ಏಕಾಏಕಿ ದುಬಾರಿಯಾಗಿರುವ ಸಕ್ಕರೆ ದರ | ಗ್ರಾಹಕರ ಜೇಬಿಗೆ ಕತ್ತರಿ | ದರ ನಿಯಂತ್ರಣಕ್ಕೆ ಗ್ರಾಹಕರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಬಾಗಲಕೋಟೆˌ (ಜಮಖಂಡಿ): ಸಕ್ಕರೆ ಎಂದರೆ ಸಿಹಿ; ಆದರೆ ಇತ್ತೀಚಿನ ಬೆಲೆ ಏರಿಕೆ ಮಾತ್ರ ಗ್ರಾಹಕರ ಪಾಲಿಗೆ ಕಹಿಯಾಗತೊಡಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಸಕ್ಕರೆ ದರ 70ರ ಗಡಿ ತಲುಪಿದ್ದು, ಸಾಮಾನ್ಯ ಜನರ ದಿನಸಿ ಬಜೆಟ್ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಕೆಲವೇ ದಿನಗಳ ಅಂತರದಲ್ಲಿ 15ರಿಂದ 20ರಷ್ಟು ದರ ಏರಿಕೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದಲ್ಲಿ 65ರಿಂದ 70ರ ವರೆಗೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ 75ರಿಂದ 80ರ ವರೆಗೆ ಸಕ್ಕರೆ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ.

ಒಂದು ವರ್ಷದ ಹಿಂದೆ ಕೆ.ಜಿ.ಗೆ 40ರಿಂದ 45ರ ಆಸುಪಾಸಿನಲ್ಲಿದ್ದ ಸಕ್ಕರೆ ದರ, ನಂತರ 50ರ ಗಡಿ ದಾಟಿತ್ತು. ಕಳೆದ ವಾರದವರೆಗೂ 50ರಿಂದ 55ರ ವರೆಗೆ ಲಭ್ಯವಾಗುತ್ತಿದ್ದ ಸಕ್ಕರೆ ಇದೀಗ ಏಕಾಏಕಿ ದುಬಾರಿಯಾಗಿರುವುದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಕಳೆದ ಎರಡು–ಮೂರು ದಿನಗಳಲ್ಲಿ ದರದಲ್ಲಿ ಕಂಡುಬಂದಿರುವ ತೀವ್ರ ಏರಿಕೆ ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ಎತ್ತಿ ತೋರಿಸಿದೆ.
ದೇಶದ ಮಾರುಕಟ್ಟೆಯಲ್ಲೂ ಏರಿಕೆಯ ಒತ್ತಡ
ಸ್ಥಳೀಯ ಮಾರುಕಟ್ಟೆಯಲ್ಲಿನ 70ರ ದರವು ದೇಶದ ಸರಾಸರಿ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಬೆಲೆ ಮೇಲ್ವಿಚಾರಣಾ ವ್ಯವಸ್ಥೆಯ ಪ್ರಕಾರ ಆ.21ರಂದು ದೇಶದ ಸರಾಸರಿ ಚಿಲ್ಲರೆ ಸಕ್ಕರೆ ದರ 58.23ರಷ್ಟಿತ್ತು. ದೇಶದ ಸಕ್ಕರೆ ಮಾರುಕಟ್ಟೆಯಲ್ಲಿ ಸರಬರಾಜಿನ ಒತ್ತಡ ಮತ್ತು ಹಬ್ಬದ ಪೂರ್ವ ಬೇಡಿಕೆಯ ಪರಿಣಾಮ ಬೆಲೆ ಏರಿಕೆ ಕಂಡುಬಂದಿದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಸಕ್ಕರೆ ಬೆಲೆಗಳು ಸುಮಾರು ಶೇ.40ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ.
