ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾ|| ಬ್ರಿಜೇಶಕುಮಾರ ನೇತೃತ್ವದ ೨ನೇ ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು ೫೧೯.೬೦ಮೀ ದಿಂದ ೫೨೪.೨೫೬ಮೀಗೆ ನೀರು ನಿಲ್ಲಿಸಲು ಗೇಟ್ ಅಳವಡಿಸುವಂತೆ ಹಾಗೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವದು ನೀರಿನ ಹಂಚಿಕೆಯಲ್ಲಿ ಅವಳಿ ಜಿಲ್ಲೆಯ ರೈತರಿಗೆ ಆದ ಅನ್ಯಾಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡರಾದ ಅರವಿಂದ ಕುಲಕರ್ಣಿ ಹಾಗೂ ಮಹಾದೇವಪ್ಪ ತೇಲಿ ತಿಳಿಸಿದ್ದಾರೆ.
ಗುರುವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆದಿದ್ದ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ವಿಜಯಪುರ ಜಲ್ಲೆಯಲ್ಲಿ ಐದು ನದಿಗಳು ಹರಿದಿದ್ದು ಪಂಚನದಿಗಳ ಬೀಡು ೨ನೇ ಪಂಜಾಬ ಎಂದು ಕರೆಯಲಾಗುತ್ತಿದೆ. ಆದರೆ ಇದು ಕೇವಲ ಪ್ರತಿಷ್ಠೆಗೋಸ್ಕರ ಇದೊಂದು ವಿಷಯ ಹೇಳಿಕೊಳ್ಳಲು ಸುಲಭವಾಗಿದೆ. ಆದರೆ ವಾಸ್ತವಿಕವಾಗಿ ಜಿಲ್ಲೆಯ ಇನ್ನು ಕೆಲವು ಭಾಗಗಳಲ್ಲಿ ಕುಡಿಯಲು ಕೂಡಾ ನೀರು ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಗೆ ನೀರು ಕೊಡುವುದಂತು ದೂರದ ಮಾತು, ಕುಡಿಯಲು ಹಾಗೂ ಬೆಳೆಗಳಿಗೆ ನೀರು ಬೇಕಾದಾಗ ಹೋರಾಟ ಮಾಡಿಯೇ ನೀರು ಪೂರೈಸಿಕೊಳ್ಳುವುದು ನಮ್ಮ ಜಿಲ್ಲೆಯ ರೈತರ ದೌರ್ಭಾಗ್ಯವಾಗಿದೆ. ಲಾಲ್ ಬಹದ್ದೂರ ಶಾಸ್ತ್ರಿ ಆಣೆಕಟ್ಟು ನಿರ್ಮಿಸಿದ್ದು, ನಮ್ಮ ಜಿಲ್ಲೆಯ ಆಲಮಟ್ಟಿಯಲ್ಲಿ ಲಕ್ಷಾಂತರ ಎಕರೆ ಜಮೀನು ಮನೆಗಳನ್ನು ಕಳೆದುಕೊಂಡು ತ್ಯಾಗ ಮಾಡಿದ ರೈತರು, ಸರ್ಕಾರ ಕೊಟ್ಟ ಪಡಿಗಾಸು ತಗೆದುಕೊಂಡು ಭೂಮಿ ಇಲ್ಲದೆ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯವರೆಗೂ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸಲು ವಿಫಲರಾಗಿದ್ದಾರೆ. ಸನ್ ೨೦೧೦ ರಲ್ಲಿ ನ್ಯಾ|| ಬ್ರಜೇಶಕುಮಾರ ನೇತೃತ್ವದ ೨ನೇ ನ್ಯಾಯಾಧೀಕರಣ ಮಧ್ಯಂತರ ತೀರ್ಪು ನೀಡಿತು. ೨೦೧೩ ರಲ್ಲಿ ಅಂತಿಮ ತೀರ್ಪು ನೀಡಿ ಜಲಾಶಯದ ನೀರಿನ ಮಟ್ಟವನ್ನು ೫೧೯.೬೦ ಮೀಟರನಿಂದ ೫೨೪.೨೫೬ಕ್ಕೆ ನೀರು ನಿಲ್ಲಿಸಲು ಅನುಮತಿ ನೀಡಿತು. ನ್ಯಾಯಾಧೀಕರಣ ಅನುಮತಿ ನೀಡಿ ೧೩ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸಲು ಯಾವ ಸರ್ಕಾರಗಳು ಮನಸ್ಸು ಮಾಡಲಿಲ್ಲ. ಜಲಾಶಯ ನೀರಿನ ಮಟ್ಟವನ್ನು ೫೧೯.೬೦ರಿಂದ ೫೨೪.