ಲೇಖನ
– ರಶ್ಮಿ ಕೆ. ವಿಶ್ವನಾಥ್.
ಮೈಸೂರು
ಉದಯರಶ್ಮಿ ದಿನಪತ್ರಿಕೆ
ಹೌದಲ್ಲಾ.. ಅನ್ನಿಸಿದ್ದೆಲ್ಲವನ್ನು ಹೇಳುವಂತಿದ್ದಿದ್ದರೆ ಅಥವಾ ಮಾಡುವಂತಿದ್ದಿದ್ದರೆ ಎಷ್ಟು ಚಂದ ಇರ್ತಿತ್ತು. ಇದು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಬಂದುಹೋಗುವ ಆಸೆಯೆ.
ಮನಸಿಗೆ ಬಂದ ಮಾತು ಬಾಯಿಗೆ ಬಂದುಬಿಡಬೇಕು. ಬಾಯಿಗೆ ಬಂದ ಮಾತು ತಲುಪಬೇಕಾದವರ ಕಿವಿಗೆ ತಲುಪುತ್ತದೆಯೋ ಇಲ್ಲವೋ. ಒಟ್ಟಿನಲ್ಲಿ ಅಂದುಕೊಂಡವರ ಮನಸು ನಿರಾಳವಾಗುತ್ತದೆ.
ಈ ಹುಡುಗನಿಗೆ ಕಾಸ್ಟ್ಲಿ ಬೈಕ್ ಸಿಕ್ಕಿಬಿಡಬೇಕು, ಆ ಹುಡುಗಿಗೆ ಆಪಲ್ ಐ ಫೋನ್ ಕೊಡಿಸಿಬಿಡಬೇಕು,
ಕಳ್ಳನಿಗೆ ಕದಿಯಬೇಕು, ಕೊಲೆಗಾರನಿಗೆ ಕೊಲೆ ಮಾಡಬೇಕು, ಪರಪತ್ನಿ ಪರಪತಿ ಆಗಿದ್ದರು ಸಹ ಅವರಿಬ್ಬರೂ ಒಂದಾಗಿಬಿಡಬೇಕು, ಇವನಿಗೆ ಲಾಟರಿ ಹೊಡೆದು ಆಗರ್ಭ ಶ್ರೀಮಂತನಾಗಿಬಿಡಬೇಕು..
ಉಹೂಂ. ಇದಾವುದರ ಬಗ್ಗೆಯೂ ಇವಾಗ ನಾ ಹೇಳಹೊರಟಿಲ್ಲ.
ನಿತ್ಯದ ಬದುಕಿನಲ್ಲಿ ಕಾಡುವ, ಸಾದಾ ಸೀದಾ ಪುಟ್ಟ ವಿಷಯಗಳ ಬಗ್ಗೆಯಷ್ಟೆ ಬೆಳಕು ಚೆಲ್ಲುತ್ತಿದ್ದೇನೆ.
ಅಂದು ಆ ಮಗುವಿನ ನಾಮಕರಣ ಇತ್ತಲ್ಲ, ಹಾಗಾಗಿ ಆ ಫಂಕ್ಷನ್ನಿಗೆ ಹೋಗಿದ್ದೆ. ‘ಸಂಗೀತ’ ತನ್ನ ಸಂಗೀತ ಶುರುಮಾಡಿದಳು. “ಆ ತಾರಾ ಇದ್ದಾಳಲ್ಲ. ಅವಳು ಹಾಗೆ.. ಅವಳು ಹೀಗೆ.. ಅವಳನ್ನ ನಾನು ಜೀವನದಲ್ಲೆ ಮಾತಾಡಿಸೋಲ್ಲ.. ” ಹೀಗೆ ಮುಂದುವರೆದಿದ್ದವು ಆಪಾದನೆಗಳು. ಅವೆಲ್ಲವು ನಿಜವೆ. ಅದು ನನಗೂ ತಿಳಿದ ಸಂಗತಿಯೆ. ಹಾಗಾಗಿ ಸುಮ್ಮನೆ ಕೇಳುತ್ತಿದ್ದೆ.
