ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ನೀರಿನ ಮಾದರಿ ಸಂಗ್ರಹ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಜೀವನಾಡಿ ತಾರಕಾ ಮತ್ತು ಕಪಿಲಾ ನದಿಗೆ ಕಲುಷಿತ ನೀರು ಸೇರ್ಪಡೆ ಆರೋಪ ಸಂಬಂಧ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೋಮವಾರ ತಾಲೂಕಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಗ್ರಾಮಾಂತರ ಪರಿಸರ ಇಲಾಖಾಧಿಕಾರಿ ಜಯಲಕ್ಷ್ಮಿ ನೇತೃತ್ವದ ತಂಡ ತಾಲೂಕಿಗೆ ಆಗಮಿಸಿ ಕಲುಷಿತ ನೀರು ಸೇರ್ಪಡೆ ಆಗುವ ಸ್ಥಳಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿತ್ತು. ಪಟ್ಟಣದ ಒಂದನೇ ವಾರ್ಡ್, ಮುಸ್ಲಿಂ ಬ್ಲಾಕ್ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಹಳೆ ಸೇತುವೆ ಕಾಲುವೆಯಲ್ಲಿ ನೀರಿನ ಮಾದರಿ ಸಂಗ್ರಹಿಸಿತ್ತು. ಬಳಿಕ ತಾರಕ ನದಿಯ ಬಲದಂಡೆ ನಾಲೆಗೆ ಸೇರುತ್ತಿರುವ ಹೈರಿಗೆ ಗ್ರಾಮ ಮತ್ತು ತಾರಕ ಮತ್ತು ಕಬಿನಿ ನೀರು ಸೇರುವ ಹೆಚ್ ಮಟಕೆರೆ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಮೀಪ ನಾಲೆಯಲ್ಲಿ ನೀರು ಸಂಗ್ರಹಿಸಿತ್ತು
ಜಯಲಕ್ಷ್ಮಿ ಮಾತನಾಡಿ, ಹೆಚ್ ಡಿ ಕೋಟೆ ಪಟ್ಟಣದಲ್ಲಿ ಮೂರು ಕಡೆ ಹಾಗೂ ಎರಡು ಗ್ರಾಮಗಳಲ್ಲಿ ಕಲುಷಿತ ನೀರಿನ ಮಾದರಿ ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಮೇಲ್ನೋಟಕ್ಕೆ ನದಿಗಳಿಗೆ ಕಲುಷಿತ ನೀರು ಸೇರುತ್ತಿರುವುದು ಕಂಡುಬಂದಿದೆ. ಪ್ರಯೋಗಾಲಯದಿಂದ ರಿಪೋರ್ಟ್ ಬರಲು 15 ರಿಂದ ಒಂದು ತಿಂಗಳು ಬೇಕಾಗುತ್ತೆ. ಅವರು ರಿಪೋರ್ಟ್ ಕಳಿಸಿದ ತಕ್ಷಣ, ಜಿಲ್ಲಾಧಿಕಾರಿ ಸೇರಿದಂತೆ ನಮ್ಮ ಮೇಲಿನ ಅಧಿಕಾರಿಗೆ ವರದಿ ನೀಡುತ್ತೇವೆ. ನಂತರ ವರದಿ ಆಧರಿಸಿ ಅಧಿಕಾರಿಗಳು ಕಲುಷಿತ ನೀರು, ನದಿಯ ಮೂಲಗಳಿಗೆ ಹರಿಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ತಾರಕ ಮತ್ತು ಕಬಿನಿ ನದಿಗಳಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಿಂದ ವಿಚಾರ ತಿಳಿದು ಬಂತು. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ, ನೀರಿನ ಮಾದರಿ ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ವರದಿ ಬಂದ ಬಳಿಕ ಮೇಲಧಿಕಾರಿಗಳು ನೀಡುವ ಮಾರ್ಗಸೂಚಿ ಪ್ರಕಾರ ಕಲುಷಿತ ನೀರು ಸೇರದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ತಾರಕ ಎಇಇ ನಟಶೇಖರ್ ಮೂರ್ತಿ ಮಾತನಾಡಿ, ಹೆಚ್ ಡಿ ಕೋಟೆ ತಾಲೂಕಿನಲ್ಲಿ ಹರಿಯುತ್ತಿರುವ ತಾರಕ ಮತ್ತು ಹೆಬ್ಬಾಳ ಜಲಾಶಯದ ನಾಲೆಗಳಿಗೆ ಪಟ್ಟಣದ ಚರಂಡಿ ನೀರು ಸೇರುತ್ತಿದ್ದು, ಈ ಸಂಬಂಧ ಗ್ರಾಮ ಪಂಚಾಯತ್ ಅಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಟಿಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದ್ದೆವು. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ, ಕಲುಷಿತ ನೀರು ಸೇರುತ್ತಿರುವ ಜಾಗಗಳಿಂದ ನೀರಿನ ಮಾದರಿ ಸಂಗ್ರಹಿಸಿದ್ದಾರೆ ಎಂದರು.
ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ಸುರೇಶ್ , ತಾರಕ ಎಇಇ ನಟಶೇಖರ್ ಮೂರ್ತಿ ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ ಹಾಜರಿದ್ದರು.

