ವಿಪಕ್ಷ ನಾಯಕ ಆಯ್ಕೆ ಮಾಡದ ಶೋಚನಿಯ ಸ್ಥಿತಿಯಲ್ಲಿ ಬಿಜೆಪಿ
ಹುಬ್ಬಳ್ಳಿ: ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನಿಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಒಂದು ರಾಷ್ಟ್ರೀಯ ಪಕ್ಷದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ ಹೆಸರು ಕೇಳಿ ಬರುತ್ತಿದ್ದು, ಯಾರು ಅಧ್ಯಕ್ಷರು ಎನ್ನುವುದು ಬಹಿರಂಗವಾಗಿ ಹೇಳುತ್ತಿಲ್ಲ. ದೆಹಲಿ ವರಿಷ್ಠರು ಒಂದು ಹೆಸರು ತೇಲಿಬಿಟ್ಟರು, ಅದರ ಪ್ರತಿಕ್ರಿಯೆಗಳನ್ನು ನೋಡಿ ಅದು ಫೇಲ್ ಆಯಿತು. ಹಾಗಾಗಿ ಈಗ ಮತ್ತೆ ಬೇರೆ ಹೆಸರಿನ ಪ್ರಯೋಗ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಶೋಭಾ ಕರಂದ್ಲಾಜೆ ಊಹಾಪೋಹ ಅಂತ ಹೇಳಿದ್ದಾರೆ. ರಾಜ್ಯಧ್ಯಕ್ಷರನ್ನು, ವಿಪಕ್ಷ ನಾಯಕರನ್ನು ಆಯ್ಕೆ ಮಾಡದ ಶೋಚನಿಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು” ಎಂದರು.
ಡಿಕೆಶಿ-ಹೆಚ್ಡಿಕೆ ನಡುವಿನ ಕಿತ್ತಾಟದ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ”ಬೆಂಗಳೂರು ಸಾಕಷ್ಟು ಬೆಳವಣಿಗೆ ಆಗಿದೆ. ನೂರಾರು ಹಳ್ಳಿಗಳು ಬೆಂಗಳೂರಿಗೆ ಸೇರುತ್ತಿವೆ. ಇದಕ್ಕೆ ಕನಕಪುರ ಹೊರತಾಗಿಲ್ಲ. ಕನಕಪುರ ಬೆಂಗಳೂರು ಗ್ರಾಮೀಣದ ಒಂದು ಭಾಗ. ಸಹಜವಾಗಿ ಕನಕಪುರ ಬೆಂಗಳೂರು ನಗರಕ್ಕೆ ಸೇರಿದೆ ಎನ್ನುವುದರಲ್ಲಿ ಆಶ್ಚರ್ಯಪಡುವಂತಹ ವಿಚಾರ ಏನಿದೆ. ಇದಕ್ಕೆ ವಿಶೇಷ ಕಾಮೆಂಟ್ ಮಾಡುವ ಅವಶ್ಯಕತೆ ಇಲ್ಲ. ಡಿಕೆಶಿ ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಹೊರತು ಜಿಲ್ಲೆಯ ಬಗ್ಗೆ ಹೇಳಿಲ್ಲ” ಎಂದರು.
”ಡಿಕೆಶಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಅವರು ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಎಲ್ಲವನ್ನೂ ರಾಜಕೀಯ ಮಾಡಲಾಗುತ್ತಿದೆ. ಇದನ್ನು ಬಿಟ್ಟು ಇಡೀ ವ್ಯವಸ್ಥೆಗೆ ಅನುಕೂಲ ಆಗುವುದನ್ನು ನೋಡಬೇಕು” ಎಂದು ಹೇಳಿದರು.
”ಕುಮಾರಸ್ವಾಮಿ ಏನೇ ಟೀಕೆ ಮಾಡಿದರೂ ಅದಕ್ಕೆ ಪುರಾವೆ ಇರಬೇಕು. ಜಾರ್ಜ್ ಮನೆಯಲ್ಲಿ ಸಿದ್ದರಾಮಯ್ಯ ಏನು ಮಾಡಿದರು ಅಂತ ಪ್ರಶ್ನೆ ಮಾಡಿದರೆ, ಅದು ಪ್ರಶ್ನೆಯಾಗಿಯೇ ಉಳಿಯಲಿದೆ. ಪೆನ್ ಡ್ರೈವ್ ವಿಚಾರದಲ್ಲಿಯೂ ಇದೆ ಆಯಿತು. ಟೀಕೆ ಮಾಡುವ ಸಲುವಾಗಿ ಟ್ವೀಟ್ ಮಾಡಿದರೆ ಅದರಿಂದ ಏನು ಉಪಯೋಗ ಆಗುವುದಿಲ್ಲ. ಮಾಧ್ಯಮದಲ್ಲಿ ಚರ್ಚೆ ಆಗುತ್ತೆ ಹೊರತು ವಾಸ್ತವವಾಗಿ ಏನೂ ಗೊತ್ತಾಗುವುದಿಲ್ಲ” ಎಂದು ಹೇಳಿದರು.