ಸ್ವಲ್ಪ ಹೊತ್ತಿನ ನಂತರ ಕಾರ್ಯಕ್ರಮಕ್ಕೆ ‘ತಾರಾ’ಳ ಆಗಮನವಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಂಗೀತ, ತಾರಾ ಬಂದಕೂಡಲೇ, ಅವಳೆಡೆಗೆ ಎದ್ದುಹೋಗಿ ಬಾಯಿತುಂಬಾ ಮಾತನಾಡಿಸತೊಡಗಿದಳು. ನನಗೆ ಆಶ್ಚರ್ಯ. ‘ಅಯ್ಯೋ ದೇವಾ ಇಂತ ಮಾನಗೆಟ್ಟೋವಕ್ಕೆ ಏನು ಹೇಳುವುದು’ ಎಂದು ಮನಸಿನಲ್ಲೇ ಅಂದುಕೊಂಡು ಸುಮ್ಮನಾದೆ. ಯಾಕಂದ್ರೆ ಬಾಯಿಬಿಟ್ಟು ಹೇಳುವಂತಿಲ್ಲವಲ್ಲ.
ಆ ‘ಮಧುರ’ ಇದ್ದಾಳಲ್ಲ ಅವಳಂತ ಬುರುಡೆರಾಣಿ ಮತ್ತೊಬ್ಬರಿಲ್ಲ. ವರ್ಷಕ್ಕೊಂದು ಕೆಲಸ ಬಿಡ್ತಾಳೆ. ‘ಅಲ್ಲಿ ಅದು ಸರಿಯಿಲ್ಲ. ಇಲ್ಲಿ ಇದು ಸರಿಯಿಲ್ಲ, ಅದಕ್ಕೆ ಕೆಲಸ ಬಿಟ್ಟುಬಂದೆ’ ಅಂತಾಳೆ.
ನಾನು ಸಹ ಅದೇ ಫೀಲ್ಡ್ ನಲ್ಲಿದ್ದೀನಿ ನನಗೂ ಸತ್ಯ ಗೊತ್ತಾಗುತ್ತೆ ಎನ್ನುವ ಭಯವೇ ಇಲ್ಲ. ಅದು ಅವಳು ‘ಬಿಟ್ಟದ್ದಲ್ಲ’, ಅವರು ‘ತೆಗೆದದ್ದು ‘ ಎಂದು ತಿಳಿದಿದ್ದರೂ ನಾ ಏನೂ ಹೇಳುವಂತಿಲ್ಲ..
ಇನ್ನು ‘ನೇಸರ’ಳ ಬಾಸು ದೊಡ್ಡ ‘ಸೈಕೊ’ ಈ ಪದ ಬೇಕಾ.. ಬೇಕು, ಯಾಕಂದ್ರೆ ಈ ಪದವೇ ತುಂಬಾ ಚೆನ್ನಾಗಿ ಹೊಂದುವುದು. ಹಾಗಾಗಿ ಆ ಪದವನ್ನ ವಿಧಿಯಿಲ್ಲದೆ ಬಳಸಲೇಬೇಕು.

ತನಗಂತು ಮಕ್ಕಳಿಲ್ಲ ಮರಿಯಿಲ್ಲ. ಅದಕ್ಕೆ ಉಳಿದವರನ್ನು ಅಫೀಸಿನಲ್ಲಿಯೇ ಕೂರಿಸಿಕೊಂಡು ಕೂರೋದಾ.. ಒಂದು ದಿನ ಚಂದ ಎರಡು ದಿನ ಚಂದ, ದಿನವೂ ಕಛೇರಿ ಸಮಯ ಮುಗಿದ ಅರ್ಧಗಂಟೆಯ ನಂತರವೂ ‘ಇರಿ ‘ ಎಂದರೆ ಏನು ಹೇಳುವುದು.
