ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಬ್ಬ ಶಿಕ್ಷಕನ ನಿಜವಾದ ಸಂಪತ್ತು ಕಟ್ಟಡಗಳಲ್ಲ ಅಥವಾ ಅಥವಾ ಪ್ರಶಸ್ತಿಗಳಲ್ಲ. ತನ್ನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಾಧನೆಗಳೇ ಅವನ ದೊಡ್ಡ ಹೆಮ್ಮೆ ಎಂದು ಶಿಕ್ಷಕ ಎಸ್.ಜಿ.ನಂದಾ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಲಿಂಗದಳ್ಳಿಯ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದು ನನ್ನ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿರುವುದನ್ನು ನೋಡಿದಾಗ ಶಿಕ್ಷಕನಾಗಿ ನನಗೆ ಹೆಮ್ಮೆಯಾಗುತ್ತದೆ.
ಶಿಕ್ಷಣ ಎಂದರೆ ಕೇವಲ ಪುಸ್ತಕದ ಜ್ಞಾನವಲ್ಲ. ಉತ್ತಮ ವ್ಯಕ್ತಿತ್ವ, ಶಿಸ್ತು, ಮಾನವೀಯತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸುವುದೇ ನಿಜವಾದ ಶಿಕ್ಷಣ. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗುತ್ತಾರೆ.
ಇಂದಿನ ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ ಎಂಬುದು ಸಂತಸದ ವಿಷಯ. ಅವರಿಗೆ ನನ್ನ ಅಭಿನಂದನೆಗಳು. ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮ ಶಿಕ್ಷಕರನ್ನು ಗೌರವಿಸಿ. ಅವರು ನೀಡುವ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಿಮ್ಮ ಯಶಸ್ಸೇ ನಿಮ್ಮ ಶಿಕ್ಷಕರಿಗೆ ನೀಡುವ ಅತ್ಯುತ್ತಮ ಗೌರವ ಎಂದು ಹೇಳಿದರು.
ತಮ್ಮ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟ ಗುರುಗಳನ್ನು ಸ್ಮರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಅಪರೂಪದ ಸಮಾರಂಭದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾವುಕರಾಗಿ ಪಾಲ್ಗೊಂಡಿದ್ದರು. ಭಾರತೀಯ ಸೇನೆ, ಪೊಲೀಸ್ ಇಲಾಖೆ, ಕೆಎಸ್ಆರ್ಟಿಸಿ, ಕೆಪಿಟಿಸಿಎಲ್ ಸೇರಿದಂತೆ ವಿವಿಧ ಪ್ರತಿಷ್ಠಿತ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವು ಇಂದು ಸಮಾಜದಲ್ಲಿ ವಿವಿಧ ಗೌರವಾನ್ವಿತ ಹುದ್ದೆಗಳಲ್ಲಿದ್ದೇವೆ ಎಂದರೆ ಅದಕ್ಕೆ ನಮ್ಮ ಪ್ರಾಥಮಿಕ ಶಾಲೆಯ ಗುರುಗಳೇ ಕಾರಣ. ಅವರ 19 ವರ್ಷಗಳ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸೌಭಾಗ್ಯ ಎಂದು ಎಲ್ಲ ಹಳೆಯ ವಿಧ್ಯಾರ್ಥಿಗಳು ಸ್ಮರಿಸಿದರು.
19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗುರುಗಳಾದ ಎಸ್. ಜಿ. ನಂದಾ, ಎನ್. ಎಸ್. ಗೋಡಿಹಾಳ ಅವರನ್ನು ಸನ್ಮಾನಿಸಲಾಯಿತು.
ಗೀತಾ ಬಿರಾದಾರ, ಶಂಕರ ಲಡಂಗಿ, ಸಂಗು ಮುದಗನ್ನವರ, ಹುಸೇನಪ್ಪ ಚಲವಾದಿ, ಎನ್.ಎಸ್.ಗೋಡಿಹಾಳ ಮಾತನಾಡಿದರು.
ಸಾನಿಧ್ಯ ಶ್ರೀ ವಿರೂಪಾಕ್ಷ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಛಲವಾದಿ,ಗಂಗೂಬಾಯಿ ಹಿರೇಮಠ, ಗುರಪ್ಪಾ ಜಂಬಗಿ, ಈರಪ್ಪ ಚೋಳಪ್ಪಗೋಳ, ಸುಬ್ಬನಗೌಡ ಪಾಟೀಲ, ಮುತ್ತನಗೌಡ ಪಾಟೀಲ, ಚನ್ನಪ್ಪ ದೇವಾಪುರ, ಸಂಗಪ್ಪ ಜಂಬಗಿ,ಈರಪ್ಪ ಮುದಗನ್ನವರ, ಶ್ರೀಶೈಲ ಅರ್ಜುನಗಿ, ಪ್ರಶಾಂತಗೌಡ ಪಾಟೀಲ, ನಿಂಗಪ್ಪ ರೊಳ್ಳಿ,ಪುಂಡಲೀಕ ಕೋಲಕಾರ, ರಾವತಪ್ಪ ಹಳಿಜೋಳ, ಭೀಮಪ್ಪ ಜಂಬಗಿ, ರಮೇಶ್ ಜಂಬಗಿ, ಅಶೋಕಗೌಡ ಎಸ್. ಪಾಟೀಲ, ನಾಗಪ್ಪ ಛಲವಾದಿ, ಯಲಪ್ಪ ಛಲವಾದಿ, ಅರ್ಜುನ ಛಲವಾದಿ, ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳು ಇದ್ದರು.
ಪ್ರಾರ್ಥನೆ ಕಾವೇರಿ ವಾಲಿಕಾರ, ನಿರೂಪಣೆಯನ್ನು ಹಣಮಂತ ಕಾತರಕಿ, ಸ್ವಾಗತವನ್ನು ರಾಜು ಕೋಲಕಾರ ಮತ್ತು ಮೈಬು ಹುಲಕುಂದ ನೆರವೇರಿಸಿದರು.

