ಕೆಬಿಜೆಎನ್ಎಲ್ ಎಂ.ಡಿ ಕೃಷ್ಣಮೂರ್ತಿ ಕುಲಕರ್ಣಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸ್ವಾತಂತ್ರ್ಯದ ನಂತರ ಪ್ರಗತಿಯ ಹಾದಿಯಲ್ಲಿ ಸಾಗಿದ ಭಾರತದ ಅಭಿವೃದ್ಧಿಗೆ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕೊಡುಗೆಯೂ ಸೇರಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
“ಯುಕೆಪಿ ಈ ಭಾಗದ ಜೀವನಾಡಿ”
ಯುಕೆಪಿ ಈ ಭಾಗದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಈಗಾಗಲೇ ಯುಕೆಪಿ ಹಂತ-೧ ಮತ್ತು ಹಂತ-೨ ನ್ನು ಯಶಸ್ವಿಯಾಗಿ ನಿರ್ವಹಿಸಿ ೬ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗಿದೆ. ಈಗ ಹಂತ-೩ ರ ಕಾಮಗಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಸವಾಲು ನಮ್ಮ ಮುಂದಿದೆ ಎಂದು ತಿಳಿಸಿದರು.
ಭಾರತ ಕಲೆ, ಸಂಸ್ಕೃತಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಗತ್ತು ಭಾರತವನ್ನು ಎತ್ತರದ ಸ್ಥಾನದಲ್ಲಿ ನೋಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿ:
ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಬಿ.ಎಸ್. ಪಾಟೀಲ, ಗೋವಿಂದ ರಾಠೋಡ, ಐ.ಎಲ್. ಕಳಸಾ, ಅಮರೇಗೌಡ, ಕೆ.ಜಯಣ್ಣ, ರವಿ ಚಂದ್ರಗಿರಿಯವರ, ಸಹಾಯಕ ಕಮಾಂಡೆಂಟ್ ಈರಪ್ಪ ವಾಲಿ, ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ಐ.ಎಫ್. ಇಂಡಿಕರ, ನಿಸ್ಸಾರ ಪಿಂಜಾರ್, ಸುರೇಶ ಹುರಕಡ್ಡಿ, ಪ್ರಾಂಶುಪಾಲರಾದ ಪಿ.ಎ. ಹೇಮಗಿರಿಮಠ, ಎಚ್.ಎನ್. ಕೆಲೂರ, ಜಿ.ಎಂ. ಕೋಟ್ಯಾಳ, ಎಸ್.ಐ. ಗಿಡ್ಡಪ್ಪಗೋಳ, ಬಿ.ಎಸ್. ಯರವಿನತೆಲಿಮಠ, ಎಂ.ಎಸ್. ಭಂಡಾರಿ, ಕೆ.ಎನ್. ಹಿರೇಮಠ, ಮಹೇಶ ಗಾಳಪ್ಪಗೋಳ, ವೈ.ಎಂ. ಪಾತ್ರೋಟ ಇದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ಡಿಸ್ಪ್ಲೇ ನೃತ್ಯ ಪ್ರದರ್ಶನ ನಡೆಯಿತು.
ಶಾಲೆಯಲ್ಲಿ ಧ್ವಜಾರೋಹಣ
ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ್ ಧ್ವಜಾರೋಹಣ ನೆರವೇರಿಸಿದರು. ಸಿಆರ್ಪಿ ಸುರೇಶ ಹುರಕಡ್ಲಿ, ಮುಖ್ಯ ಶಿಕ್ಷಕ ಬಿ.ಎಸ್. ಯರವಿನತೆಲಿಮಠ, ಗುರುಪೊಲೀಸ್ ಪಾಟೀಲ, ಪರಶುರಾಮ ಮಾದರ, ಪಿ.ಎಚ್. ನಾಯಕ, ಸುನಂದಾ ಹುರಕಡ್ಲಿ ಮತ್ತಿತರರು ಉಪಸ್ಥಿತರಿದ್ದರು.

