ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು, ಸವಾಲುಗಳು, ಕಷ್ಟಗಳು ಎಲ್ಲರಿಗೂ ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ನಾವು ಆ ಸವಾಲುಗಳನ್ನು ಕಷ್ಟಗಳನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮ ಜೀವನವನ್ನು ಬದಲಾಯಿಸುತ್ತದೆ. ನೇರವಾಗಿ ಹೇಳಬೇಕೆಂದರೆ ನಾವು ಸವಾಲುಗಳನ್ನು ನೋಡುವ ದೃಷ್ಟಿಕೋನ ನಮ್ಮ ಜೀವನದ ಯಶಸ್ಸನ್ನು ನಿರ್ಧರಿಸುತ್ತದೆ. ಕಷ್ಟಗಳಿಗೆ ಕುಗ್ಗುವವರು ಸಾಮಾನ್ಯರಾಗುತ್ತಾರೆ. ಕುಗ್ಗದ, ಕುಸಿಯದ ಸಾಮಾನ್ಯ ಜನರೇ ಅಸಾಮಾನ್ಯರಾಗುತ್ತಾರೆ. ಅಂದರೆ, ಅಸಾಮಾನ್ಯರು ಅದೇ ಸವಾಲುಗಳನ್ನು ನೋಡುವ ನೋಟವನ್ನು ಬದಲಿಸಿ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮಹಾನ್ ಸಾಧಕರಾಗುತ್ತಾರೆ.
ದೃಷ್ಟಿಕೋನವೆಂದರೆ..?
‘ಬದುಕಿನಲ್ಲಿ ನಡೆವ ಘಟನೆಗಳನ್ನು ಸನ್ನಿವೇಶಗಳನ್ನು ನೋಡುವ, ಅರ್ಥೈಸಿಕೊಳ್ಳುವ ಮತ್ತು ಅವುಗಳಿಗೆ ಪ್ರತಿಕ್ರಿಯಿಸುವ ಒಂದು ವಿಶಿಷ್ಟವಾದ ಮಾನಸಿಕ ಶೈಲಿಯೇ ದೃಷ್ಟಿಕೋನ.’ ಸರಳವಾಗಿ ಹೇಳಬೇಕೆಂದರೆ, ’ಪರಿಸ್ಥಿತಿಗಳು ಹೇಗಿವೆ ಎನ್ನುವುದಕ್ಕಿಂತ ಅವುಗಳನ್ನು ನಾವು ಹೇಗೆ ನೋಡುತ್ತೇವೆ ಎನ್ನುವುದೇ ದೃಷ್ಟಿಕೋನ.
ನಿಮ್ಮ ದೃಷ್ಟಿಕೋನವನ್ನು ದಿನನಿತ್ಯದ ಬದುಕಿನಲ್ಲಿ ಇನ್ನಷ್ಟು ಉತ್ತಮಗೊಳಿಸಲು ಇಲ್ಲಿವೆ ಕೆಲವು ಪ್ರಾಯೋಗಿಕ ಮತ್ತು ಸುಲಭ ಸಲಹೆಗಳು

ದೈಹಿಕ ಭಂಗಿ
ದೇಹಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಮುಖ ಸಿಂಡರಿಸಿಕೊಂಡು ತಲೆ ಬಗ್ಗಿಸಿಕೊಂಡು ಕುಳಿತರೆ ಸಂತಸವೆಂದೂ ಉಕ್ಕುವುದಿಲ್ಲ. ಬದಲಿಗೆ ನಕಾರಾತ್ಮಕತೆ ಮನೆ ಮಾಡುತ್ತದೆ. ಯಾವುದೇ ಕ್ಷಣದಲ್ಲಿ ಬೇಸರ ಇಲ್ಲವೇ ನಿರಾಶೆಯ ಭಾವ ಮೂಡಿದರೆ ತಕ್ಷಣವೇ ನೆಟ್ಟಗೆ ನಿಂತುಕೊಳ್ಳಬೇಕು. ದೀರ್ಘವಾಗಿ ಉಸಿರಾಡಬೇಕು. ಅದರೊಂದಿಗೆ ಮುಖದಲ್ಲಿ ಸಣ್ಣದೊಂದು ಮುಗಳ್ನಗೆ ತಂದುಕೊಳ್ಳಬೇಕು. ಹೀಗೆ ಮಾಡುವುದರಿಂದ ದೃಷ್ಟಿಕೋನವನ್ನು ನಕಾರಾತ್ಮಕತೆಯಿಂದ ಸಕಾರಾತ್ಮಕತೆಯತ್ತ ಹೊರಳಿಸಬಹುದು.
