತ್ತೊಂಬತ್ತರಷ್ಟು ಕೇವಲ ಕಠಿಣ ಪರಿಶ್ರಮ!” ಎಂದು.

ಹೋರಾಟ
ನಾವು ವೇದಿಕೆಯ ಮೇಲೆ ಮಿನುಗುವ ನಕ್ಷತ್ರಗಳನ್ನು ನೋಡುತ್ತೇವೆ, ಆದರೆ ಅವರು ಕತ್ತಲೆಯಲ್ಲಿ ನಡೆಸಿದ ಹೋರಾಟವನ್ನು ಗಮನಿಸುವುದಿಲ್ಲ. ಯಶಸ್ಸು ಎಂಬುದು ಲಾಟರಿ ಅಲ್ಲ; ಅದೊಂದು ನಿರಂತರ ಪ್ರಯಾಣ.ಜಾಗತಿಕ ಸಾಧಕರ ಬೆವರ ಹಾದಿ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ಯಶಸ್ಸಿನ ರಹಸ್ಯವನ್ನು ಹೀಗೆ ಬಿಚ್ಚಿಡುತ್ತಾರೆ: “ನಾನು ರಾತ್ರೋರಾತ್ರಿ ಸ್ಟಾರ್ ಆಗಲು 17 ವರ್ಷಗಳ 114 ದಿನಗಳ ಕಠಿಣ ಪರಿಶ್ರಮ ಬೇಕಾಯಿತು.”
ನೋವು ನುಂಗಬೇಕು
ಬಾಲ್ಯದಲ್ಲಿ ಹಾರ್ಮೋನ್ ಕೊರತೆಯ ಕಾಯಿಲೆಯಿಂದ ಬಳಲುತ್ತಿದ್ದ ಮೆಸ್ಸಿ, ಚಿಕಿತ್ಸೆಯ ನೋವನ್ನು ನುಂಗಿ, ದಿನದ 24 ಗಂಟೆಯೂ ಮೈದಾನದಲ್ಲಿ ಬೆವರು ಹರಿಸಿದ್ದರಿಂದಲೇ ಇಂದು ಜಗತ್ತಿನ ಶ್ರೇಷ್ಠ ಆಟಗಾರನಾಗಲು ಸಾಧ್ಯವಾಯಿತು.
ಅಪ್ರತಿಮ ತಾಳ್ಮೆ
ಅದೇ ರೀತಿ, ಭಾರತದ ಹೆಮ್ಮೆಯ ಉದ್ಯಮಿ ಧೀರೂಭಾಯಿ ಅಂಬಾನಿ ಆರಂಭದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕಠಿಣ ಪರಿಶ್ರಮ, ಅಪ್ರತಿಮ ತಾಳ್ಮೆ ಮತ್ತು ದೊಡ್ಡದಾಗಿ ಯೋಚಿಸುವ ಛಲವೇ ರಿಲಯನ್ಸ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಶಕ್ತಯಾಯಿತು.
