ಮನೆ ಮನೆಗಳಲ್ಲಿ ನಾಗಪ್ಪನಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ | ಪರಸ್ಪರ ಸಿಹಿತಿನಿಸು ಹಂಚಿಕೊಂಡು ಹಬ್ಬದ ಸಂಭ್ರಮ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ, (ಜಮಖಂಡಿ): ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮನೆಯ ನಾಗಪ್ಪನಿಗೆ ಹಾಲೆರೆಯುವುದು, ಅರಿಶಿನ-ಕುಂಕುಮ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವುದು ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ನಾಗದೇವರಿಗೆ ಎಳ್ಳುಂಡೆ, ವಿವಿಧ ಬಗೆಯ ಸಿಹಿತಿನಿಸುಗಳು ಹಾಗೂ ನೈವೇದ್ಯ ಅರ್ಪಿಸಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.
ನಾಗರ ಪಂಚಮಿಯ ವಿಶೇಷತೆಯಾದ ಎಳ್ಳುಂಡೆ, ಕರ್ಜೂರ, ಉಂಡೆ, ಸಿಹಿ ತಿಂಡಿಗಳು ಸೇರಿದಂತೆ ಸಾಂಪ್ರದಾಯಿಕ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ, ನೆರೆಹೊರೆಯವರು ಹಾಗೂ ಬಂಧು-ಬಳಗದವರೊಂದಿಗೆ ಹಂಚಿಕೊಂಡರು. ಮನೆ ಮನೆಗೆ ತೆರಳಿ ಪರಸ್ಪರ ಸಿಹಿತಿನಿಸುಗಳನ್ನು ಕೊಟ್ಟು-ತೆಗೆದುಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಪರಸ್ಪರ ಬಾಂಧವ್ಯವೂ ಮತ್ತಷ್ಟು ಗಟ್ಟಿಯಾಯಿತು.
ಗ್ರಾಮದ ವಿವಿಧ ಮನೆಗಳಲ್ಲಿ ಬೆಳಗ್ಗಿನಿಂದಲೇ ಪೂಜೆ, ನೈವೇದ್ಯ ಹಾಗೂ ಸಿಹಿತಿನಿಸುಗಳ ತಯಾರಿ ನಡೆಯುತ್ತಿದ್ದು, ಮಹಿಳೆಯರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಕಳೆ ಬಂದಿತ್ತು. ಸಂಪ್ರದಾಯ ಮತ್ತು ಭಕ್ತಿಯೊಂದಿಗೆ ಆಚರಿಸಲಾದ ನಾಗರ ಪಂಚಮಿ ಹಬ್ಬವು ಕುಟುಂಬಗಳಲ್ಲಿ ಸಂತಸ ಮೂಡಿಸುವುದರ ಜೊತೆಗೆ ಜನರಲ್ಲಿ ಪರಸ್ಪರ ಪ್ರೀತಿ, ಸ್ನೇಹ ಮತ್ತು ಸಹೋದರತ್ವದ ಭಾವನೆಯನ್ನು ಹೆಚ್ಚಿಸಿತು.
ನಾಗರ ಪಂಚಮಿ ನಮ್ಮ ಸಂಪ್ರದಾಯ
“ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಲ್ಲ; ಇದು ನಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಕುಟುಂಬ ಮತ್ತು ಸಮಾಜದ ನಡುವಿನ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ. ಮನೆಗಳಲ್ಲಿ ಮಕ್ಕಳಿಗೆ ನಮ್ಮ ಆಚರಣೆಗಳ ಮಹತ್ವವನ್ನು ತಿಳಿಸುವುದು ಅಗತ್ಯ” ಎಂದು ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಮಹಿಳೆ ಸುಕನ್ಯಾ ಹನಗಂಡಿ ಎಂಬುವವರು ಅಭಿಪ್ರಾಯಪಟ್ಟರು.
“ಹಬ್ಬದ ಸಂದರ್ಭದಲ್ಲಿ ಮನೆಮಂದಿಯೆಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿ, ಸಿಹಿತಿನಿಸುಗಳನ್ನು ಹಂಚಿಕೊಂಡು ಸಂಭ್ರಮಿಸುವುದು ನಮ್ಮ ಸಂಸ್ಕೃತಿಯ ಸೊಬಗು. ಇಂತಹ ಆಚರಣೆಗಳು ಮುಂದಿನ ಪೀಳಿಗೆಗೂ ನಮ್ಮ ಪರಂಪರೆಯನ್ನು ಪರಿಚಯಿಸುತ್ತವೆ” ಎಂದು ಇನ್ನೊಬ್ಬ ಹಿರಿಯ ಮಹಿಳೆಯೊಬ್ಬರು ಹೇಳಿದರು.