ತಾನುಮಾತ್ರ ವಾರಗಟ್ಟಲೆ ಟ್ರಿಪ್ ಹೋಗುತ್ತೆ. ಆದರೆ ನೇಸರಳಿಗೆ ಒಂದು ದಿನ ತನ್ನ ರಜ ತಾನು ತೆಗೆದುಕೊಳ್ಳಲು ಬಿಡುವುದಿಲ್ಲ.
‘ತಲೆಬಗ್ಗಿಸಿ ಉಳುವ ಎತ್ತಿಗೆ ಭಾರ ಹೆಚ್ಚು’ ಎಂಬಂತೆ, ಯಾರು ಸುಮ್ಮನೆ ಕೆಲಸವನ್ನ ಮಾಡುತ್ತಲೇ ಇರುತ್ತಾರೊ ಅವರಿಗೆ ಮಾತ್ರ ಇವೆಲ್ಲ ಗೋಳು. ‘ನಾ ಇರೋದೇ ಹೀಗೆ’ ಎನ್ನುವವರಿಗೆ ತಾನೇ ಹೆದರಿ ಸುಮ್ಮನಾಗುತ್ತದೆ. ಬರೀ ತಾರತಮ್ಯ.
ಎಲ್ಲವನ್ನೂ ಮುಂದೆಯೇ ಹೇಳಿಬಿಡಬೇಕು ಎನಿಸುತ್ತೆ ಆದರೆ ಹೇಳುವಂತಿಲ್ಲ. ಕೆಲಸದ ಭಯ.
ಇನ್ನು ‘ನಂದಿನಿ’ ಮನೆಯ ಪಕ್ಕದೊಂದು ನಾಯಿಬಾಳು.
ಎರಡು ಮಕ್ಕಳು ಹಡೆದದ್ದೇ ದೊಡ್ಡಸಾಧನೆ. ಆ ಮಕ್ಕಳು ಎಷ್ಟು ಕಚ್ಚಾಡಿ ಕಿತ್ತಾಡಿಕೊಂಡರು ಅಮ್ಮ ಎನಿಸಿಕೊಂಡವಳಿಗೆ ಅದರ ಗೋಜೆ ಬೇಕಿಲ್ಲ.
ತನ್ನ ಪಾಡಿಗೆ ತಾನು ಫೋನ್ ನಲ್ಲಿ, ಹಿಂದಿನ ಬೀದಿ ಮುಂದಿನ ಬೀದಿ ಜನರೊಂದಿಗೆ ಹರಟುವುದು, ಶಾಪಿಂಗ್ ಮಾಡುವುದು ಬರೀ ಇದೆ ಕ್ಯಾಮೆ. ಒಮ್ಮೊಮ್ಮೆ ತುಂಬಾ ಕೋಪ ಬಂತು ಎಂದರೆ ಇಬ್ಬರಿಗೂ ಚೆನ್ನಾಗಿ ದನಕ್ಕೆ ಬಡಿದಂಗೆ ಬಡಿದುಬಿಡುವುದು. ಅವು ಬೀದಿಯಲ್ಲಿ ಅಲ್ಲಿ ಇಲ್ಲಿ ಏನೋ ಆಟ ಆಡಿಕೊಂಡೊ, ಕಚ್ಚಾಡಿಕೊಂಡೊ ಹೇಗೋ ಬೆಳದುಕೊಳ್ಳುತ್ತಿವೆ. ಹೀಗಿರುವ ಮಕ್ಕಳೇ ಮುಂದಿನ ದಿನಗಳಲ್ಲಿ ಹೆಚ್ಚು ಸಮಾಜಘಾತುಕರಾಗಿ ಬೆಳೆಯುವುದು ಎಂಬುದು ಉದಾಹರಣೆಗಳಿಂದ ಸಾಬೀತಾದ ವಿಷಯವೆ. ಆದರೆ ಹೆತ್ತವಳಿಗೆ ಅದರ ಗೊಡವೆಯೇ ಇಲ್ಲ.’ಅಯ್ಯೋ ಅದಕ್ಕೆಲ್ಲ ನಾ ತಲೆಕೆಡಿಸಿಕೊಳ್ಳೋಲ್ಲಪ್ಪ. ಅವನ್ನೇ ನೋಡ್ತಾ ಕುತ್ಕೊಂಡ್ರೆ, ನಾ ಎಂಜಾಯ್ ಮಾಡೋದು ಯಾವಾಗ..” ಅಂತಾಳೆ. ಆದರೆ ಯಾರಾದ್ರೂ ನೆಂಟರು ಬಂದಾಗ, ಮಕ್ಕಳಿಂದ ಏನಾದ್ರು ಕೆಲಸ ಮಾಡಿಸಿಕೊಳ್ಳಬೇಕು ಎಂದಾಗ ಮಾತ್ರ ‘ಚಿನ್ನ ರನ್ನ’ ಅಂತಾಳೆ. ದೊಡ್ಡ ‘ಡ್ರಾಮಾ ಕ್ವೀನು’.
