ಸಿಂದಗಿಯಲ್ಲಿ ೨೧ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ | ಸರ್ವಾಧ್ಯಕ್ಷರ ಮೆರವಣಿಗೆ | ಶಾಸಕ ಅಶೋಕ ಮನಗೂಳಿ ಉದ್ಘಾಟನೆ | ಸರ್ವಾಧ್ಯಕ್ಷ ಹ.ಮ.ಪೂಜಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯುವ ಪಿಳೀಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬರಬೇಕು. ಇಡೀ ನಾಡಿಗೆ ಕೊಟ್ಟಂತ ಹಿರಿಯರ ಸಂದೇಶವನ್ನು ಈ ಸಾಹಿತ್ಯ ಸಮ್ಮೇಳನದ ಮೂಲಕ ಜನರಿಗೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಎಚ್.ಜಿ.ಪ ಪೂ ಕಾಲೇಜು ಆವರಣದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಧುನಿಕ ಭಗಿರಥ ದಿ. ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಹಮ್ಮಿಕೊಂಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು-ನುಡಿ, ನೆಲ, ಜಲ, ಭಾಷೆ ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನಗಳು ಮಹತ್ವದ ಪಾತ್ರ ಹಾಗೂ ಸಾಹಿತ್ಯ ಪ್ರೇಮಿಗಳಿಗೆ ಪ್ರೇರಣೆ ನೀಡಬೇಕೆನ್ನುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನಗಳು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮೆಲ್ಲರ ಅಕ್ಷರಜಾತ್ರೆಯಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ಎಲ್ಲರೂ ಅಭಿಮಾನದಿಂದ ಆಚರಿಸುವ ಹಬ್ಬವೆಂದರೆ ಅದು ಕನ್ನಡದ ಜಾತ್ರೆಯಾಗಿದೆ ಎಂದರು.
ಸಾನಿಧ್ಯ ವಹಿಸಿದ ನಗರದ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಗಳು, ಬುರಣಾಪುರ ಶ್ರೀಮಠದ ಶ್ರೀಮಾತಾ ಯೋಗೇಶ್ವರಿ ಮಾತಾಜಿ, ಧರ್ಮಾಧಿಕಾರಿ ಡಾ.ಸಂದೀಪ ಪಾಟೀಲ, ಕಾನೂನು ಸಲಹೆಗಾರ ಅಶೋಕ ಗಾಯಕವಾಡ, ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸಂತೋಷ ಸಾಲಿ, ಅಶೋಕ ಕೊಳಾರಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ಡಾ.ಮಾದವ ಗುಡಿ, ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಸುನಂದಾ ಯಂಪೂರೆ, ಆನಂದ ಶಾಬಾದಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಸರ್ವಾದ್ಯಕ್ಷರ ಅದ್ಧೂರಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ಸಿಂದಗಿ ಪಟ್ಟಣದ ಡಾ. ಅಂಬೇಡ್ಕರ ವೃತ್ತದಿಂದ ಸಕಲ ವಾಧ್ಯ ಮೇಳಗಳ ಮೂಲಕ ಟಿಪ್ಪು ಸುಲ್ತಾನ ವೃತ್ತ, ಜಗದ್ಗುರು ತೊಂಟದ ಸಿದ್ದಲಿಂಗ ಶ್ರೀಗಳ ರಸ್ತೆಯ ಮಾರ್ಗವಾಗಿ, ಸ್ವಾಮಿ ವಿವೇಕಾನಂದ ವೃತ್ತದಿಂದ ವೇದಿಕೆಯವರೆಗೆ ಸರ್ವಾದ್ಯಕ್ಷ ಹ.ಮ.ಪೂಜಾರ ಅವರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

“ಶಿಕ್ಷಕ ವೃತ್ತಿಯ ಮೂಲಕ ತನ್ನ ಇಡೀ ಜೀವನವನ್ನೇ ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಿಲ್ಲೆಯ ಹಿರಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು ಸಲ್ಲಿಸುವೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ ಮತಕ್ಷೇತ್ರ

ಅಡ್ಡದಾರಿಯಿಂದ ಪ್ರಶಸ್ತಿ ಪಡೆದವರಿಗೆ ಆತ್ಮತೃಪ್ತಿ ಇರೊಲ್ಲ
ಸಿಂದಗಿ: ಅಡ್ಡದಾರಿ ಹಿಡಿದು ಪ್ರಶಸ್ತಿ ಪಡೆದವರಿಗೆ ಆತ್ಮತೃಪ್ತಿ ಇರುವುದಿಲ್ಲ. ಸಾಹಿತ್ಯ ಕೃಷಿಯನ್ನು ಗುರುತಿಸಿ ನೀಡುವ ಪ್ರಶಸ್ತಿಗೆ ಮನ್ನಣೆ ದೊರೆಯುತ್ತದೆ. ಅದು ಸಮಾಜ ನೀಡುವ ಗೌರವ ಎಂದು ಸಮ್ಮೇಳನದ ಸರ್ವಾದ್ಯಕ್ಷ ಮಕ್ಕಳ ಸಾಹಿತಿ ಹ.ಮ.ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನ ಭಾವೈಕ್ಯತೆಯ ಪ್ರತೀಕವಾಗಿದೆ. ಸಿಂದಗಿಯಲ್ಲಿ ಕನ್ನಡ ಬಳಗವನ್ನು ಸ್ಥಾಪಿಸಿ ಕನ್ನಡದ ಕಂಪು ಚೆಲ್ಲಿದ ಪತ್ರಿಕಾ ರಂಗದ ಭೀಷ್ಮ ರೇ.ಚ.ರೆವಡಿಗಾರ, ಅನೇಕ ಕೃತಿಗಳನ್ನು ಬರೆದು ಸಾಹಿತ್ಯ ರಂಗವನ್ನು ಶ್ರೀಮಂತಗೊಳಿಸಿದ ಸುಶಿಲಾಬಾಯಿ ಕಮತಗಿ, ಪಿ.ಮುನಿಕುಮಾರ ಅವರ ಶ್ಲಾಘನೀಯ ಸಾಹಿತ್ಯ ಸೇವೆಯಿಂದ ಸಿಂದಗಿ ಸಾಹಿತ್ತಿಕ, ಸಾಂಸ್ಕೃತಿಕ ಕೇಂದ್ರವಾಗಿದೆ ಎಂದರು.
ಮೊದಲು ಕಥೆ, ಕವನಗಳು ಪಠ್ಯಕ್ರಮದಲ್ಲಿ ಇರುತ್ತಿತ್ತು. ಅದು ಇಂದು ಮಾಯವಾಗಿದೆ. ಒಳ್ಳೆಯ ಸಂದೇಶ ನೀಡುವ ಕವನಗಳು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡುವುದರಿಂದ ಮಗುವಿನ ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿದಂತಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ೧ರಿಂದ ೫ ನೇ ತರಗತಿವರೆಗೆ ಶಿಕ್ಷಣವು ಕಡ್ಡಾಯವಾಗಿ ಮಾತೃಭಾಷೆಯಲ್ಲಿರಬೇಕು ಎಂದು ಸರ್ವಾದ್ಯಕ್ಷ ಹ.ಮ.ಪೂಜಾರ ಒತ್ತಾಯಿಸಿದರು.

