ನಿಡಗುಂದಿ ಓಂ ಶಾಂತಿ ಶಾಖೆಯ ಬ್ರಹ್ಮಕುಮಾರಿ ಬಿ.ಕೆ.ರೇಣುಕಾ ಅವರಿಂದ ಮಕ್ಕಳಿಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸ್ವಾಸ್ಥ್ಯಭರಿತ ನಾಗರಿಕ ಸಮಾಜ ನಿಮಾ೯ಣಕ್ಕೆ ಯುವಜನತೆ ಮುಂದಾಗಬೇಕು.ತಮ್ಮ ಮನಸಿನ ಆಮಲು ಮತ್ತೇರಿಸುವ ಚಟಾದಿಗಳ ಮೋಹದ ಪ್ರಬಲತೆಯನ್ನು ದಿಟ್ಟತೆಯ ಸ್ವಸ್ಥತೆಯಿಂದ ನಿಯಂತ್ರಿಸಬೇಕು. ಶುಭ್ರ, ಶುದ್ಧತೆವುಳ್ಳ ವ್ಯಕ್ತಿತ್ವ ತಮ್ಮದಾಗಿಸಿಕೊಂಡು ಸಾಗಬೇಕು. ಮಾದಕ ವ್ಯಸನದ ಚಟಗಳಿಗೆ ಅಂಟಿಕೊಳ್ಳದೇ, ಅವಗುಣಗಳಿಗೆ ವಶವಾಗದೇ ದೈಹಿಕ ಹಾಗೂ ಮಾನಸಿಕ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಮೂಲಕ ಬದುಕಿನ ಚೈತ್ರ ಪಥ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ನಿಡಗುಂದಿ ಓಂ ಶಾಂತಿ ಶಾಖೆಯ ಬ್ರಹ್ಮಕುಮಾರಿ ಬಿ.ಕೆ.ರೇಣುಕಾ ಹೇಳಿದರು.
ಇಲ್ಲಿನ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನಿಡಗುಂದಿ ಶಾಖಾ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ ೧೦ ಕೋಟಿ ನಶೆ ಮುಕ್ತ ಮಹಾ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಇಂದಿನ ಯುವಜನಾಂಗದಲ್ಲಿ ಮಾದಕ ದ್ರವ್ಯದ ಬಳಕೆಯು ಹೆಚ್ಚಾಗುತ್ತಲಿದೆ. ಪರಿಣಾಮ ಸಾಮಾಜಿಕ, ಮಾನಸಿಕ, ದೈಹಿಕ ಸಮಸ್ಯೆಗಳು ತೀವ್ರಗೊಳ್ಳುತ್ತಲಿವೆ. ನಶೆವೆಂಬ ಚಟ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ ಎಂದರು.
ಡ್ರಗ್ಸ್ ಪಿಡುಗು ಯುವ ಜನತೆಯ ಮನಸ್ಥಿತಿಗೆ ಕಂಟಕವಾಗಿದೆ. ಅವರನ್ನು ದಾರಿ ತಪ್ಪಿಸಿ ಕೆಂಗಡಿಸುತ್ತಿದೆ. ಜೀವನ ತಲ್ಲಣಗೊಳಿಸುತ್ತಿದೆ. ಕಂಡ ಕನಸುಗಳನ್ನು ನೂಚ್ಚು ನೂರು ಮಾಡಿ ನೆಮ್ಮದಿ, ಆಥಿ೯ಕ ಸ್ಥಿತಿ ಹದಗೆಡಿಸುತ್ತಿದೆ ಅಲ್ಲದೇ ಅಪರಾಧ ಚಟುವಟಿಕೆಗಳಿಗೆ ನುಗ್ಗುವಂತೆ ಉತ್ತೇಜಿಸುತ್ತಿದೆ. ಕಾರಣ ಮಾದಕ ವಸ್ತುಗಳ ಮೋಹಕ್ಕೆ ಪ್ರಭಾವಿತರಾಗಬೇಡಿ. ಸೇವನೆಗೆ ಒಳಗಾದರೆ ಹಾನಿಕರ ಪರಿಣಾಮಗಳನ್ನು ಎದುರಿಸಬೇಕಾದೀತು. ದುಶ್ಚಟಗಳನ್ನು ಬದಿಗೊತ್ತಿ ಆರೋಗ್ಯಕರ ಅಭ್ಯಾಸಗಳು ರೂಢಿಸಿಕೊಳ್ಳಬೇಕು. ಜವಾಬ್ದಾರಿಯುತ ನಿಲುವುಗಳೊಂದಿಗೆ ಮೊದಲು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೃಢ ಸಂಕಲ್ಪಕ್ಕೆ ಮುಂದಾಗಬೇಕು ಎಂದು ಬ್ರಹ್ಮಾಕುಮಾರಿ ರೇಣುಕಾ ನುಡಿದರು.
ಈ ನಶಾ ಮುಕ್ತ ಮಹಾ ಅಭಿಯಾನವು ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ರಕ್ಷಿಸುವ ಮಹೋನ್ನತ ಜಾಗೃತಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಬಸವರಾಜ ಹಡಪದ, ಗುಲಾಬಚಂದ ಜಾಧವ, ಕರುಣಿಕ ಸಚೀನ ಹೆಬ್ಬಾಳ, ಓಂ ಶಾಂತಿ ನಿಡಗುಂದಿ ಆಶ್ರಮದ ವಿಜಯಲಕ್ಷ್ಮೀ ಮುಚ್ಚಂಡಿ ಇತರರಿದ್ದರು.