೨೫೬ಕ್ಕೆ ನೀರು ನಿಲ್ಲಿಸಿದಾಗ ಹಿನ್ನೀರಿನಿಂದ ಮುಳುಗಡೆ ಹೊಂದುವ ಜಮೀನುಗಳಿಗೆ ಪರಿಹಾರ ನೀಡುವುದು, ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಈ ಸದ್ಯ ೧ ಲಕ್ಷ ಕೋಟಿ ಹಣ ಬೇಕಾಗುತ್ತದೆ. ಈ ಮೊದಲು ಅಂದರೆ ೨೦೧೦-೧೩ನೇ ಸಾಲಿನಲ್ಲಿ ನ್ಯಾಯಾಧೀಕಣ ತೀರ್ಪು ನೀಡಿದ ನಂತರ ಶೀಘ್ರದಲ್ಲಿ ಕೆಲಸ ಪ್ರಾರಂಭಿಸಿದ್ದರೆ, ಆ ಸಂದರ್ಭದಲ್ಲಿ ಅಂದರೆ ೨೦೧೩ರಲ್ಲಿ ಕೇವಲ ಅಂದಾಜು ೧೭ ಸಾವಿರ ಕೋಟಿ ರೂ ಗಳು ಮಾತ್ರ ವೆಚ್ಚ ತಗುಲುತ್ತಿತ್ತು. ಜನಪ್ರತಿನಿಧಿಗಳ ರೈತ ವಿರೋಧ ನೀತಿ ಹಾಗೂ ಇಚ್ಛಾಶಕ್ತಿ ಕೊರತೆಯಿಂದಾಗಿ ಮಹಾರಾಷ್ಟ್ರದವರು ತಗೆಯುತ್ತಿರುವ ಮೊಂಡು ಕ್ಯಾತೆಯನ್ನೇ ಮುಂದಿಟ್ಟುಕೊಂಡು ಅನಾವಶ್ಯಕವಾಗಿ ವಿಳಂಭ ಮಾಡುತ್ತಾ ಬಂದಿರುತ್ತಾರೆ. ಅದರ ಪರಿಣಾಮವೇ ಈಗ ೧ ಲಕ್ಷ ಕೋಟಿಗೆ ಬಂದು ತಲುಪಿದೆ. ಇವರನ್ನು ನಂಬಿ ಮತ ಹಾಕಿ ಅಧಿಕಾರ ಕೊಟ್ಟ ರೈತರ ಬೆನ್ನೆಲುಬನ್ನು ಮುರಿದಿದ್ದಾರೆ. ಕಾರಣ ರೈತರ ಬದುಕು ಹಸನಾಗಿಸಲು ಸಾಲದಿಂದ ಮುಕ್ತರಾಗಿಸಲು ನ್ಯಾಯಾಧೀಕರಣದ ತೀರ್ಪಿನಂತೆ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ನಮ್ಮ ಪಾಲಿಗೆ ಮೀಸಲಿಡಲು ಹಕ್ಕೊತ್ತಾಯ ಮಾಡುವುದು. ಹಾಗೂ ಅವಳಿ ಜಿಲ್ಲೆಯ ರೈತರಿಗೆ ಹಂಚಿಕೆಯಾದ ಮತ್ತು ಬಳಸಿಕೊಳ್ಳಬೇಕಾದ ನೀರಿನ ಒಟ್ಟು ಪ್ರಮಾಣ ಎಷ್ಟು? ಎಂಬುವುದರ ಕುರಿತು ಚರ್ಚಿಸಲು ವಿಚಾರ ಸಂಕಿರಣವನ್ನು ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ದಿನಾಂಕ ೦೮-೦೬-೨೦೨೬ರ ಸೋಮವಾರದಂದು ಬೆಳಿಗ್ಗೆ ೧೦-೩೦ ಘಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡ ಸಿದ್ಧನಗೌಡ ಪಾಟೀಲ ಹಾಗೂ ಬಸವರಾಜ ಸಿದ್ದಾಪೂರ ಮಾತನಾಡಿ, ವಿಚಾರ ಸಂಕಿರಣದಲ್ಲಿ ಡಾ|| ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಇಂಗಳೇಶ್ವರ, ಸಂಗನಬಸವ ಮಹಾಸ್ವಾಮಿಗಳು ಶ್ರೀಮಠ ಹುಣಶ್ಯಾಳ ಪಿ.ಬಿ ಸಾನಿಧ್ಯ ವಹಿಸಲಿದ್ದು. ವಿಚಾರ ಸಂಕಿರಣದ ವಿಷಯ ಮಂಡನೆಯನ್ನು ಡಾ|| ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ|| ರಾಜೇಂದ್ರ ಪೋದ್ದಾರ, ಪಂಚಪ್ಪ ಕಲಬುರ್ಗಿ ನಡೆಸಿ ಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ವ್ಹಿ.ಸಿ. ಬಿರಾದಾರ ಮತ್ತು ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ನಿಂಗನಗೌಡ.ಎಮ್.ಬಿರಾದಾರ ಪಾಲ್ಗೊಳ್ಳಲಿದ್ದು ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಯ ರೈತರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಈ ವಿಚಾರ ಸಂಕಿರಣಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೊನಕೇರೆಪ್ಪ ತೆಲಗಿ, ಸಂಗನಗೌಡ ಪಾಟೀಲ ಮುಂತಾದವರು ಇದ್ದರು.

