ಮುದ್ದೇಬಿಹಾಳದಲ್ಲಿ ಶ್ರೀ ಬಲಮುರಿ ಗಜಾನನ, ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಮ್ಮ ದೇಶದಲ್ಲಿ ಪ್ರತಿಯೊಂದು ಧರ್ಮದ ಜನಾಂಗದವರು ದೇವರ ಬಗ್ಗೆ ತಮ್ಮದೇ ಆದ ಭಕ್ತಿ–ಭಾವ ಹೊಂದಿದ್ದಾರೆ. ಆದರೆ ಸದ್ಯದ ದಿನಮಾನಗಳಲ್ಲಿ ಕೆಲವರು ದೇವಸ್ಥಾನಗಳಿಗೆ ಹೋಗಬಾರದು, ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಎಂಬ ಮನೋಭಾವವನ್ನು ಜನಸಾಮಾನ್ಯರಲ್ಲಿ ಬಿತ್ತುತ್ತಾ ಅಸಹನೆ ಮೂಡಿಸುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ಎಸ್.ಬಿ. ಕನ್ನೂರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಶ್ರೀ ಬಲಮುರಿ ಗಜಾನನ, ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿ ಅವರು ಮಾತನಾಡಿದರು.
ಧರ್ಮವೆಂಬುದು ಪ್ರತಿಯೊಬ್ಬರ ವೈಯಕ್ತಿಕ ನಂಬಿಕೆ ಮತ್ತು ಭಾವನೆಯ ವಿಚಾರ. ಒಬ್ಬರ ನಂಬಿಕೆಯನ್ನು ಮತ್ತೊಬ್ಬರು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಸಂವಿಧಾನವೂ ಪ್ರತಿಯೊಬ್ಬರಿಗೂ ತನ್ನ ಧರ್ಮವನ್ನು ನಂಬುವ, ಆಚರಿಸುವ ಸ್ವಾತಂತ್ರ್ಯವನ್ನು ನೀಡಿದೆ. ಒಂದು ಧರ್ಮದ ಆಚರಣೆಯನ್ನು ಪ್ರಶ್ನಿಸುವ ಅಥವಾ ಮತ್ತೊಂದು ಧರ್ಮದ ಜನರ ನಂಬಿಕೆಯನ್ನು ಕೀಳಾಗಿ ಕಾಣುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುವುದಿಲ್ಲ. ಬದಲಾಗಿ ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದರಿಂದ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಗಟ್ಟಿಯಾಗುತ್ತದೆ ಎಂದು ಹೇಳಿದರು.
ಮುಖಂಡ ಉದಯ ರಾಯಚೂರ, ನಿವೃತ್ತ ಶಿಕ್ಷಕ ಬಿ.ಎಸ್.ಚಳಗೇರಿ ಮಾತನಾಡಿದರು.
ಅಂದು ಬೆಳಗಿನ ಜಾವ ೫ ಗಂಟೆಗೆ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಸವು ತಂಗಡಗಿಯ ಕೃಷ್ಣಾ ನದಿಗೆ ಗಂಗಾಪೂಜೆಗೆ ತೆರಳಿತು. ಇತ್ತ ದೇವಸ್ಥಾನದಲ್ಲಿ ಮೂಲಮೂರ್ತಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಗಂಗಾಸ್ಥಳದಿಂದ ಮರಳಿದ ಕಳಸ ಹಾಗೂ ಪಲ್ಲಕ್ಕಿಯನ್ನು ಪಟ್ಟಣದ ಶ್ರೀ ಪಿಲೇಕಮ್ಮದೇವಿ ದೇವಸ್ಥಾನದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಕಲ ವಾದ್ಯವೈಭವಗಳೊಂದಿಗೆ ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.
ಈ ವೇಳೆ ಪುರವಂತರಾದ ಅಪ್ಪು ಸಿದ್ದಾಪೂರ, ಗುರಯ್ಯ ಮುದ್ನೂಮಠ, ಶಶಿಕಾಂತ ಮುತ್ತಗಿ, ಕಾಂತು ಹೆಬ್ಬಾಳ, ಆನಂದ ಪತ್ತಾರ, ನಾಗು ಸಿದ್ದಾಪೂರ, ಚಂದ್ರಶೇಖರ ಪ್ಯಾಟಿಗೌಡರ ಹಾಗೂ ರುದ್ರಯ್ಯ ಹಿರೇಮಠ ಅವರು ಶ್ರೀ ವೀರಭದ್ರೇಶ್ವರರ ವಡಪುಗಳನ್ನು ಹೇಳುತ್ತ, ಸ್ವಾಮಿಯ ಮಹಿಮೆಯನ್ನು ಕೊಂಡಾಡಿ ಭಕ್ತಿಭಾವ ಸಮರ್ಪಿಸಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಭಕ್ತರಿಗೆ ಅನ್ನಪ್ರಸಾದ ಸೇವೆ ಏರ್ಪಡಿಸಿದ್ದರು. ಬಳಿಕ ವಿಧಿವಿಧಾನಗಳೊಂದಿಗೆ ಕಳಸವನ್ನು ದೇವಸ್ಥಾನದ ಶಿಖರಕ್ಕೇರಿಸಲಾಯಿತು.
ಅರ್ಚಕ ಸಿದ್ದಯ್ಯ ಮಹಾಂತಯ್ಯನಮಠ ಅವರು ವೀರಭದ್ರರ ಮೂಲಮೂರ್ತಿಯನ್ನು ವಿಶೇಷವಾಗಿ ಹೂ ಮಾಲೆಗಳೊಂದಿಗೆ ಅಲಂಕರಿಸಿ ಕಂಗೊಳಿಸುವಂತೆ ಮಾಡಿದ್ದರು.
ಜಾತ್ರಾಮಹೋತ್ಸವದಲ್ಲಿ ಪ್ರಮುಖರಾದ ಮಹಾಂತಪ್ಪ ನಾವದಗಿ, ಶ್ರೀಶೈಲ ಅಮರಣ್ಣವರ, ಸಿದ್ದಣ್ಣ ಹಳ್ಳೂರ, ಅಮರಪ್ಪ ಮೋಟಗಿ, ಬಸವರಾಜ ನಾಶಿ ಸೇರಿದಂತೆ ಅಧಿಕ ಭಕ್ತರು ಪಾಲ್ಗೊಂಡಿದ್ದರು.