ದರ ಏರಿಕೆಗೆ ಕಾರಣವೇನು?: ಸಕ್ಕರೆ ದರ ಏರಿಕೆಗೆ ಕಡಿಮೆಯಾದ ಉತ್ಪಾದನೆ, ಕೆಲವು ಭಾಗಗಳಲ್ಲಿ ಹವಾಮಾನದಿಂದ ಕಬ್ಬು ಬೆಳೆಗೆ ಉಂಟಾದ ಪರಿಣಾಮ, ಸೀಮಿತ ಮಾರುಕಟ್ಟೆ ಸರಬರಾಜು ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಸೇರಿದಂತೆ ಹಲವು ಅಂಶಗಳು ಕಾರಣವಾಗಿವೆ ಎಂದು ಮಾರುಕಟ್ಟೆ ವರದಿಗಳು ಸೂಚಿಸುತ್ತಿವೆ. ಆದರೆ ಸಕ್ಕರೆ ದರ ಏರಿಕೆಯನ್ನು ಕೇವಲ ಇಥೆನಾಲ್ ಉತ್ಪಾದನೆಗೆ ಕಬ್ಬು ತಿರುಗಿಸಿರುವುದರಿಂದಾಗಿದೆ ಎಂದು ಹೇಳಲು ಸಾಧ್ಯವಿಲ್ಲ;
ಇದರ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಿ ಬೆಲೆ ಇಳಿಕೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಆಮದು ಅಕ್ಟೋಬರ್ 31ರವರೆಗೆ ನಡೆಯಲಿದೆ. ಆದರೆ ಆಮದು ಮಾಡಿದ ಕಚ್ಚಾ ಸಕ್ಕರೆ ಶುದ್ಧೀಕರಣಗೊಂಡು ಮಾರುಕಟ್ಟೆಗೆ ಬರಲು ಸಮಯ ಬೇಕಾಗಿರುವುದರಿಂದ ಇದರ ತಕ್ಷಣದ ಪರಿಣಾಮ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಈಗಾಗಲೇ ಬೇಳೆ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ವಿವಿಧ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಸಕ್ಕರೆ ದರದ ಹೆಚ್ಚಳ ಮತ್ತೊಂದು ಆರ್ಥಿಕ ಹೊರೆ ತಂದಿದೆ. ಒಟ್ಟಿನಲ್ಲಿ, ದೇಶದಾದ್ಯಂತ ಸಕ್ಕರೆ ಬೆಲೆ ಏರಿಕೆಯ ಒತ್ತಡದ ನಡುವೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 70 ತಲುಪಿರುವ ದರ ಸಾಮಾನ್ಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ದರ ನಿಯಂತ್ರಣಕ್ಕೆ ಗ್ರಾಹಕರ ಆಗ್ರಹ
ಸ್ಥಳೀಯ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏಕಾಏಕಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ದರಗಳ ಮೇಲೆ ನಿಗಾ ವಹಿಸಬೇಕು. ವ್ಯಾಪಾರಿಗಳು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆಯೇ, ಕೃತಕ ದಾಸ್ತಾನು ಅಥವಾ ಕಾಳಸಂತೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಕ್ಕರೆ ದರ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾರುಕಟ್ಟೆಯಲ್ಲಿ ಸಮರ್ಪಕ ಸರಬರಾಜು ಖಚಿತಪಡಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.
ಹೋಟೆಲ್–ಸಿಹಿತಿನಿಸು ಉದ್ಯಮಕ್ಕೂ ಬಿಸಿ
ಸಕ್ಕರೆ ದರ ಏರಿಕೆಯ ಪರಿಣಾಮ ಹೋಟೆಲ್, ಬೇಕರಿ, ಚಹಾ–ಕಾಫಿ ಅಂಗಡಿ ಹಾಗೂ ಸಿಹಿತಿನಿಸು ತಯಾರಿಕಾ ಉದ್ಯಮಗಳ ಮೇಲೂ ಬೀಳಲಿದೆ. ಸಕ್ಕರೆ ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ ಅದರ ಬೆಲೆ ಹೆಚ್ಚಾದಂತೆ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಹಾ, ಕಾಫಿ, ಸಿಹಿತಿನಿಸು ಸೇರಿದಂತೆ ಕೆಲವು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

