ಕಾಖಂಡಕಿಯಲ್ಲಿ ಶ್ರೀ ಹಣಮಂತ ದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಖಂಡಕಿ ಮತ್ತು ಸುತ್ತಮುತ್ತಲಿನ ತಾಣಗಳು ಐತಿಹಾಸಿಕ ಹಿನ್ನೆಲೆಯ ಪುಣ್ಯಭೂಮಿಗಳಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಶ್ರೀ ಹಣಮಂತ ದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಣಮಂತ ದೇವರ ನೂತನ ದೇಗುಲ ನಿರ್ಮಾಣಕ್ಕೆ ಈಗಾಗಲೇ ರೂ. 50 ಲಕ್ಷ ವೈಯಕ್ತಿಕ ದೇಣಿಗೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ರೂ 50 ಲಕ್ಷ ನೆರವು ನೀಡಲಾಗುವುದು. ಒಟ್ಟಾರೆಯಾಗಿ ರೂ. 1 ಕೋಟಿ ದೇಣಿಗೆಯನ್ನು ಈ ಪವಿತ್ರ ಕಾರ್ಯಕ್ಕೆ ಸಮರ್ಪಿಸುತ್ತಿರುವುದು ತೃಪ್ತಿ ತಂದಿದೆ. ಭಕ್ತಿ, ಶ್ರದ್ಧೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಈ ಪವಿತ್ರ ದೇವಾಲಯದ ನಿರ್ಮಾಣ ಕಾಮಗಾರಿಯು ಗುಣಮಟ್ಟದಿಂದ, ಶೀಘ್ರವಾಗಿ ಪೂರ್ಣಗೊಂಡು ಭಕ್ತಾದಿಗಳ ಸೇವೆಗೆ ಸಮರ್ಪಣೆಯಾಗಲಿ ಎಂದು ಹೇಳಿದರು.
ಗ್ರಾಮದ ಶಿವಯೋಗಿ ಸ್ವಾಮೀಜಿ ಹಾಗೂ ಯೋಗೇಶ್ವರಿ ಅಮ್ಮನವರು ಮಾತನಾಡಿ, ಸಚಿವರ ಸಮಗ್ರ ಅಭಿವೃದ್ಧಿಯ ಕಾರ್ಯ ಹಾಗೂ ಜನಪರ ನಿಲುವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀ ನಿಜಲಿಂಗಯ್ಯ ಶಾಸ್ತ್ರಿ, ಮುಖಂಡರಾದ ನಿಂಗನಗೌಡ ಪಾಟೀಲ, ಉಮೇಶ ವಂದಾಲ, ರಾಜೇಂದ್ರಗೌಡ ಪಾಟೀಲ, ವಿ. ಎಸ್. ಪಾಟೀಲ, ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ವಿಠ್ಠಲ ಬಾಬಾನಗರ, ವಿಜಯಕುಮಾರ ಮೈಲಾರ, ಬಾಬುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹಾದೇವ ತಳವಾರ, ವಿದ್ಯಾರಾಣಿ ತುಂಗಳ, ಭುವನೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಪರಮಹಂಸ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧಾರವಾಡಮಠ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.
ಗುರುವಂದನೆ ಸಲ್ಲಿಸಿದ ಸಚಿವರು
ಇದೇ ವೇಳೆ ಸಚಿವರು ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಹಿಮಾಲಯದಿಂದ ಆಗಮಿಸಿದ್ದ ಶ್ರೀ ಸ್ವಾಮಿ ಹರಿಓಂ ಆನಂದ ಭಾರತಿ ಸ್ವಾಮಿಜೀ, ಶ್ರೀ ಶುಭಮುನಿ ರಮೇಶ ಸ್ವಾಮಿಜೀ, ಶ್ರೀ ಸ್ವಾಮಿ ಶಕ್ತಿಜೀ ಹಾಗೂ ಶ್ರೀ ಸ್ವಾಮಿ ಗುಣಾನಂದ ಸರಸ್ವತಿ ಸ್ವಾಮಿಜಿ ಅವರಿಗೆ ಗುರುವಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು.