ಕಠಿಣ ಪರಿಶ್ರಮ
ನಮ್ಮ ಹೆಮ್ಮೆಯ ಕರ್ನಾಟಕದ ಅಪ್ರಸಿದ್ಧ ಕಲಿಗಳು. ನಾವು ಪತ್ರಿಕೆಗಳಲ್ಲಿ ನೋಡುವ ದೊಡ್ಡ ಹೆಸರುಗಳ ಹೊರತಾಗಿ, ಹಠಬಿಡದೆ ದುಡಿದು ಸಾಧನೆ ಮಾಡಿದ ಕೆಲವು ಅಪ್ರಸಿದ್ಧ ಕರ್ನಾಟಕದ ಕಲಿಗಳು ನಮ್ಮ ನಡುವೆಯೇ ಇದ್ದಾರೆ. ಇವರ ಕಥೆಗಳು ಯಾವುದೇ ಸಿನೆಮಾಗೂ ಕಮ್ಮಿಯಿಲ್ಲ. ಹಾವೇರಿ ಜಿಲ್ಲೆಯ ಸಾಮಾನ್ಯ ಗ್ರಾಮೀಣ ಮಹಿಳೆಯಾದ ಅಕ್ಕಿ ಗಿರಿಜಮ್ಮ ಅವರ ಬದುಕು ಇದಕ್ಕೆ ದಾರಿದೀಪ. ಯಾವುದೇ ದೊಡ್ಡ ಅಕಾಡೆಮಿಕ್ ಶಿಕ್ಷಣವಿಲ್ಲದಿದ್ದರೂ, ಕೇವಲ ಕಠಿಣ ಪರಿಶ್ರಮ ಮತ್ತು ಪ್ರಕೃತಿಯ ಮೇಲಿನ ಅದಮ್ಯ ಪ್ರೀತಿಯಿಂದಾಗಿ ಅವರು ಅಳಿದು ಹೋಗುತ್ತಿದ್ದ ನೂರಾರು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿದ್ದಾರೆ. ಮಣ್ಣಿನ ಗುಣವನ್ನು ಅರಿತು, ಹಗಲಿರುಳು ಗದ್ದೆಗಳಲ್ಲಿ ಶ್ರಮಿಸಿದ ಇವರ ಕಠಿಣ ಶ್ರಮ ಇಂದು ಇವರನ್ನು ಇಡೀ ರಾಜ್ಯವೇ ಹೆಮ್ಮೆಪಡುವ “ಬೀಜ ಮಾತೆ”ಯನ್ನಾಗಿ ಮಾಡಿದೆ.
ಆರ್ಥಿಕ ಸಂಕಷ್ಟ
ಇದೇ ಹಾದಿಯಲ್ಲಿ ಕರಾವಳಿಯ ಕಡೆ ಮುಖ ಮಾಡಿದರೆ, ಉತ್ತರ ಕನ್ನಡ ಜಿಲ್ಲೆಯ ಕಮಲಾಕ್ಷಿ ಜಿ. ಕಾವಲ್ ಅವರ ಹೋರಾಟ ಕಣ್ಣಿಗೆ ಕಟ್ಟುತ್ತದೆ. ತೀವ್ರ ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ಸವಾಲುಗಳ ನಡುವೆಯೂ ಅವರು ಕಾರವಾರದ ಸಾಂಪ್ರದಾಯಿಕ ಕರಕುಶಲ ಕಲೆ ಅಳಿಯದಂತೆ ಕಾವಲು ಕಾಯ್ದರು. ಕಲೆಗಾಗಿ ಹಗಲಿರುಳು ಶ್ರಮಿಸಿದ ಇವರು, ಸ್ವತಃ ಕಷ್ಟಪಟ್ಟು ಹಳೆಯ ಕಲಾ ಪ್ರಕಾರಗಳನ್ನು ಕರಗತ ಮಾಡಿಕೊಂಡಿದ್ದಲ್ಲದೆ, ಇಂದು ನೂರಾರು ಗ್ರಾಮೀಣ ಮಹಿಳೆಯರಿಗೆ ಉಚಿತ ತರಬೇತಿ ನೀಡಿ, ಅವರಿಗೆ ಗೌರವಾನ್ವಿತ ಉದ್ಯೋಗ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕಿನ ಜಾದೂ ತೋರಿಸಿದ್ದಾರೆ.
