ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿಎಲ್ಡಿಇಎ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಗ್ರಂಥಾಲಯದ ವತಿಯಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ “ಲೈಬ್ರರಿ ಎಸೆನ್ಷಿಯಲ್ಸ್: ಎಂಪವರಿಂಗ್ ಯೋರ್ ಅಕಾಡೆಮಿಕ್ ಜರ್ನಿ” ಎಂಬ ಶೀರ್ಷಿಕೆಯಡಿ ಗ್ರಂಥಾಲಯ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಡಾ. ಶಿವಗಂಗಾ ಸಾಲೋಟಗಿ ಅವರು ಗ್ರಂಥಾಲಯದಲ್ಲಿರುವ ಮುದ್ರಿತ ಹಾಗೂ ಡಿಜಿಟಲ್ ಸಂಪನ್ಮೂಲಗಳು, OPAC (Online Public Access Catalogue), ಪುಸ್ತಕ ವಿತರಣೆ ಸೇವೆ, ಉಲ್ಲೇಖ ವಿಭಾಗ, ಪತ್ರಿಕೆಗಳು, ನಿಯತಕಾಲಿಕೆಗಳು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು, ಇ-ಸಂಪನ್ಮೂಲಗಳು ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಶೈಕ್ಷಣಿಕ ಸೇವೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸಂಶೋಧನಾ ಸಾಮರ್ಥ್ಯ ಹಾಗೂ ಮಾಹಿತಿ ಸಾಕ್ಷರತೆಯನ್ನು ವೃದ್ಧಿಸುವಲ್ಲಿ ಗ್ರಂಥಾಲಯದ ಮಹತ್ವವನ್ನು ಅವರು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ವಿವಿಧ ವಿಭಾಗಗಳು, ಸಂಗ್ರಹಗಳು ಹಾಗೂ ಸೇವೆಗಳ ಪರಿಚಯವಾಗುವಂತೆ ಮಾರ್ಗದರ್ಶಿತ ಗ್ರಂಥಾಲಯ ಪ್ರವಾಸ (Library Tour) ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಪರೀಕ್ಷಾ ನಿಯಂತ್ರಕರಾದ ಡಾ. ಭಾರತಿ ಮಠ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿ ಪವಾರ್, ಶ್ರೀಮತಿ ಸ್ನೇಹಾ ಬೆಣಕಟ್ಟಿ ಹಾಗೂ ಶ್ರೀ ಶಿವಾನಂದ ಮಠಪತಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಗ್ರಂಥಾಲಯದ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ಗ್ರಂಥಾಲಯದ ವಿವಿಧ ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ತಮ್ಮ ಸಂದೇಹಗಳಿಗೆ ಸ್ಪಷ್ಟನೆ ಪಡೆದುಕೊಂಡರು.