ಸಂಭಾಷಣೆ
ಅಮೇರಿಕಾದ ಪ್ರಸಿದ್ಧ ಲೇಖಕ ಚಾರ್ಲ್ಸ್ ಆರ್ ಸ್ಪಿಂಡಾಲ್ ಹೇಳಿದಂತೆ ‘ಬದುಕು ಎನ್ನುವುದು ಶೇಕಡಾ ೧೦ ರಷ್ಟು ನಮಗೆ ಏನಾಗುತ್ತದೆ ಎಂಬುದು ಮತ್ತು ಶೇಕಡಾ ೯೦ ರಷ್ಟು ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ.’ ಎಂಬುದಾಗಿದೆ ಎಂದಿದ್ದಾರೆ. ‘ನನಗೆ ಯಾವಾಗಲೂ ಹೀಗೆ ಆಗುತ್ತದೆ.’ ‘ನನ್ನಿಂದಾಗದು,’ ಹೀಗೆ ನಮ್ಮ ಜೊತೆ ನಾವು ಮಾತನಾಡಿಕೊಳ್ಳುತ್ತೇವೆ. ಈ ಎಲ್ಲ ನಕಾರಾತ್ಮಕ ಯೋಚನೆಗಳು ನಮ್ಮ ತಲೆಯಲ್ಲಿ ಬಂದಾಗ ಅದನ್ನು ಮುಂದುವರೆಸಿದರೆ ಅದು ನಕಾರತ್ಮಕ ಫಲವನ್ನು ನೀಡುತ್ತದೆ. ಅಂದರೆ ನಮ್ಮ ಆಲೋಚನೆಗಳು ನಕಾರಾತ್ಮಕವಾಗಿದ್ದರೆ ದೃಷ್ಟಿಕೋನವೂ ಕೆಡುತ್ತದೆ. ನಮ್ಮನ್ನು ಕೆಳಕ್ಕೆ ತಳ್ಳುವ ಆಲೋಚನೆಗಳು ಬಂದಾಗ, ಅದನ್ನು ತಕ್ಷಣವೇ ‘ನನ್ನಿಂದ ಇದು ಖಂಡಿತ ಸಾಧ್ಯ.’ ನಾನು ಇದನ್ನು ಕಲಿಯುತಿದ್ದೇನೆ.’ ಇದನ್ನು ನಾನು ನಿಭಾಯಿಸಬಲ್ಲೆ ಎಂದೆಲ್ಲ ಸಕಾರಾತ್ಮಕವಾದ ಹೇಳಿಕೆಗಳನ್ನು ಹೇಳಿಕೊಳ್ಳುವುರ ಮೂಲಕ ನಕಾರಾತ್ಮಕ ಸಂಭಾಷಣೆಯನ್ನು ಧನಾತ್ಮಕವಾಗಿ ಬದಲಾಯಿಸಿಕೊಳ್ಳಬೇಕು.
