ಉದಯರಶ್ಮಿ ದಿನಪತ್ರಿಕೆ
ಇಂಡಿ: ಭೀಮಾನದಿಯ ದಡದಲ್ಲಿ ಒಟ್ಟು ೧೬೪ ಹಳ್ಳಿಗಳು ೧೦ ನಗರಗಳು ಲಕ್ಷಾಂತರ ಜನ ಮತ್ತು ಜಾನುವಾರು ಭೀಮಾ ನೀರನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಹೀಗಾಗಿ ಕೂಡಲೆ ಭೀಮಾನದಿಗೆ ನೀರು ಹರಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕೆಂದು ಕರವೇ ಕಾರ್ಯಕರ್ತರು ಕಂದಾಯ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಾಳು ಮುಳಜಿ ಹಾಗೂ ಮುಖಂಡರು, ಈ ಬಾರಿ ಭೀಕರ ಬರಗಾಲ ಆವರಿಸಿದೆ. ಭೀಮಾನದಿ ನೀರನ್ನೆ ನಂಬಿಕೊಂಡಿರುವ ಇಂಡಿ ಚಡಚಣ, ಆಲಮೇಲ, ಸಿಂದಗಿ ತಾಲೂಕಿನ ರೈತರಿಗೆ ಸಮಸ್ಯೆ ಆಗುವ ಹಂತದಲ್ಲಿದೆ, ಮತ್ತೊಂದೆಡೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರವೂ ಏರ್ಪಟ್ಟಿದೆ. ಆದ್ದರಿಂದ ಭೀಮಾನದಿಗೆ ಕಾನೂನಾತ್ಮಕವಾಗಿ ಬರಬೇಕಿರುವ ನೀರಿನ ಪಾಲನ್ನು ಪಡೆಯುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ತುರ್ತು ಅಗತ್ಯವಿದೆ ಎಂದರು.
ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷೆತೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ಪೀಠದ ಭೀಮಾನದಿಯ ನೀರು ಹಂಚಿಕೆಯ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ದುರಂತವೆಂದರೆ ಮಳೆಗಾಲ ದಿನಗಳಲ್ಲಿ ನದಿ ಬತ್ತಿ ಹೋಗುತ್ತಿದ್ದರೂ ಕರ್ನಾಟಕ ಸರಕಾರ ಈ ಭಾಗದ ಜನ ಪ್ರತಿನಿಧಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ. ಕೂಡಲೆ ನೀರು ಹರಿಸಲು ಕ್ರಮ ವಹಿಸದೇ ಹೋದರೆ ನಮ್ಮ ಭಾಗದ ಸರಿಸುಮಾರು ೧೦ ಸಾವಿರ ರೈತರೊಂದಿಗೆ ಇಂಡಿ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಹೇಶ ಹೂಗಾರ, ರಾಮಸಿಂಗ ಕನ್ನೊಳ್ಳಿ, ವಿಠ್ಠಲ ಸೊನ್ನ, ರಾಜು ಪವಾರ, ಪ್ರೇಮ ಕಾಲೇಬಾಗ, ಅಪ್ಪು ಚಂಡಕೆ, ತೇಜಸ್ ದೊಡ್ಡಮನಿ, ನಾಗರಾಜ ಲಾಳಸೇರಿ, ಬಾಗು ಹೊಸಮನಿ, ಶ್ರೀಧರ ವಡ್ಡಿ, ಪರಶುರಾಮ ಬಂಡಾರಿ ಸೇರಿದಂತೆ ಇನ್ನಿತರರು ಇದ್ದರು..

