ವಿಜಯಪುರದಲ್ಲಿ ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆಯಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜಣಗೌಡ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೌಹಾರ್ದ ಸಹಕಾರ ಸಂಘಗಳು ಸೌಹಾರ್ದ ಕಾಯ್ದೆಯ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಾ ಸದಸ್ಯರಿಗೆ ಉತ್ತಮ ಸೇವೆ ಒದಗಿಸಿ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜಣಗೌಡ ಕರೆ ನೀಡಿದರು.
ನಗರದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರ ಸಂಘಗಳಿಗಾಗಿ ಆಯೋಜಿಸಲಾಗಿದ್ದ “ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಂಜಣಗೌಡ ಮಾತನಾಡಿ, “ಸಹಕಾರ ಸಂಘದ ಪದಾಧಿಕಾರಿಗಳು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಸಂಘದಿಂದ ನೀಡಲಾದ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ಕಾನೂನಿನ ಪ್ರಕಾರ ನಿರ್ದೇಶಕ ಮಂಡಳಿಯ ಜವಾಬ್ದಾರಿ ನಿಶ್ಚಿತವಾಗುತ್ತದೆ. ಆದ್ದರಿಂದ ಪಾರದರ್ಶಕ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರಿಗೆ ಗುಣಮಟ್ಟದ ಸೇವೆ ನೀಡುವುದು ಅತ್ಯಗತ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕ ಸಂಜಯ್ ಬಿ. ಪಾಟೀಲ ಮಾತನಾಡಿ, ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರ ಸಂಘಗಳ ಜವಾಬ್ದಾರಿ ಹೆಚ್ಚಾಗಿದ್ದು, ಪರಸ್ಪರ ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಚಳವಳಿಯನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಶ್ರೀ ಸೌಹಾರ್ದ ಸಹಕಾರಿ ಸಂಸ್ಥೆ, ವಿಜಯಪುರ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು, ಸಾಲ ವಿತರಣೆ ಮತ್ತು ವಸೂಲಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದರೆ ಸಹಕಾರ ಸಂಘಗಳು ಉತ್ತಮ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಹಾಲಿ ನಿರ್ದೇಶಕ ಸುಭಾಷ್ ಇಂಡಿ ಅವರು ಸಹ ಮಾರ್ಗದರ್ಶನ ನೀಡಿದರು.
ಪ್ರಸ್ತಾವಿಕೆಯನ್ನು ಪ್ರಾದೇಶಿಕ ಅಧಿಕಾರಿ ಬಸವರಾಜ ಹೊಂಗಳ ಅವರು ಮಂಡಿಸಿದರು.
ಪ್ರತಿಭಾ ಮಠ ಅವರು ನಿರೂಪಿಸಿ ವಂದಿಸಿದರು. ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ ಎಸ್. ಅವರು ಸ್ವಾಗತಿಸಿದರು.
ಸಭೆಯಲ್ಲಿ ಹಿರಿಯ ಸಹಕಾರಿಗಳಾದ ಅರುಣ ವಾರದ, ಪರಶುರಾಮ ಚಿಂಚಲಿ, ದೀಪಕ್ ಶಿಂತ್ರೆ, ಸಿದ್ದು ಮಲ್ಲಿಕಾರ್ಜುನಮಠ, ಯಮನಪ್ಪ ಸಾತಿಹಾಳ, ಚಡಚಣದ ಚಂದ್ರಶೇಖರ ಪಾಟೀಲ, ತಾಳಿಕೋಟೆಯ ರಾಜು ಹಂಚಾಟೆ, ಸಿಂದಗಿಯ ಆರ್. ಡಿ. ಕುಲಕರ್ಣಿ, ವಿವೇಕಾನಂದ ಶಿರೋಳ್ಕರ್, ಇಂಡಿಯ ಬಿ. ಎಸ್. ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ಸೌಹಾರ್ದ ಸಹಕಾರ ಸಂಘಗಳ ಪ್ರತಿನಿಧಿಗಳು ಸೇರಿದಂತೆ ಅನೇಕರಿದ್ದರು.

