ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ | ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ | ವಾರ್ಷಿಕ ಪ್ರಶಸ್ತಿ ಪ್ರದಾನ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ರಿಕೆ ಹಾಗೂ ಮಾಧ್ಯಮಗಳ ಜವಾಬ್ದಾರಿ ಬಹಳ ದೊಡ್ಡದಿದ್ದು, ಅನ್ಯಾಯವಾದಾಗ ನ್ಯಾಯದ ಪರವಾಗಿ ಬೆಳಕಿಗೆ ತರುವ ಕೆಲಸ ಪತ್ರಕರ್ತರು ಮಾಡುತ್ತಾರೆ. ರಾಜ್ಯಕ್ಕಾಗಿ, ದೇಶಕ್ಕಾಗಿ, ನ್ಯಾಯ, ನೀತಿಯ ಪರವಾಗಿ ಪತ್ರಕರ್ತರ ಪೆನ್ನು ಓಡಬೇಕು. ಬಡವರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಪತ್ರಿಕಾ ದಿನಾಚರಣೆ-2026 ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಒಂದೆಡೆ ಸೇರಬೇಕು. ಹಣವುಳ್ಳವರು, ದಬ್ಬಾಳಿಕೆ ಮಾಡುವವರ ಕುರಿತು ಬಯಲಿಗೆಳೆಯುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಓರ್ವ ರಾಜಕಾರಣಿಯ ತಪ್ಪು ಬೆಳಕಿಗೆ ಪತ್ರಕರ್ತರು ತಂದಾಗ ದೊಡ್ಡ ದೊಡ್ಡ ರಾಜಕಾರಣಿಗಳು ರಾಜೀನಾಮೆ ನೀಡಿದ್ದಾರೆ. ಯಾವುದೇ ಒಂದು ಮಾಧ್ಯಮದಲ್ಲಿ ವರದಿ ಬಂದರೆ ಅದು ಸತ್ಯ ಎಂದು ಜನರು ನಂಬುತ್ತಾರೆ, ಹಾಗಾಗಿ ವರದಿಗಳು ಪಾರದರ್ಶಕವಾಗಿರಬೇಕು ಎಂದು ಶಾಸಕ ಯತ್ನಾಳ ಹೇಳಿದರು.
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಪ್ರಜಾಪ್ರಭುತ್ವದ ಸರ್ಕಾರ ಇದ್ದಲ್ಲಿ ಪತ್ರಿಕೋದ್ಯಮ ಬಹಳ ಪ್ರಮುಖವಾಗಿದೆ. ಸತ್ಯದ ಪ್ರತಿಪ್ರಾದಕವಾಗಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ. ವಿಜಯಪುರದ ಡಾ.ಫ.ಗು.ಹಳಕಟ್ಟಿಯವರು ಆಗಿನ ದಿನದಲ್ಲಿ ತಮ್ಮ ಮನೆಯನ್ನು ಮಾರಿ ಪತ್ರಿಕೆ ತೆರೆಯುವ ಮೂಲಕ ಸಾಮಾಜಿಕ ಸೇವೆ ಮಾಡುವವರಿಗೆ ಸ್ಪೂರ್ತಿ ನೀಡಿದ್ದರು. ಪತ್ರಕರ್ತರು ಯಾವುದೇ ಘಟನೆ ಜರುಗಿದಾಗ ಅದನ್ನು ಎರಡೂ ಬದಿಯಿಂದ ತನಿಖೆ ನಡೆಸಿ ವಾಸ್ತವದ ವರದಿಯನ್ನು ಮಾಡಬೇಕು. ಈ ಮೂಲಕ ವಿಜಯಪುರದ ಗೋಳಗುಮ್ಮಟದಂತೆ ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ಸಂಘದ ರಾಜ್ಯ ಘಟಕದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಸಂಘದ ಬೆಳವಣಿಗೆಗಳ ಕುರಿತು ವಿವರಿಸಿದರು.
ಅತಿಥಿಗಳಾಗಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ ಆಗಮಿಸಿದ್ದರು.
ಅತಿಥಿಗಳಾಗಿ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಗೊಂಡಿ ಆಗಮಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ವಾರ್ಷಿಕ ವರದಿ ಓದಿದರು.
ಪತ್ರಿಕಾ ದಿನಾಚರಣೆಯಲ್ಲಿ ಕಾನಿಪ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಹಿರಿಯ ಪತ್ರಕರ್ತರು, ಸರ್ವ ಸದಸ್ಯರು, ಭಾಗವಹಿಸಿದ್ದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ ಸ್ವಾಗತಿಸಿದರು. ಮಂಜುಳಾ ಹಿಪ್ಪರಗಿ ಪ್ರಾರ್ಥಿಸಿದರು. ಸಂಗೀತಾ ಮಠಪತಿ ನಿರೂಪಿಸಿದರು. ಕಾನಿಪ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ ವಂದಿಸಿದರು.