ಸಮಸ್ಯೆ
ನಾವು ಸದಾ ನೋಡುವುದು ಸಮಸ್ಯೆಯನ್ನೇ ಹೊರತು, ಅದರ ಪರಿಹಾರವನ್ನಲ್ಲ. ಸಮಸ್ಯೆಯ ಬಗ್ಗೆ ಯೋಚಿಸುತ್ತ ಕುಳಿತರೆ ಅದು ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಆದ್ದರಿಂದ ಏನಾದರೂ ಸಮಸ್ಯೆ ಬಂದಾಗ ‘ ಇದು ಏಕೆ ಆಯಿತು?’ ಎಂದು ಕೊರಗುತ್ತ ಕುಳಿತುಕೊಳ್ಳುವ ಬದಲು, ‘ಇದಕ್ಕೆ ಪರಿಹಾರವೇನು? ಸಮಸ್ಯೆಗೆ ನಾನು ಏನು ಮಾಡಿದರೆ ಇದರಿಂದ ಆಚೆ ಬರಬಲ್ಲೆ? ಎಂದೆಲ್ಲ ಯೋಚಿಸಲು ಪ್ರಾರಂಭಿಸಬೇಕು. ಕಠಿಣವಾದ ಕೆಲಸ ಸಿಕ್ಕಾಗ, ನನಗೆ ಯಾಕೆ ಈ ಕಷ್ಟ? ಎಂದು ಬೇಸರಪಟ್ಟುಕೊಳ್ಳುವ ಬದಲು, ‘ಇದು ನನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಿಕ್ಕ ಅವಕಾಶವೆಂದು ಉಪಯೋಗಿಸಿಕೊಳ್ಳಬೇಕು. ನಮಗೆ ಎದುರಾಗುವ ಕಷ್ಟಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲದಿರಬಹುದು ಆದರೆ ಆ ಕಷ್ಟಗಳನ್ನು ಎದುರಿಸುವ ನಮ್ಮ ದೃಷ್ಟಿಕೋನವೇ ನಮ್ಮ ಸೋಲು ಅಥವಾ ಗೆಲುವನ್ನು ನಿರ್ಧರಿಸುತ್ತದೆ.
ಸಮಯ
‘ಟೈಮ್ ಈಸ್ ಮನಿ.’ ಅನ್ನುತ್ತಾರೆ. ಆದರೆ ಸಮಯ ಹಣಕ್ಕಿಂತ ದೊಡ್ಡದು. ಏಕೆಂದರೆ ನಮ್ಮ ಬಳಿಯಿರುವ ಹಣ ಎಷ್ಟು ಅಂತ ನಮಗೆ ಗೊತ್ತು. ಅದನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ನಮ್ಮ ಬಳಿ ಇರುವ ಸಮಯ ಎಷ್ಟು ಅಂತ ಗೊತ್ತಿಲ್ಲ. ಮತ್ತು ಅದನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ ನಾವು ಎದ್ದು ತಕ್ಷಣ ಮಾಡುವ ಕೆಲಸಗಳು ನಮ್ಮ ದಿನದ ಮೂಡ್ ಮತ್ತು ದೃಷ್ಟಿಕೋನವನ್ನು ನಿರ್ಧರಿಸುತ್ತವೆ. ಆದ್ದರಿಂದ ಬೆಳಿಗ್ಗೆದ್ದು ಮೊಬೈಲ್ ನೋಡುವುದು ನಕಾರಾತ್ಮಕ ಸುದ್ದಿ ಓದುವುದನ್ನು ಬಿಡಬೇಕು. ಅದರ ಜಾಗದಲ್ಲಿ ಮುಂಜಾನೆಯ ಮೊದಲ ಒಂದು ಗಂಟೆ ಒಳ್ಳೆಯ ಪುಸ್ತಕ ಓದಬೇಕು. ಕೈಯಲ್ಲಿರುವ ಈ ದಿನವನ್ನು ಹೇಗೆ ಸುಂದರಗೊಳಿಸಬಲ್ಲೆ ಎಂದು ಯೋಚಿಸಿ ಯೋಜನೆ ಹಾಕಿಕೊಂಡು ಆ ಪ್ರಕಾರ ಕೆಲಸ ಮಾಡಬೇಕು.
