₹5 ಲಕ್ಷ ಶೂನ್ಯ ಬಡ್ಡಿ ಸಾಲ ಘೋಷಣೆ ಕಾಗದದಲ್ಲೇ | ಎಕರೆಗೆ ₹1 ಲಕ್ಷ ಸಾಲ ನೀಡಲು ರೈತರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ, (ಜಮಖಂಡಿ): ರೈತರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ, ಬ್ಯಾಂಕ್ಗಳಲ್ಲಿ ಕೇವಲ ₹40 ಸಾವಿರದಿಂದ ₹50 ಸಾವಿರದವರೆಗೆ ಮಾತ್ರ ಸಾಲ ವಿತರಿಸಲಾಗುತ್ತಿದೆ. ಸರ್ಕಾರದ ಘೋಷಣೆ ಮತ್ತು ಬ್ಯಾಂಕ್ಗಳ ಅನುಷ್ಠಾನದ ನಡುವಿನ ತೀವ್ರ ವ್ಯತ್ಯಾಸದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಎಕರೆಗೆ ಕನಿಷ್ಠ ₹1 ಲಕ್ಷವನ್ನು ಶೂನ್ಯ ಬಡ್ಡಿದರದಲ್ಲಿ ಸಾಲವಾಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದರು.
ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಜಮಖಂಡಿಯ ಡಿಸಿಸಿ ಬ್ಯಾಂಕ್ ಎದುರು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಚುನಪ್ಪ ಪೂಜಾರಿ, ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ₹1 ಲಕ್ಷ ವೆಚ್ಚವಾಗುತ್ತಿದೆ. ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೂ ಲಕ್ಷಾಂತರ ರೂಪಾಯಿ ಬಂಡವಾಳ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ₹40 ಸಾವಿರ ಅಥವಾ ₹50 ಸಾವಿರ ಸಾಲದಿಂದ ಕೃಷಿ ನಡೆಸುವುದು ಸಾಧ್ಯವೇ ಇಲ್ಲ ಎಂದು ಸರ್ಕಾರ ಮತ್ತು ಬ್ಯಾಂಕ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಬಜೆಟ್ನಲ್ಲಿ ರೈತರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಅದಕ್ಕೆ ಅನುಗುಣವಾಗಿ ಬ್ಯಾಂಕ್ಗಳಿಗೆ ಅಗತ್ಯ ಹಣಕಾಸು ವ್ಯವಸ್ಥೆ ಕಲ್ಪಿಸದಿದ್ದರೆ ಆ ಘೋಷಣೆ ಕೇವಲ ಭರವಸೆಯಾಗಿಯೇ ಉಳಿಯುತ್ತದೆ. ರೈತರನ್ನು ದಾರಿ ತಪ್ಪಿಸುವ ಘೋಷಣೆಗಳ ಬದಲಿಗೆ ನೈಜ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ್ಡಿಯ ಹೊಣೆ ಹೊತ್ತು, ನಬಾರ್ಡ್ ಹಾಗೂ ಆರ್ಬಿಐ ಜತೆ ಸಮನ್ವಯ ಸಾಧಿಸಿ ರೈತರಿಗೆ ಎಕರೆಗೆ ₹1 ಲಕ್ಷದಂತೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಶಾಶ್ವತ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರೈತರ ಭೂಮಿಯ ವಿಸ್ತೀರ್ಣಕ್ಕನುಗುಣವಾಗಿ ಸಾಲ ಮಂಜೂರಾಗಬೇಕು. ಕೃಷಿಗೆ ಬೇಕಾದ ನೈಜ ಬಂಡವಾಳದ ಆಧಾರದ ಮೇಲೆ ಸಾಲ ವಿತರಿಸಿದಾಗ ಮಾತ್ರ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ. ಸರ್ಕಾರ ಘೋಷಿಸಿರುವ ಸೌಲಭ್ಯಗಳು ಕೇವಲ ದಾಖಲೆಗಳಲ್ಲಿ ಉಳಿಯದೇ ನೇರವಾಗಿ ರೈತರ ಕೈ ಸೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಮುಖಂಡರಾದ ರಾಜು ನದಾಪ, ಯಲ್ಲಪ್ಪ ಹೆಗಡೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಸುಶೀಲಕುಮಾರ ಬೆಳಗಲಿ, ಶ್ರೀಶೈಲ ಭೂಮಾರ, ಸಿ.ಎಸ್. ಸುತಾರ, ಕಲ್ಲಪ್ಪ ಬಿರಾದಾರ, ಗೂಡುಸಾಬ ಹೊನವಾಡ, ಸಿದ್ದಪ್ಪ ಬನಜನವರ, ಪ್ರಸನ್ನ ಜಮಖಂಡಿ, ಬಾಹುಬಲಿ ನ್ಯಾಮಗೌಡ, ಪರಸು ಸಾಠ, ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ, ಸಿದ್ದನಗೌಡ ಪಾಟೀಲ, ಸಿದ್ದಪ್ಪ ಬಳಗನ್ನವರ, ಶಿವಾಜಿ ಕದಂ, ಶ್ರೀಶೈಲ ಮೈಗೂರ, ಚಿದಾನಂದ ಬಿರಾದಾರ, ಗುರಯ್ಯ ಪೂಜಾರಿ ಸೇರಿದಂತೆ ಅನೇಕ ರೈತರು ಭಾಗವಹಿಸಿ ಸರ್ಕಾರ ಹಾಗೂ ಬ್ಯಾಂಕ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

