ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮಠದ ಜಮೀನು ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಶ್ರೀ ಮಠದ ಆಡಳಿತ ಮಂಡಳಿಯವರು ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ಕುಮಾರ್ ಪಿ. ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಗಿದ್ದು, ಮಠದ ಹಿಂದಿನ ಉತ್ತರಾಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಜಮೀನು ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ತೆಗ್ಗಿಹಳ್ಳಿ ಗ್ರಾಮದ ಸರ್ವೆ ನಂಬರ್ ೮೯/೧ರಲ್ಲಿರುವ ಶ್ರೀ ಶಿವಾನಂದ ಸ್ವಾಮಿಗಳ ದೇವಸ್ಥಾನದ ಮಠಕ್ಕೆ ಸೇರಿದ ೫ ಎಕರೆ ಜಮೀನನ್ನು ಈ ಹಿಂದೆ ವಸತಿ ಶಾಲೆ ಸ್ಥಾಪನೆಗಾಗಿ ದಾನಪತ್ರದ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿಗೆ ಮಾಡಿಕೊಡಲಾಗಿತ್ತು. ಆದರೆ, ಹಿಂದಿನ ಮಠದ ಮುಖ್ಯಸ್ಥರಾದ ವಿಜಯ ಮಹಾಂತೇಶ ಪ್ರಭಯ್ಯ ಕೆರಿಮಠ ಅವರು ಗ್ರಾಮಸ್ಥರ ಹಾಗೂ ಮಠದ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೇ, ಯಾವುದೇ ಕರಾರು ದಾಖಲೆಗಳಿಲ್ಲದೆ ಈ ಜಮೀನನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥರ ಬೇಡಿಕೆ ಮತ್ತು ಪರ್ಯಾಯ ಜಾಗ: ಸರ್ಕಾರದ ಶೈಕ್ಷಣಿಕ ಯೋಜನೆಗಳಿಗೆ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಮಾಡುವುದು ತಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿರುವ ಗ್ರಾಮಸ್ಥರು, ಮಠದ ಒಪ್ಪಿಗೆಯಿಲ್ಲದೆ ನೀಡಿರುವ ಸರ್ವೆ ನಂಬರ್ ೮೯/೧ರ ಜಮೀನಿನಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪರ್ಯಾಯವಾಗಿ, ತೆಗ್ಗಿಹಳ್ಳಿ ಗ್ರಾಮದಲ್ಲೇ ಸರ್ಕಾರಕ್ಕೆ ಸೇರಿದ ಮತ್ತೊಂದು ಜಮೀನು (ಸರ್ವೆ ನಂಬರ್ ೭೭) ಲಭ್ಯವಿದ್ದು, ವಸತಿ ಶಾಲೆಯನ್ನು ಅಲ್ಲಿಯೇ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅವರಿಗೂ ಮನವಿ ಸಲ್ಲಿಸಲಾಗಿದೆ.
ದಾಖಲೆಗಳ ಸಲ್ಲಿಕೆ: ತಮ್ಮ ವಾದಕ್ಕೆ ಪೂರಕವಾಗಿ ಗ್ರಾಮಸ್ಥರು ಮಹತ್ವದ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿದ್ದಾರೆ. ಈ ಮನವಿ ಪತ್ರದೊಂದಿಗೆ:೧೯೯೪ ರಿಂದ ೨೦೦೪ರ ವರೆಗಿನ ಇ.ಸಿ (ಇಅ) ಪ್ರತಿಗಳು.ಎಮ್.ಆರ್ (ಒಖ) ನಂಬರ್ ೧೪೮೦ರ ದಾಖಲೆಗಳು.ಕರ್ನಾಟಕ ಸರ್ಕಾರದ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಾಯ್ದೆ ನಿರ್ವಹಿಸಿದ ದಾಖಲೆಗಳು.ಗ್ರಾಮಸ್ಥರು ಸಹಿ ಮಾಡಿದ ಬೃಹತ್ ಮನವಿ ಪತ್ರದ ನಕಲನ್ನು ಲಗತ್ತಿಸಲಾಗಿದೆ.ಗ್ರಾಮಸ್ಥರ ಮತ್ತು ಮಠದ ಆಡಳಿತ ಮಂಡಳಿಯ ಒಪ್ಪಿಗೆಯಿಲ್ಲದೆ ಈ ಜಾಗದಲ್ಲಿ ಕಾಮಗಾರಿ ಮುಂದುವರಿಸಿದರೆ ಉಂಟಾಗುವ ಕಾನೂನು ತೊಡಕುಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಗ್ರಾಮಸ್ಥರಾದ ಸಂಜಯ ಪಾಟೀಲ, ಶ್ರೀಶೈಲ ಕುಂಬಾರ, ದಾದಾಗೌಡ ಬಿರಾದಾರ, ಸಂದೀಪ ಬಿರಾದಾರ, ಕೆ.ಆರ್. ಹಿರೇಪೂಜಾರಿ, ಶೇಖರ ಹೊಸಮನಿ, ಸಿ.ಎಸ್. ಬೇವಿನಕಟ್ಟಿ, ಶೇಖರ್ ಕಡಣಿ, ಬಾಬು ಹಿರೇಪೂಜಾರಿ, ರವಿ ಜಮಾದಾರ, ಸೈಯದ್ ಮಂದೇವಾಲಿ, ರಾಮಶೇಕ್ ತಳವಾರ ಸೇರಿದಂತೆ ಗ್ರಾಮಸ್ಥರು ಇದ್ದರು.

