ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ಜೀವದಾನ ಮಾಡಿದಂತಾಗುತ್ತದೆ. ಜೀವ ಉಳಿಸುವಲ್ಲಿ ರಕ್ತ ಅತ್ಯಮೂಲ್ಯವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಸುರೇಶ ಚವಲರ ಹೇಳಿದರು.
ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರಿಂದ ದೇಶ ಸದೃಢವಾಗುತ್ತದೆ. ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಪ್ರಮುಖವಾದುದು. ರಕ್ತದಾನ ಮಾಡುವ ಮೂಲಕ ಯುವಕರು ಮಾನವೀಯ ಸೇವೆಯ ಜೊತೆಗೆ ಮತ್ತೊಂದು ಕುಟುಂಬದ ಬದುಕಿಗೆ ಆಸರೆಯಾಗಬಹುದು ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಘು ನಡುವಿನಮನಿ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಭಾಗವಹಿಸಿ, ಯುವಕರಿಗೆ ಮಾದರಿಯಾದರು. ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು.
ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗುರುಪಾದ ದಾಸ್ಯಾಳ ಮಾತನಾಡಿ ಪಟ್ಟಣದಲ್ಲಿ ರೈತ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ರಕ್ತವು ಒಂದು ಜೀವವನ್ನು ಉಳಿಸುವ ಶಕ್ತಿ ಹೊಂದಿದೆ. ಆದ್ದರಿಂದ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಯುವಕರು ವರ್ಷದಲ್ಲಿ ಕನಿಷ್ಠ ಒಂದೆರಡು ಬಾರಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಆಲ್ ಅಮೀನ್ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ. ಇಬ್ರಾಹಿಂ ನಾಗನೂರ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರು ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಅದೇ ರೀತಿ ರಕ್ತನಿಧಿ ಕೇಂದ್ರ ವಿಜಯಪುರದ ನಾಗರಾಜ ಪೂಜಾರಿ ಹಾಗೂ ವಿನಾಯಕ ಹಿರೇಮಠ ಅವರ ಸಹಯೋಗದಲ್ಲಿ ರಕ್ತ ಸಂಗ್ರಹಣಾ ಕಾರ್ಯ ನಡೆಯಿತು. ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆ.ಎಂ. ಪಾಟೀಲ, ಪಿಎಸ್ಐ ದೇವರಾಜ ಉಳ್ಳಾಗಡ್ಡಿ, ನೀರಾವರಿ ಇಲಾಖೆಯ ಅಧಿಕಾರಿ ಅಂಬಣ್ಣ ಹರಳಯ್ಯ, ರೈತ ಸಂಘದ ಮಹಿಳಾ ತಾಲ್ಲೂಕ ಅಧ್ಯಕ್ಷೆ ಸಂಗೀತಾ ರಾಠೋಡ, ಸುರೇಶ ಕೊಣ್ಣೂರ, ರವಿಕಿರಣ ಹೊಸೂರ, ಮೋಬೀನ ಅಪರಾದ, ಗಣೇಶ ದಳವಾಯಿ, ಸಂತೋಷ ತಾಳಿಕೋಟಿ, ಜಾವೀದ್ ಮುಜಾವರ, ಆರ್.ಬಿ. ದೇಸಾಯಿ, ಬಸಯ್ಯ ವಿಭೂತಿ, ಲೇಪು ಕೊಣ್ಣೂರ, ಚಂದು ತೋರವಿ, ರಾವತ ಕಂಭಾರ ಇದ್ದರು.