ಹೋಲಿಕೆ
ಇತರರ ಜೀವನದ ಜೊತೆಗೆ ನಮ್ಮ ಜೀವನವನ್ನು ಹೋಲಿಸಿಕೊಂಡು ಕರಬುತ್ತೇವೆ. ಬೇರೆಯವರು ಅದೃಷ್ಟವಂತರು ನಾನು ನತದೃಷ್ಟ. ಇತರರಿಗೆ ಎಲ್ಲವೂ ಸುಲಭವಾಗಿ ದೊರೆಯುತ್ತದೆ. ನನಗೆ ಎಷ್ಟೇ ಕಷ್ಟ ಪಟ್ಟರೂ ಏನೂ ದೊರೆಯುತ್ತಿಲ್ಲ ಎಂದು ಹಲಬುತ್ತೇವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಜೀವನ ನೋಡಿ ಕೀಳರಿಮೆ ಅನುಭವಿಸುತ್ತೇವೆ. ಕೀಳರಿಮೆ ಒಮ್ಮೆ ಜೀವನದಲ್ಲಿ ಪ್ರವೇಶ ಪಡೆಯಿತೆಂದರೆ ಮೇಲೇಳಲು ಬಿಡುವುದಿಲ್ಲ. ಆದ್ದರಿಂದ ನನ್ನ ಜೀವನ ಕೀಳು ಎಂದುಕೊಳ್ಳುವುದು ಜೀವನವನ್ನೇ ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮನ್ನು ನೀವು ಬೇರೆಯವರಿಗೆ ಹೋಲಿಸಿಕೊಳ್ಳುವ ಬದಲು ನಿಮ್ಮ ಇಂದಿನ ಸ್ಥಿತಿಯನ್ನು ನಿಮ್ಮದೇ ನಿನ್ನೆಯ ಸ್ಥಿತಿಗೆ ಹೋಲಿಸಿಕೊಳ್ಳಿ. ಇತರರ ಏಳ್ಗೆಯನ್ನು ಕಂಡು ಅಸೂಯೆ ಪಡುವ ಬದಲು ಅವರಿಂದ ಪ್ರೇರಣೆ ಪಡೆಯುವುದು ಒಳ್ಳೆಯದು.
ಸನ್ನಿವೇಶ

ಯಾವುದೇ ಸನ್ನಿವೇಶಗಳು ಹೇಳಿ ಕೇಳಿ ಬರುವುದಿಲ್ಲ. ಹಾಗೆಯೇ ಕಷ್ಟಗಳು ಸಹ. ಕಷ್ಟಗಳು ಎದುರಾದಾಗ ನನಗೆ ಏಕೆ ಈ ಕಷ್ಟಗಳು ಎಂದೆಲ್ಲ ಗೊಣುಗುವ ಬದಲು ಈ ಸವಾಲನ್ನು ನಾನು ಹೇಗೆ ನಿಭಾಯಿಸಬಲ್ಲೆ. ಇದರಿಂದ ನಾನು ಯಾವ ರೀತಿಯ ಹೊಸ ಪಾಠ ಕಲಿಯಬಲ್ಲೆ. ಹೇಗೆ ಮುಂದಿನ ಕಷ್ಟಗಳನ್ನು ಎದುರಿಸಲು ಗಟ್ಟಿಯಾಗಬಲ್ಲೆ ಎಂದೆಲ್ಲ ಯೋಚಿಸಬೇಕು. ಇದರರ್ಥ ಇಷ್ಟೆ, ಬದುಕಿನಲ್ಲಿ ನಡೆಯುವ ಆಕಸ್ಮಿಕ ಸನ್ನಿವೇಶಗಳನ್ನು ಹೇಗೆ ನೋಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸನ್ನಿವೇಶಗಳನ್ನು ನಿಭಾಯಿಸುವಾಗ ಕೋಪದ ಬದಲು ತಾಳ್ಮೆಯ ಹೆಜ್ಜೆಗೆ ಆದ್ಯತೆ ನೀಡಿದರೆ ಜೀವನದ ಪ್ರತಿ ಪ್ರೀತಿ ಹೆಚ್ಚುತ್ತದೆ.
ಸಂತಸ
ನನಗೆ ದೊಡ್ಡ ಗೆಲುವು ಸಿಕ್ಕಾಗ ನಾನು ಖುಷಿ ಪಡುತ್ತೇನೆಂದು ಕಾಯುತ್ತ ಕೂತರೆ ಸಣ್ಣ ಪುಟ್ಟ ಸಂತೋಷಗಳು ಕೈತಪ್ಪಿ ಹೋಗುತ್ತವೆ. ದಿನ ರಾತ್ರಿ ಮಲಗುವಾಗ ಉತ್ತಮ ಕೆಲಸಗಳನ್ನು ನೆನಪಿಸಿಕೊಳ್ಳಬೇಕು. ಅದು ಯಾವುದೇ ಇರಬಹುದು. ನೀವು ಅಂದುಕೊಂಡಂತೆ ವಾಕಿಂಗ್ ಹೋಗಿದ್ದು ಇರಬಹುದು. ಇಲ್ಲವೇ ಅಭ್ಯಾಸ ಮಾಡಿದ್ದು ಇರಬಹುದು. ಬೇರೆಯವರಿಗೆ ಮಾಡಿದ ಸಣ್ಣ ಸಹಾಯವೂ ಇರಬಹುದು. ಇಂಥವುಗಳನ್ನು ನೆನೆಯುವುದರಿಂದ ನಿಮ್ಮ ಮೆದುಳಿಗೆ ಧನಾತ್ಮಕ ಸಂದೇಶ ನೀಡುತ್ತದೆ.
