ವಿಜಯಪುರದಲ್ಲಿ ಬೆಳೆ ವಿಮೆ ಜಾಗೃತಿ ವಾಹನಗಳಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ. ಆನಂದ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ ಜಿಲ್ಲೆಯ ರೈತರಲ್ಲಿ ಬೆಳೆ ವಿಮೆ ಯೋಜನೆ ಕುರಿತು ವ್ಯಾಪಕ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಬೆಳೆ ವಿಮೆ ಜಾಗೃತಿ ವಾಹನಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ. ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾದ್ಯಾಂತ ವ್ಯಾಪಕ ಜಾಗೃತಿ ಮೂಡಿಸುವ ಸಂಚಾರಿ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿಯು ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿಯಾಗಿದ್ದು, ಅನಿರೀಕ್ಷಿತ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಗಾಳಿ, ಕೀಟ ಹಾಗೂ ರೋಗಬಾಧೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕವಾಗಿ ಆಸರೆಯಾಗುವ ಪ್ರಮುಖ ಯೋಜನೆಯೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪುಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರ ಬೆಳೆ ನಷ್ಟ್ಟವನ್ನು ಭಾಗಶಃ ಸರಿದೂಗಿಸಲು ನೆರವಾಗುತ್ತದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರೂ ಬೆಳೆ ವಿಮೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಬೆಳೆಗಳಿಗೆ ಆರ್ಥಿಕ ಭದ್ರತೆ ಕಲ್ಪಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯೋಜನೆಯಿಂದ ವಂಚಿತರಾಗಬಾರದು ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳು ಹಾಗೂ ಗ್ರಾಮಗಳಲ್ಲಿ ಸಂಚರಿಸಲಿರುವ ಈ ಜಾಗೃತಿ ವಾಹನಗಳು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶ, ನೋಂದಣಿ ವಿಧಾನ, ಅಗತ್ಯ ದಾಖಲೆಗಳು, ವಿಮೆ ನೋಂದಣಿಯ ಅಂತಿಮ ದಿನಾಂಕ, ಯೋಜನೆಯ ಲಾಭಗಳು ಹಾಗೂ ಬೆಳೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ಪಡೆಯುವ ವಿಧಾನ ಸೇರಿದಂತೆ ವಿವಿಧ ಮಾಹಿತಿಗಳನ್ನು ರೈತರಿಗೆ ತಲುಪಿಸಲಿವೆ. ರೈತರು ಈ ವಾಹನಗಳ ಮೂಲಕ ನೀಡಲಾಗುವ ಮಾಹಿತಿಯನ್ನು ತಿಳಿದುಕೊಂಡು, ನಿಗದಿತ ಅವಧಿಯೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಮಾತನಾಡಿ, ೨೦೨೬-೨೭ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ತಾಲ್ಲೂಕುವಾರು ಹಾಗೂ ಗ್ರಾಮ ಪಂಚಾಯಿತಿವಾರು ಅಧಿಸೂಚಿಸಲಾಗಿರುವ ವಿವಿಧ ಬೆಳೆಗಳ ವಿಮಾ ಮೊತ್ತ ವಿಮಾ ಕಂತು ಮತ್ತು ನೋಂದಣಿಯ ಅಂತಿಮ ದಿನಾಂಕದ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಲು ವಿನಂತಿಸಲಾಗಿದೆ. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ, ಬೆಳೆ ಸಾಲ ಪಡೆದ ರೈತರು, ಸಾಲ ನೀಡಿದ ಬ್ಯಾಂಕ್ ಗಳಲ್ಲಿ ವಿಮೆ ನೋಂದಾಯಿಸಬೇಕು ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕರು -೧ ವಿಜಯಪುರ ಶರಣಗೌಡ ಪೊಲೀಸ ಪಾಟೀಲ, ಕೃಷಿ ಉಪನಿರ್ದೇಶಕರು -೨ ಇಂಡಿ ಚಂದ್ರಕಾಂತ ಪವಾರ, ಕೃಷಿ ತಾಂತ್ರಿಕ ಅಧಿಕಾರಿ ರಾಜೇಂದ್ರಗೌಡ ಪಾಟೀಲ ಹಾಗೂ ವಿಮಾ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಸೂಚಿಸಿದ ಬೆಳೆಗಳ ವಿವರ
