ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಹೃದಯ ವಿದ್ರಾವಕ ಘಟನೆ | ಸಾವಿನ ಬಗ್ಗೆ ಅನುಮಾನ ವ್ಯಕ್ತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತೋಟದ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿದ್ದು, ಮಕ್ಕಳ ತಂದೆ ಸಾಬಣ್ಣ (40) ನಾಪತ್ತೆಯಾಗಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತ ಬಾಲಕಿಯರನ್ನು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಸಾಕ್ಷಿ ಹಾಗೂ 10 ವರ್ಷದ ರಕ್ಷಿತಾ (10) ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕಿಯರು ನಿನ್ನೆ ಸಂಜೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ ವೇಳೆ ತಡರಾತ್ರಿ ಬಾವಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆಯಲ್ಲಿ ಸಾಬಣ್ಣ ಅವರ ಪತ್ನಿ ಲಕ್ಷ್ಮೀಬಾಯಿ ಇಬ್ಬರು ಮಕ್ಕಳನ್ನು ಕರೆದುಕೊಂಡು ತಮ್ಮ ಸಹೋದರನ ಮನೆಗೆ ತೆರಳಿದ್ದರು. ಮತ್ತೊಂದು ಮಗುವನ್ನು ಅಜ್ಜ-ಅಜ್ಜಿಯ ಬಳಿ ಬಿಟ್ಟಿದ್ದರು. ಸಾಕ್ಷಿ ಹಾಗೂ ರಕ್ಷಿತಾ ಇಬ್ಬರನ್ನು ತಂದೆ ಸಾಬಣ್ಣ ಅವರೊಂದಿಗೆ ತೋಟದ ಮನೆಯಲ್ಲೇ ಬಿಟ್ಟು ಹೋಗಿದ್ದರು.
ಪೂಜೆ ಮುಗಿಸಿ ಸಂಜೆ ಮನೆಗೆ ಮರಳಿದಾಗ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಕಾಣಿಸಿರಲಿಲ್ಲ. ಈ ಬಗ್ಗೆ ಲಕ್ಷ್ಮೀಬಾಯಿ ತಮ್ಮ ಸಹೋದರ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರೂ ತೋಟದ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾವಿಯ ಬಳಿ ಸಾಬಣ್ಣ ಅವರ ಬಟ್ಟೆಗಳು ಪತ್ತೆಯಾಗಿವೆ.
ಬಟ್ಟೆಗಳನ್ನು ಆಧರಿಸಿ ಬಾವಿಯಲ್ಲಿ ಶೋಧ ನಡೆಸಿದಾಗ ತಡರಾತ್ರಿ ಇಬ್ಬರು ಬಾಲಕಿಯರ ಶವಗಳು ಪತ್ತೆಯಾಗಿವೆ. ಬಾವಿಯ ನೀರನ್ನು ಹೊರತೆಗೆದು ಶೋಧ ನಡೆಸಿದರೂ ಸಾಬಣ್ಣ ಮಾತ್ರ ಪತ್ತೆಯಾಗಿಲ್ಲ. ಸದ್ಯ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಾವಿಗೆ ಯಾವುದೇ ತಡೆಗೋಡೆ ಇಲ್ಲದಿರುವುದರಿಂದ ಕಾಲು ಜಾರಿ ಇಬ್ಬರು ಮಕ್ಕಳು ಬಾವಿಗೆ ಬಿದ್ದಿರಬಹುದೇ ಎಂಬ ಶಂಕೆ ಒಂದೆಡೆಯಾದರೆ, ಮಕ್ಕಳನ್ನು ರಕ್ಷಿಸಲು ಸಾಬಣ್ಣ ಬಾವಿಗೆ ಜಿಗಿದು ನಾಪತ್ತೆಯಾಗಿರಬಹುದೇ ಎಂಬ ಅನುಮಾನವೂ ಇದೆ.
ಇದೇ ವೇಳೆ ಕುಟುಂಬದಲ್ಲಿ ಯಾವುದಾದರೂ ಕಲಹವಿತ್ತೇ? ಸಾಬಣ್ಣ ಅವರೇ ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ನಾಪತ್ತೆಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಬಣ್ಣ ಅವರ ಪತ್ನಿ ಲಕ್ಷ್ಮೀಬಾಯಿ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆಯ ನಿಜವಾದ ಕಾರಣ ಸಾಬಣ್ಣ ಪತ್ತೆಯಾದ ಬಳಿಕವೇ ತಿಳಿದುಬರಲಿದೆ. ಸದ್ಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಇಬ್ಬರು ಬಾಲಕಿಯರ ದುರಂತ ಅಂತ್ಯಕ್ಕೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕಣ್ಣೀರಾಗಿದ್ದಾರೆ.