ಮುಳ್ಳುಗಳಿರುವ ಗಿಡ
ಬದುಕು ಕೆಟ್ಟದಾಗಿಲ್ಲ ಅಥವಾ ಒಳ್ಳೆಯದಾಗಿಲ್ಲ. ‘ನಮ್ಮ ದೃಷ್ಟಿಕೋನ ಬದಲಾದರೆ, ನಮ್ಮ ಸೃಷ್ಟಿಯೇ ಬದಲಾಗುತ್ತದೆ.’ ಸಕಾರಾತ್ಮಕ ದೃಷ್ಟಿಕೋನದಿಂದ ನೋಡಿದರೆ ಬದುಕಿನಲ್ಲಿ ಒಳ್ಳೆಯದೇ ಕಾಣಿಸುತ್ತದೆ. ನಕಾರಾತ್ಮಕವಾಗಿ ನೋಡಿದರೆ ಕೇವಲ ಕೆಟ್ಟದ್ದೇ ಕಾಣಿಸುತ್ತದೆ. ಹಾಗಾಗಿ ನಾವು ಸಮಸ್ಯೆಗಳ ನಡುವೆಯೂ ಉತ್ತಮವಾದುದನ್ನು ಹೆಕ್ಕಿ ತೆಗೆಯುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಮುಳ್ಳುಗಳಿರುವ ಗಿಡದಲ್ಲಿ ಅರಳಿ ನಿಂತಿರುವ ಗುಲಾಬಿ ಕಡೆ ನೋಡಿದರೆ ಸಂತಸವೆನಿಸುತ್ತದೆ. ಕೇವಲ ಮುಳ್ಳುಗಳನ್ನು ನೋಡಿದರೆ ನೋವೆನಿಸುತ್ತದೆ. ’ಕಾಮಾಲೆ ಕಣ್ಣಿದ್ದವರಿಗೆ ಕಂಡದ್ದೆಲ್ಲಾ ಹಳದಿ.’ ಎಂಬ ಮಾತಿನಂತೆ ಮನಸ್ಸು ಒಳಗಿನಿಂದ ಹೇಗಿರುತ್ತದೆಯೋ ಹಾಗೆ ಹೊರಗಿನ ಬದುಕು ಕಾಣುತ್ತದೆ. ದೃಷ್ಟಿಕೋನ ಎಂಬುದು ಕಣ್ಣುಗಳಿಗೆ ಧರಿಸುವ ಕನ್ನಡಕದಂತೆ. ಕಪ್ಪಾಗಿದ್ದರೆ ಜಗತ್ತು ಕತ್ತಲೆಯಾಗಿ ಕಾಣುತ್ತದೆ. ಅದೇ ಬಣ್ಣದ ಕನ್ನಡಕ ಹಾಕಿದರೆ ಜಗತ್ತು ವರ್ಣರಂಜಿತವಾಗಿ ಕಾಣುತ್ತದೆ. ‘ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸುವುದು ನಮ್ಮ ಪರಿಸ್ಥಿತಿಯಲ್ಲ, ನಮ್ಮ ದೃಷ್ಟಿಕೋನ.’ ಎಂದು ತಿಳಿದು ನಡೆದಾಗ ಬದುಕಿನಲ್ಲಿ ಕಷ್ಟಗಳೆಂಬ ಮುಳ್ಳುಗಳಿದ್ದರೂ ಜೀವನ ಗುಲಾಬಿ ತೋಟವಾಗಿ ಕಂಗೊಳಿಸುತ್ತದೆ.