ಬೆವರಿನ ಹನಿ
ಮತ್ತೊಂದೆಡೆ, ಸದಾ ಬರಡಾಗಿರುವ ಕೋಲಾರದ ಮಣ್ಣಿನಲ್ಲಿ ಕೃಷಿ ಕ್ರಾಂತಿ ಮಾಡಿದ ಅಮರಶೇಠ್ ಅವರ ಕಥೆ ನಮಗೆ ಮಣ್ಣಿನ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ. ನೀರಿಲ್ಲದ ಊರಿನಲ್ಲಿ ಕೇವಲ ಕಠಿಣ ಪರಿಶ್ರಮ, ವೈಜ್ಞಾನಿಕ ಜಲ ಮರುಪೂರಣ ತಂತ್ರಜ್ಞಾನ ಮತ್ತು ಅಚಲವಾದ ದೃಢಸಂಕಲ್ಪವನ್ನು ಬಂಡವಾಳವಾಗಿಸಿಕೊಂಡು, ಇಡೀ ಒಣ ಭೂಮಿಯನ್ನು ನಂದನವನವನ್ನಾಗಿ ಪರಿವರ್ತಿಸಿದರು. ಮಳೆ ಕೈಕೊಟ್ಟರೂ, ಸಾಲದ ಹೊರೆ ಹೆಗಲಿಗೇರಿದರೂ ಧೃತಿಗೆಡದೆ ಬೆವರಿನ ಹನಿಗಳಿಂದ ಮಣ್ಣನ್ನೇ ನಂಬಿ ಜಯಿಸಬಹುದು ಎಂದು ತೋರಿಸಿಕೊಟ್ಟ ಈ ಕೃಷಿ ಯೋಗಿಯ ಶ್ರಮ ನಿಜಕ್ಕೂ ಅನನ್ಯ ಹಾಗೂ ಪ್ರೇರಣಾದಾಯಕ.

ಗೆಲುವಿನ ನಡೆ
ನಿಮ್ಮ ಗುರಿ ಏನೇ ಇರಲಿ—ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವುದು, ಹೊಸ ಉದ್ಯಮ ಆರಂಭಿಸುವುದು ಅಥವಾ ಉತ್ತಮ ಕ್ರೀಡಾಪಟುವಾಗುವುದು—ಅದಕ್ಕೆ ಶಾರ್ಟ್ಕಟ್ ಇಲ್ಲವೇ ಇಲ್ಲ. ಅಮೆರಿಕದ ಪ್ರಸಿದ್ಧ ಲೇಖಕ ಕಾಲಿನ್ ಪೋವೆಲ್ ಹೇಳಿದಂತೆ: “ಯಶಸ್ಸು ಎಂಬುದು ಮಂತ್ರದಂಡದಿಂದ ಸಿಗುವಂಥದ್ದಲ್ಲ; ಅದು ಬೆವರು, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದ ಫಲ.” “ನೀವು ಸೋತಾಗ ಜಗತ್ತು ನಿಮ್ಮನ್ನು ನಿರಾಕರಿಸಬಹುದು. ಆದರೆ, ನಿಮ್ಮ ಪರಿಶ್ರಮದ ಮೇಲೆ ನಿಮಗೆ ನಂಬಿಕೆಯಿದ್ದರೆ, ಅದೇ ಜಗತ್ತು ಒಂದು ದಿನ ನಿಮ್ಮ ಮುಂದೆ ತಲೆಬಾಗುತ್ತದೆ. ಕಠಿಣ ಪರಿಶ್ರಮ ಎಂದಿಗೂ ಕೈಬಿಡುವುದಿಲ್ಲ, ಅದು ಯಶಸ್ಸಿನ ಮುಖಾಂತರ ಮರಳಿ ಬಂದೇ ಬರುತ್ತದೆ. ನೆನಪಿಡಿ, ಇಂದಿನ ಕಠಿಣ ಪರಿಶ್ರಮವೇ ನಾಳಿನ ನಿಮ್ಮ ಸುಂದರ ಭವಿಷ್ಯದ ಬಂಡವಾಳ. ಇಂದೇ ಶ್ರಮಿಸಲು ಆರಂಭಿಸಿ, ನಾಳಿನ ಯಶಸ್ಸು ಖಂಡಿತ ನಿಮ್ಮದಾಗುತ್ತದೆ!