ಇದೆಲ್ಲವನ್ನ ಅವಳ ಮುಂದೆ ನೇರವಾಗಿ ಹೇಳೋಕ್ಕಾಗಲ್ಲ… ಹೇಳಿದರು ಪ್ರಯೋಜನವೂ ಇಲ್ಲ.
ಒಮ್ಮೆ ‘ಹರಿಣಿ’ಯ ಲವರ್ ಕೇಳಿದ್ರಂತೆ “ನೀನಂದ್ರೆ ನಂಗೆ ತುಂಬಾ ಇಷ್ಟ, ನಿನಗೋಸ್ಕರ ಏನು ಮಾಡಬೇಕು ಹೇಳು ಮಾಡ್ತೀನಿ” ಅಂತ
ಹರಿಣಿ ಹೇಳಿದ್ದಾಳೆ “ಸರಿ ಹಾಗಾದ್ರೆ, ನಾ ಹೇಳ್ತೀನಿ ಅವರನ್ನೆಲ್ಲ ಶೂಟ್ ಮಾಡಿಕೊಂಡು ಬಂದುಬಿಡಿ, ಇಲ್ಲಾಂದ್ರೆ atleast ನಾ ಹೇಳಿದ್ದನ್ನ ಅವರಿಗೆ ಹೇಳಿಬಿಡಿ” ಅಂತ.
ಅವ ನಕ್ಕು ಹೇಳಿದ್ನಂತೆ “ಅಯ್ಯೋ ಪುಣ್ಯಾತ್ಗಿತ್ತಿ ನಿನಗೂ ನನಗೂ ಸಂಬಂಧಪಟ್ಟಿದ್ದು ಮಾತ್ರ ಹೇಳು” ಅಂತ
ಅದು ಸರೀನೇ ಬಿಡಿ ‘ಇದು ಮಾಡುವ ಹಾಗಿಲ್ಲ, ಅದು ಮಾಡುವ ಹಾಗಿಲ್ಲ’ ಎಂದು ಅಷ್ಟೊಂದು ಕಾನೂನು ಕಟ್ಟಳೆಗಳು, ನಿಯಮಗಳು ಇದ್ದರೂ ಸಹ ಅವುಗಳ ಉಲ್ಲಂಘನೆ ಆಗುತ್ತಿದೆ.
ಇನ್ನೂ ಮನಸಿಗನಿಸಿದ್ದನ್ನ ನೇರವಾಗಿ ಹೇಳುವ, ಮಾಡುವ ಸ್ವಾತಂತ್ರ ಸಿಕ್ಕಿಬಿಟ್ಟರೆ ಎಲ್ಲವೂ ಅಲ್ಲೋಲ ಕಲ್ಲೋಲ.
ಹಾಗಿದ್ದಿದ್ದರೆ.. ಎಂಬ ಚಿಕ್ಕ ಆಸೆ ನುಸುಳಿತು ಅಷ್ಟೆ.