“ದೇಶದಲ್ಲಿನ ಬಹುದೊಡ್ಡ ಹಗರಣಗಳು ಹೊರಬರಲು ಮಾಧ್ಯಮಗಳೇ ಪ್ರಮುಖ ಕಾರಣವಾಗಿವೆ. ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮಗಳು ಅತಿದೊಡ್ಡ ಕೊಡುಗೆ ನೀಡಿವೆ. ಮಾಧ್ಯಮಗಳು ಸತ್ಯವನ್ನು ಬರೆದರೆ ಮಾತ್ರ ಆ ದೇಶ ಉಳಿಯಲು ಸಾಧ್ಯ.”
– ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ ನಗರ ಶಾಸಕರು

ರೂ.೫ ಲಕ್ಷ ದೇಣಿಗೆ ಘೋಷಿಸಿದ ಕಟಕದೊಂಡ
ಇದೇ ವೇಳೆ ಕಾನಿಪ ಸಂಘದ ಅಭಿವೃದ್ಧಿಗೆ ರೂ. 5 ಲಕ್ಷ ದೇಣಿಗೆ ನೀಡುವುದಾಗಿ ಶಾಸಕ ವಿಠ್ಠಲ ಕಟಕದೊಂಡ ವಾಗ್ದಾನ ಮಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಭಾಷಣದ ಮಧ್ಯೆ ಶಾಸಕ ವಿಠ್ಠಲ ಕಟಕದೊಂಡ ಅವರ ಅನುಮತಿ ಪಡೆದು ರೂ. 5 ಲಕ್ಷ ದೇಣಿಗೆ ಘೋಷಿಸಿದಾಗ ಸಭಾಂಗಣದಲ್ಲಿದ್ದ ಎಲ್ಲ ಪತ್ರಕರ್ತರು ಭಾರಿ ಕರತಾಡನ ಮೂಲಕ ಸಂತಸ, ಅಭಿಮಾನ ವ್ಯಕ್ತಪಡಿಸಿದರು.

“ಸಂಘದ ಬೆಳವಣಿಗೆಗೆ ನಾವೆಲ್ಲ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಸಂಘದ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿಡಲಾಗಿದೆ. ಸಂಘದ ಸದಸ್ಯರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವಿಮೆ ಸೇರಿಂದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು, ಆ ದಿಸೆಯಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.”
– ಇಂದುಶೇಖರ ಮಣೂರ
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲೆಯ ಸರ್ವ ಸದಸ್ಯರ ಆರೋಗ್ಯ ತಪಾಸಣೆ, ಜಿಲ್ಲಾ ಸಂಘದ ಕಟ್ಟಡ ಪುನಶ್ಚೇತನ, ಎಲ್ಲ ಸದಸ್ಯರಿಗೆ ಗುಂಪು ವಿಮೆ ಮಾಡುವ ವಿಚಾರ ಸೇರಿದಂತೆ ಸಂಘದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಸಲಹೆ-ಸಹಕಾರ ನೀಡಬೇಕು.”
– ಅಶೋಕ ಯಡಳ್ಳಿ
ಜಿಲ್ಲಾಧ್ಯಕ್ಷರು
ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ

