ದೇವಲಾಪುರ ಕಾಲೋನಿಯಲ್ಲಿ ವಿದ್ಯುತ್ ಪರಿವರ್ತಕ ಮತ್ತು ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿ | ಸ್ಥಳಾಂತರಕ್ಕೆ ಚೆಸ್ಕಾಂ ಸಿಬ್ಬಂದಿ ಹಣಕ್ಕೆ ಬೇಡಿಕೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಸವ್ವೆ ದೇವಲಾಪುರ ಕಾಲೋನಿಯಲ್ಲಿ ವಿದ್ಯುತ್ ಪರಿವರ್ತಕ ಮತ್ತು ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಗ್ರಾಮದ ಶ್ರೀನಿವಾಸ್ ಅವರ ಜಮೀನಿನಲ್ಲಿರುವ ಯಮ ಸ್ವರೂಪಿ ವಿದ್ಯುತ್ ತಂತಿಗಳು ಹಾಗೂ ಟ್ರಾನ್ಸ್ಫಾರ್ಮರ್ ಬಲಿಗಾಗಿ ಕಾದಿವೆ. ವಿದ್ಯುತ್ ಟ್ರಾನ್ಸ್ಫಾರ್ಮರ್ ಕಾಲುವೆ ಸಮೀಪವೇ ಇದ್ದು, ಕಾಲುವೆಗೆ ನೀರು ಹರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಟ್ರಾನ್ಸ್ಫಾರ್ಮರ್ ನಿಂದ ಬೇರೆಡೆಗೆ ಎಳೆಯಲಾಗಿರುವ ವಿದ್ಯುತ್ ತಂತಿಗಳು ಕೈಗೆತಾಗುತ್ತಿದ್ದು ರೈತರು, ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬೇಕಾಗಿದೆ. ಇದೀಗ ಮಳೆಗಾಲ ಶುರುವಾಗಿದ್ದು, ಹೊಲಕ್ಕೆ ಹೋಗುವುದಕ್ಕೆ ಭಯ ಪಡುತ್ತಿದ್ದಾರೆ. ಬಿರುಗಾಳಿ ಸಹಿತ ಮಳೆ ಆಗುತ್ತಿರುವುದರಿಂದ ವಿದ್ಯುತ್ ತಂತಿಗಳು ಮತ್ತಷ್ಟು ನೆಲಕ್ಕೆ ತಾಗುತ್ತಿದ್ದು, ಕೂಲಿ ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಅನಾಹುತ ಸಂಭವಿಸುವ ಮುನ್ನ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಶ್ರೀನಿವಾಸ್ ಸೇರಿ ಸುತ್ತಮುತ್ತಲಿನ ಜಮೀನಿನ ರೈತರು ಚೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸರಿಪಡಿಸಿಲ್ಲ. ಜೊತೆಗೆ ಬೇರೆಡೆಗೂ ಸ್ಥಳಾಂತರ ಮಾಡಿಲ್ಲ. ಹಣಕೊಟ್ಟರಷ್ಟೇ ಬೇರೆಡೆಗೆ ಸ್ಥಳಾಂತರ ಮಾಡುತ್ತೀವಿ ಎಂದು ಲೈನ್ ಮ್ಯಾನ್ ಗಳು ಹೇಳುತ್ತಾರೆ. ನಾವು ಬಡವರು, ಸಾಲಸೋಲ ಮಾಡಿ ಕೃಷಿ ಮಾಡುತ್ತಿದ್ದೀವಿ. ಸದ್ಯ ಬದನೆಗಿಡ ಸೇರಿದಂತೆ ಕೆಲ ತರಕಾರಿ ಗಿಡಗಳನ್ನು ಹಾಕಿದ್ದೀವಿ. ಅವುಗಳಿಗೆ ನೀರು ಹಾಯಿಸಲು ವಿದ್ಯುತ್ ಸಂಪರ್ಕ ಕೂಡ ಕೊಡಲ್ಲ. ಬದನೆಗಿಡ ಕಟಾವಿಗೆ ಬಂದಿದೆ. ಆದರೆ ವಿದ್ಯುತ್ ತಂತಿಗಳು ನೆಲಕ್ಕೆ ತಾಗಿರುವುದರಿಂದ ಯಾರು ಕೂಡ ಕೆಲಸಕ್ಕೆ ಬರುತ್ತಿಲ್ಲ. ಬಂದವರು, ವಿದ್ಯುತ್ ತಂತಿ ಕೈಗೇ ತಾಗುತ್ತಿರುವುದನ್ನು ನೋಡಿ ಭಯದಿಂದ ವಾಪಾಸ್ ಹೋಗುತ್ತಾರೆ. ಈಗ ಆಗಾಗ್ಗೆ ಮಳೆ ಬರುತ್ತಿರುವುದರಿಂದಲೂ ಯಾವಾಗ ಏನೋ ಎಂಬ ಆತಂಕದಿಂದ ನಾವು ಕೂಡ ಹೊಲದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ವ್ಯವಸಾಯ ಬಿಟ್ಟು ಬೇರೆ ಗೊತ್ತಿಲ್ಲ. ಹೀಗಾಗಿ ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ರೈತ ಶ್ರೀನಿವಾಸ್ ಅಳಲು ತೋಡಿಕೊಳ್ಳುತ್ತಾರೆ.
“ಚೆಸ್ಕಾಂ ಅಧಿಕಾರಿಗಳು, ಲೈನ್ ಮ್ಯಾನ್ ಗಳು ಆಡಿದ್ದೇ ಆಟವಾಗಿಬಿಟ್ಟಿದೆ. ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ, ವಿದ್ಯುತ್ ಅವಘಡ ಬಗ್ಗೆ ದೂರು ನೀಡಿದರೆ ಉದಾಸೀನ ಮಾಡುತ್ತಾರೆ. ಲೈನ್ ಮ್ಯಾನ್ ಗಳು ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ಟ್ರಾನ್ಸ್ ಫಾರ್ಮರ್ ಬೇರೆಡೆಗೆ ಸ್ಥಳಾಂತರ ಮಾಡೋದಕ್ಕೂ ಹಣ ಕೇಳುತ್ತಾರೆ. ಕೂಲಿ ಮಾಡಿ ಜೀವನ ಸಾಗಿಸುವ ನಾವು ಎಲ್ಲಿಂದ ಅವರಿಗೆ ಹಣ ಕೊಡುವುದು.”
– ದೇವಲಾಪುರ ಕಾಲೋನಿ ಗ್ರಾಮಸ್ಥರು

