ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದಿಂದ ಬಿಂಜಲಭಾವಿ ಮಾರ್ಗವಾಗಿ ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಳಿಕೋಟಿ ತಾಲೂಕ ರಾಷ್ಟ್ರೀಯ ರೈತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಬಿಂಜಲಭಾವಿ ಹಳ್ಳದ ಸಮೀಪದ ರಸ್ತೆ ತಡೆ ಮತ್ತು ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ದಿ. ೨೦ರ ಬೆಳಿಗ್ಗೆ ಬಿಂಜಲಭಾವಿ ಗ್ರಾಮದಿಂದ ಪ್ರತಿಭಟನೆ ಮೂಲಕ ಕಲಕೇರಿ ಹತ್ತಿರವಿರುವ ಬಿಂಜಲಭಾವಿ ಹಳ್ಳದ ವರೆಗೆ ಪಾದಯಾತ್ರೆಯ ಮೂಲಕ ರೈತರು ಮತ್ತು ಸಾರ್ವಜನಿಕರೊಂದಿಗೆ ಆಗಮಿಸಿದ ರಾಷ್ಟ್ರೀಯ ರೈತರ ಸಂಘದ ತಾಳಿಕೋಟಿ ತಾಲೂಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ಮತ್ತು ಧರಣಿಯನ್ನು ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಸುಮಾರು ೨೦ ವರ್ಷಗಳಿಂದ ಕಲಕೇರಿ ಬಿಂಜಲಭಾವಿ ಮತ್ತು ಕೆಸರಟ್ಟಿ ಮಾರ್ಗದ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಅಂದಾಜು ೧೦ ಕೀ.ಮೀ ರಸ್ತೆ ತಗ್ಗು ದಿಣ್ಣೆಗಳಿಂದ ಕೂಡಿದ್ದು, ಸಂಪೂರ್ಣ ಕೆಸರು ಗದ್ದೆಯಂತಾಗಿ ದಿನಬೆಳಗಾದರೆ ವಾಹನ ಸವಾರರ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದು, ಹಲವು ಸಾವು ನೋವುಗಳು, ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಕೂಡಲೇ ಮಾನ್ಯ ಶಾಸಕರು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಹಾಗೂ ನಮ್ಮ ವಿವಿಧ ಬೇಡಿಕೆಗಳನ್ನು ಕೂಡಲೇ ಪರಿಹರಿಸಲು ಮುಂದಾಗಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಹೇಳಿದರು.
ಪ್ರತಿಭಟನಾಕಾರರ ವಿವಿಧ ಬೇಡಿಕೆಗಳು:
ಶೀಘ್ರಗತಿಯಲ್ಲಿ ಸುಮಾರು ೧೦ ಕೀ.ಮೀ ರಸ್ತೆ ಡಾಂಬರೀಕರಣ ಮಾಡಿಸಿ ಕೊಡಬೇಕು.
ಡಾಂಬರೀಕರಣ ಮಾಡುವುದು ತಡವಾಗುತ್ತಿದ್ದರೆ ತಗ್ಗು ಗುಂಡಿಯಂತಿರುವ ರಸ್ತೆಯನ್ನು ಜೆಸಿಬಿಯಿಂದ ರಸ್ತೆ ಸಮತೋಲನ ಮಾಡಿಕೊಡಬೇಕು.
ಬಿಂಜಲಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಭತ್ಯೆಗಳು ರದ್ದಾಗಿದ್ದು, ಅವುಗಳನ್ನು ಪರಿಶೀಲಿಸಿ ೧೫ ದಿನಗಳಲ್ಲಿ ಮರಳಿ ಪ್ರಾರಂಭಿಸಲು ಆದೇಶ ಪ್ರತಿ ನೀಡಬೇಕು.
ಸನ್ ೨೦೨೬-೨೭ನೇ ಸಾಲಿನಲ್ಲಿ ರೈತರ ಜಮೀನುಗಳಿಗೆ ಕೃಷಿ ಇಲಾಖೆಯಿಂದ ಜಿಪಿಎಸ್ ಮಾಡಿಸಬೇಕು. ಮೋಬೈಲ್ ಯ್ಯಾಪ್ ಬಳಸಲು ರೈತರಿಗೆ ಬಾರದ ಕಾರಣ ತಮ್ಮ ಇಲಾಖೆಯಿಂದ ಜಿಪಿಎಸ್ ಮಾಡಿಸಬೇಕು.
ಮುಂಗಾರು ಮಳೆ ಬರದಿರುವ ಕಾರಣ ನಮ್ಮ ತಾಳಿಕೋಟಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು.
ಮನವಿ ಸ್ವೀಕರಿಸಿ ಮಾತನಾಡಿದ ತಾಳಿಕೋಟಿ ತಾಲೂಕಿನ ಉಪ ತಹಶೀಲ್ದಾರರಾದ ಅನೀಲಕುಮಾರ ಚವ್ಹಾಣ ಇವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾನ್ಯ ಶಾಸಕರಿಗೆ ಮತ್ತು ಪಿಡಬ್ಲೂಡಿ ಅಧಿಕಾರಿಗಳಿಗೆ ಅರ್ಜಿಯನ್ನು ತಲುಪಿಸಿ ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸಲಾಗುವದು ಎಂದು ಹೇಳಿದರು
ಈ ವೇಳೆ ರಾಷ್ಟ್ರೀಯ ರೈತ ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿಗಳಾದ ಕು. ರೇಣುಕಾ ಪಾಟೀಲ, ಜಿಲ್ಲಾ ಯವಮೋರ್ಚಾ ಅಧ್ಯಕ್ಷರಾದ ಹಣಮಂತ ಈ ವಡ್ಡರ, ಜಿಲ್ಲಾ ಉಪಾಧ್ಯಕ್ಷರಾದ ಮೈಬೂಬಬಾಷಾ ಮನಗೂಳಿ, ತಾಳಿಕೋಟಿ ತಾಲೂಕ ಅಧ್ಯಕ್ಷರಾದ ಅಶೋಕಗೌಡ ಪಾಟೀಲ, ಉಪಾಧ್ಯಕ್ಷರಾದ ಶರಣು ಕವದಿ ಮತ್ತು ತಾಳಿಕೋಟಿ ಯುವಮೋರ್ಚಾ ಅಧ್ಯಕ್ಷ ಗೌಡಪ್ಪಗೌಡ ಹಳಿಮನಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

