ಚಿಮ್ಮಡ ಗ್ರಾಮದ ಸರಕಾರಿ ಪಪೂ ವಿದ್ಯಾಲಯ | ಉಪನ್ಯಾಸಕರ ಕೊರತೆಯಿಂದ ಬಳಲುತ್ತಿರುವ ಕಾಲೇಜು
ಉದಯರಶ್ಮಿ ದಿನಪತ್ರಿಕೆ
ವರದಿ: ಇಲಾಹಿ ಇ. ಜಮಖಂಡಿ
ಚಿಮ್ಮಡ: ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯಕ್ಕೆ ಪ್ರಾಚಾರ್ಯರು, ಉಪನ್ಯಾಸಕರೂ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತಿದ್ದು, ವಿದ್ಯಾಲಯದ ಕಟ್ಟಡ ಹಾಗೂ ಸಮರ್ಪಕ ಸಿಬ್ಬಂದಿಗಳಿಲ್ಲದೆ ಉತ್ತಮ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿರುವ ಚಿಮ್ಮಡ ಗ್ರಾಮಕ್ಕೆ ಕಳೆದ ಐದು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ನೇಸ್ವಿ ಗ್ರಾಮದಿಂದ ಸ್ಥಳಾಂತರಗೊಂಡ ಈ ಸರಕಾರಿ ಪದವಿಪೂರ್ವ ವಿದ್ಯಾಲಯಕ್ಕೆ ಇದುವರೆಗೆ ಸಮರ್ಪಕ ಉಪನ್ಯಾಸಕರ ನೇಮಕವಾಗಿಲ್ಲ, ಈ ವಿದ್ಯಾಲಯಕ್ಕೆ ಮಂಜೂರಾಗಿರುವ ಪ್ರಾಚಾರ್ಯ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜಶಾಸ್ತ, ರಾಜ್ಯಶಾಸ್ತ್ರ, ಹಾಗೂ “ಡಿ”ದರ್ಜೆಯ ಹುದ್ದೆಗಳಲ್ಲಿ ಕೇವಲ ಒಬ್ಬ ಉಪನ್ಯಾಸಕರು, ಹಾಗೂ ಓರ್ವ “ಡಿ”ದರ್ಜೆಯ ನೌಕರರು ಮಾತ್ರ ಕಾರ್ಯ ನಿರ್ವಹಿಸುತಿದ್ದು, ಉಳಿದಂತೆ ಮೂವರು ಅತಿಥಿ ಉಪನ್ಯಾಸಕರು ನೇಮಕಗೊಂಡಿದ್ದಾರೆ. ವಿದ್ಯಾಲಯಕ್ಕೆ ಅತೀ ಅವಶ್ಯವಿರುವ ಪ್ರಾಚಾರ್ಯ ಹುದ್ದೆ ಹಾಗೂ ಪ್ರಥಮ ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇರುವುದರಿಂದ ಇರುವ ಉಪನ್ಯಾಸಕರೇ ಆ ಕಾರ್ಯಗಳನ್ನು ನಿಭಾಯಿಸಬೇಕಾಗಿರುವುದರಿಂದ ತೀವ್ರ ತೊಂದರೆಯಾಗಿದೆ,
ಪ್ರಸಕ್ತ ಸಾಲಿನಲ್ಲಿ ೧೭೦ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದು ವಿದ್ಯಾರ್ಥಿಗಳಿಗೆ ಸ್ಥಳಿಯ ಸರಕಾರಿ ಪ್ರೌಢಶಾಲೆಯ ಎರಡು ಕೊಠಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಒಂಡು ಇಕ್ಕಟ್ಟಾದ ಕಟ್ಟಡಗಳಲ್ಲಿ ಪಾಠಭೋದನೆ ಮಾಡಲಾಗುತಿದ್ದು, ಸ್ವಂತ ಸೂರು ಹಾಗೂ ಸಮರ್ಪಕ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದ್ದು, ಸರಕಾರ ಈ ಕುರಿತು ಕೂಡಲೆ ಕ್ರಮವಹಿಸಿ ಈ ಶಾಲೆಗೆ ಇನ್ನುಳಿದ ಅಗತ್ಯ ಹುದ್ದೆಗಳಾದ ಕನ್ನಡ, ಇತಿಹಾಸ, ವಾಣಿಜ್ಯಶಾಸ್ತ್ರ, ಹಾಗೂ ಪ್ರಥಮ ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಮಂಜೂರು ಮಾಡಿ ಈ ವಿದ್ಯಾಲಯವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ ವ್ಯಾಪ್ತಿಗೆ ಸೇರಿಸಿ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮದ ನಾಗರಿಕರು ಒತ್ತಾಯಿಸಿದ್ದಾರೆ.
“ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯಕ್ಕೆ ಅಗತ್ಯ ಉಪನ್ಯಾಸಕ ಹುದ್ದೆಗಳೂ, ತಾಂತ್ರಿಕ ಸಿಬ್ಬಂದಿ ಹಾಗೂ ಸ್ವಂತ ಕಟ್ಟಡ ನಿರ್ಮಿಸಿ ಕೊಡುವಂತೆ ಹಲವಾರು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೆ ಪ್ರಯೋಜನವಾಗಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳು ಪದವಿಪೂರ್ವ ವಿದ್ಯಾರ್ಜನೆಗಾಗಿ ಪರಸ್ಥಳಗಳಿಗೆ ತೆರಳುವಂತಾಗಿದೆ.
– ಅವ್ವನೆಪ್ಪ ಮುಗಳಖೋಡ
ಅಧ್ಯಕ್ಷರು, ಕಾಲೇಜು ಅಭಿವೃಧ್ಧಿ ಹಾಗೂ ಮೇಲುಸ್ತುವಾರಿ ಸಮೀತಿ.
” ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯದಲ್ಲಿ ಉಪನ್ಯಾಸಕರ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ಪ್ರಸಕ್ತ ಸಾಲಿನ ಫಲಿತಾಂಶದ ಕಲಾ ವಿಭಾಗದಲ್ಲಿ ಶೇ.೧೦೦ ಫಲತಾಂಶ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು ಅಗತ್ಯ ಸೌಲಭ್ಯ ದೊರೆತಲ್ಲಿ ಈ ಕಾಲೇಜು ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ.
– ಶ್ರೀಮತಿ ಎಸ್.ಕೆ. ರಾಠೋಡ
ಪ್ರಭಾರ ಪ್ರಾಚಾರ್ಯರು.

