ಇಂಡಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಸಾಮೂಹಿಕ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲರಿಗೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಸಾಮೂಹಿಕವಾಗಿ ಮನವಿ ಸಲ್ಲಿಸಿದರು.
ಝಳಕಿ ಗ್ರಾಮದ ಚಡಚಣ ರಸ್ತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಮುಖಂಡರು, ಇಂಡಿ ತಾಲೂಕು ಹಿಂದಿನಿಂದಲೂ ಬರಗಾಲದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಾರಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಹದಗೆಟ್ಟಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ರಾಜ್ಯ ಸರ್ಕಾರ ಇಂಡಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸುಮಾರು 10 ನಿಮಿಷಗಳ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಇಂಡಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಚಿವರಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ, ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶಗೌಡ ಬಿರಾದಾರ ಸೇರಿದಂತೆ ಹಲವರು ಮಾತನಾಡಿದರು.
ರವಿ ನಾವಿ, ರವಿಕುಮಾರ್ ಹೂಗಾರ, ರವೀಂದ್ರ ತೇಲಿ, ಸುಭಾಷ ಚಟ್ಟರಕಿ, ಬಾಪೂರಾಯ ಲೋಣಿ, ಬಸಗೊಂಡಪ್ಪ ಪಾಟೀಲ, ರಾಜೂಗೌಡ ಪಾಟೀಲ, ವಿಠ್ಠಲ ಶಿರಷ್ಯಾಡ, ಅರವಿಂದ ಪೂಜಾರಿ, ಮಹಾದೇವ ಹಾಡಸಂಗೆ, ವಿಠ್ಠಲ ಕಾಗರ, ಬಾಲಕೃಷ್ಣ ಭೋಸಲೆ, ಶರಣಯ್ಯ ಮಠಪತಿ ಸೇರಿದಂತೆ ಬಳ್ಳೊಳ್ಳಿ, ಝಳಕಿ, ಜೇವೂರ, ಅರ್ಜನಾಳ ಹಾಗೂ ಮೈಲಾರ ಗ್ರಾಮದ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಚಿವರಿಗೆ ಮನವಿ ಸಲ್ಲಿಸಲು ಝಳಕಿ ಗ್ರಾಮದ ಚಡಚಣ ರಸ್ತೆಯ ಬದಿ ಕಡು ಬಿಸಿಲಲ್ಲಿ ಸತತ 8 ಗಂಟೆ ಕಾಲ ರೈತರು ಕಾಯಬೇಕಾಯಿತು.