ಪ್ರತಿ ಎಕರೆ ಮಳೆಯಾಶ್ರಿತ ಉದ್ದು ಬೆಳೆಗೆ ೧೫೫೨೦ ರೂ. ವಿಮಾ ಮೊತ್ತ ಹಾಗೂ ೩೧೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೧೫ ಕೊನೆ ದಿನ. ಪ್ರತಿ ಎಕರೆ ಮಳೆಯಾಶ್ರಿತ ಸೂರ್ಯಕಾಂತಿ ಬೆಳೆಗೆ ೧೯೨೮೦ ರೂ. ವಿಮಾ ಮೊತ್ತ ಹಾಗೂ ೩೮೫ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ಮಳೆಯಾಶ್ರಿತ ಹೆಸರು ಬೆಳೆಗೆ ೧೫೮೮೦ ರೂ. ವಿಮಾ ಮೊತ್ತ ಹಾಗೂ ೩೧೭ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೧೫ ಕೊನೆ ದಿನವಾಗಿದೆ. ಪ್ರತಿ ಎಕರೆ ಮಳೆಯಾಶ್ರಿತ ಸಜ್ಜೆ ಬೆಳೆಗೆ ೧೩೯೨೦ ರೂ. ವಿಮಾ ಮೊತ್ತ ಹಾಗೂ ೨೭೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಸಜ್ಜೆಗೆ ೧೭೩೨೦ ರೂ. ವಿಮಾ ಮೊತ್ತ ಹಾಗೂ ೩೪೬.೪ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಸೂರ್ಯಕಾಂತಿಗೆ ೨೩೧೬೦ ರೂ. ವಿಮಾ ಮೊತ್ತ ಹಾಗೂ ೪೬೩ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ನೆಲಗಡಲೆ (ಶೇಂಗಾ) ಬೆಳೆಗೆ ೩೧೧೨೦ ವಿಮಾ ಮೊತ್ತ ಹಾಗೂ ೬೨೨ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ನೀರಾವರಿ ಟೊಮೆಟೊ ಬೆಳೆಗೆ ೬೭೯೨೦ ರೂ. ವಿಮಾ ಮೊತ್ತ ಹಾಗೂ ೩೩೯೬ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ. ಪ್ರತಿ ಎಕರೆ ನೀರಾವರಿ ಮುಸುಕಿನಜೋಳಕ್ಕೆ ೬೭೯೨೦ ವಿಮಾ ಮೊತ್ತ ಹಾಗೂ ೩೩೯೬ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ. ಪ್ರತಿ ಎಕರೆ ಮಳೆಯಾಶ್ರಿತ ಮುಸುಕಿನಜೋಳಕ್ಕೆ ೨೭೦೦೦ ವಿಮಾ ಮೊತ್ತ ಹಾಗೂ ೫೪೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ. ೧೪ ಕೊನೆ ದಿನವಾಗಿದೆ. ಪ್ರತಿ ಎಕರೆ ನೀರಾವರಿ ಈರುಳ್ಳಿ ಬೆಳೆಗೆ ೩೭೫೬೦ ವಿಮಾ ಮೊತ್ತ ಹಾಗೂ ೧೮೭೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ನೀರಾವರಿ ತೊಗರಿಗೆ ೨೪೧೨೦ ವಿಮಾ ಮೊತ್ತ ಹಾಗೂ ೪೮೨ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ.
ಪ್ರತಿ ಎಕರೆ ಮಳೆಯಾಶ್ರಿತ ತೊಗರಿಗೆ ೨೩೦೪೦ ವಿಮಾ ಮೊತ್ತ ಹಾಗೂ
೪೬೦ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ. ೧೪ ಕೊನೆ ದಿನವಾಗಿದೆ.
ಪ್ರತಿ ಎಕರೆ ಮಳೆಯಾಶ್ರಿತ ಹತ್ತಿಗೆ ೨೩೮೮೦ ರೂ. ವಿಮಾ ಮೊತ್ತ ಹಾಗೂ ೧೧೯೪ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಆ. ೧೪ ಕೊನೆ ದಿನವಾಗಿದೆ.
ಪ್ರತಿ ಎಕರೆ ನೀರಾವರಿ ಹತ್ತಿಗೆ ೩೪೫೬೦ ರೂ. ವಿಮಾ ಮೊತ್ತ ಹಾಗೂ ೧೭೨೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ.
ಪ್ರತಿ ಎಕರೆ ನೀರಾವರಿ ಮೆಣಸಿನಕಾಯಿಗೆ ೪೯೮೦೦ ವಿಮಾ ಮೊತ್ತ ಹಾಗೂ ೨೪೯೦ ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನ.
ಪ್ರತಿ ಎಕರೆ ಮಳೆಯಾಶ್ರಿತ ಹುರುಳಿಗೆ ೯೪೦೦ ವಿಮಾ ಮೊತ್ತ ಹಾಗೂ ೧೮೮ ರೂ. ವಿಮಾ ಕಂತು ಪ್ರಸ್ತಾವನೆ ಸಲ್ಲಿಸಲು ಜು. ೩೧ ಕೊನೆ ದಿನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

