ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಮುಸ್ಸಂಜೆಯ ಮಲ್ಲಿಗೆಯಂತಹ ವೇದಿಕಾ
ಈ ಒಲವಿನೋಲೆ ಮಿನುಗುತಾರೆಯಾದ ನಿನಗೆ ಮುದ್ದಾಂ ಬರೆದದ್ದಲ್ಲ. ಇದೊಂದು ಪೋಣಿಸಿದ ಸಾಲುಗಳ ಭಾವತೀರದ ಪಿಸುಮಾತು.
ಇದುವರೆಗೂ ಖಾಲಿಯಿದ್ದ ಎದೆಗೂಡಿಗೆ ಸದ್ದಿಲ್ಲದೆ ಬಂದು ನನ್ನನ್ನಾವರಿಸಿ, ನೀಳ ತೋಳುಗಳಿಂದ ಕೊರಳ ಬಳಸಿ, ಟ್ರಿಮ್ ಮಾಡಿದ ಗಡ್ಡದ ಕೆನ್ನೆಗೆ ಸವಿಮುತ್ತನ್ನಿಕ್ಕಿ, ಐಲವ್ಯೂ ಎಂದು ಕಿವಿಯಲುಸಿರಿ, ಚಿಕ್ಕದಾಗಿ ಕಿವಿ ಕಚ್ಚಿ., ನನ್ನೆದೆಗೆ ಒರಗಿ ನಾಚಿ ಮಾದಕ ಕಂಗಳಲಿ ಸಲ್ಲಾಪಕ್ಕೆ ಕರೆದೆ. ಇದಕ್ಕೆಲ್ಲ ಹಾರಿ ಹೋದ ಜೋಡಿಹಕ್ಕಿಗಳು ಮರಳಿ ಬಂದು ಗೂಡಲ್ಲಿ ನಡೆಸಿದ ಕಚ್ಚಿ ಕುಚ್ಚಿ ಪ್ರೇರಣೆಯಾಗಿತ್ತು ಅಂತ ನನಗೆ ಗೊತ್ತು. ರೆಪ್ಪೆ ಮುಚ್ಚಿ ಪ್ರೀತಿಯಾಟದ ಆಳಕ್ಕೆ ಇಳಿದಷ್ಟು ನಾಚಿಕೆ ಕಳಚಿ ಬಿದ್ದಿತ್ತು ಅಂದು.
ಇಂದು ಒಂದೊಂದು ನೆನಪೂ ಒಂದೊಂದು ಸಂಭ್ರಮ. ಮನದ ಕಣಿವೆಯಲಿ ತುಡಿತ ಮಿಡಿತಗಳ ತುಂತುರು ಹನಿಗಳ ಉದುರಿಸುತಿದೆ. ಪ್ರೀತಿಯ ಜೇನು ಜಿನುಗುತಿದೆ. ಸವಿನೆನಪುಗಳ ಗಂಟು ಬಿಚ್ಚಿದೆ. ಮೆಲಕು ಹಾಕುವುದೊಂದೇ ಫುಲ್ ಟೈಂ ಕೆಲಸವಾಗಿದೆ. ಸೋನೆ ಹನಿಗಳು ಮತ್ತಷ್ಟು ನಿನ್ನನ್ನು ನೆನಪಿಸಿವೆ. ಮೂಡಣದಲ್ಲಿ ಮೂಡಿದ ಹೊನ್ನ ಕಿರಣಗಳ ಪ್ರಭೆಯು ಮನವನ್ನು ತಣಿಯುವಂತೆ ಮಾಡಿದೆ. ಮುತ್ತಿದ ಆಸೆಯಲಿ ತನುವು, ಮೋಡ ಕಂಡ ಗರಿ ತೆರೆದ ನವಿಲಿನಂತೆ ನರ್ತಿಸುತ್ತಿದೆ. ನೀನಿರದ ಸಮಯದಿ ಆಡದೇ ಉಳಿದಿಹ ಮಾತುಗಳೂ ಮೌನವಾಗಿ ಉಳಿದಿವೆ. ಎದೆಯಂಗಳದಲ್ಲಿ ನಿನ್ನದೇ ಪ್ರೀತಿಯ ಹಸಿರು ಚಿಗುರಿದೆ. ಅವಿತಿಟ್ಟ ಹೂಮುತ್ತುಗಳನ್ನೆಲ್ಲ ಬಿಸಿ ಮೈಗೆ ಒಂದೊಂದಾಗಿ ಮೃದುವಾಗಿ ಹಂಚಲು, ವಿರಹದುರಿಗೆ ಮದ್ದು ಅರಿಯಲು ಕಾದಿದೆ. ಮನದ ಅಂತಃಪುರದ ಕನಸಿನ ಎಳಕಾದ ಎಸಳುಗಳು ನಿನಗಾಗಿ ಕಾಯುತಿವೆ ಪ್ರಾಣ ಸಖಿ.

ಪ್ರೀತಿಸುವುದು ಸುಲಭವೆಂದು ಕಂಡರೂ ಸುಲಭವಲ್ಲ. ಪ್ರೀತಿಯಲ್ಲಿ ಕಷ್ಟ ನೋವು ಅವಮಾನಗಳು ಸಾಮಾನ್ಯ, ಕೆಲವರಿಗೆ ಮಾತ್ರ ಒಲಿಯುವ ಒಲಿನಲಿ, ಒಲವಿನ ರಾಣಿಯ ಒಲವಿನ ಕಣಜ ಸಿಗುವುದು. ಒಲವಿನ ಕಣಜ ಪಡೆಯುವಲ್ಲಿ ಬಹುತೇಕರು ಜಾತಿ ಧರ್ಮ ಹಣ ಅಂತಸ್ತಿನ ಹೆಸರಿನಲ್ಲಿ ಎಡುವುತ್ತಿದ್ದಾರೆ. ಪ್ರೀತಿಯೆಂದರೆ ಜಾತಿ ಧರ್ಮದ ಕಟ್ಟುಪಾಡುಗಳನ್ನು ಸ್ವೀಕರಿಸದೆ ಮನಷ್ಯರನ್ನಾಗಿಸುವ ಸ್ನೇಹ, ಅದೊಂದು ಧ್ಯಾನ, ಆತ್ಮಾನುಸಂಧಾನ ಒಂದು ಹೃದಯ ಇನ್ನೊಂದು ಹೃದಯವನ್ನು ಅರಿಯುವ ಪ್ರಕ್ರಿಯೆ. ಮೃದು ಮಧುರ ಭಾವನೆಗಳೊಂದಿಗೆ ಬಾಳನು ಹೆಣೆದುಕೊಳ್ಳುವ ಕ್ರಿಯೆ. ನಕ್ಷತ್ರಗಳ ರಾಶಿಯ ಕೆಳಗೆ ಮೈ ಚಾಚಿ ನಲಿವಿನಲಿ ಮೋಹಕ ಪ್ರೀತಿಯ ಪಿಸುಮಾತುಗಳ ಉಸುರುವುದು.
ಒಂದೇ ಮಾತಿಂನಲ್ಲಿ ಹೇಳಬೇಕೆಂದರೆ ಹೃದಯಗಳನ್ನು ಬೆಸೆಯುವ ಒಂದು ಅದ್ಭುತ ಶಕ್ತಿ. ಕಷ್ಟಗಳು ತುಂಬಿದ ಕಡಲಿನ ಬದುಕನ್ನು ದಡ ಸೇರಿಸುವ ಸುಖದ ಹಾಯಿದೋಣಿ. ಪ್ರೀತಿ ತೀರಾ ಸುಲಭದ ಮಾತಲ್ಲ. ಅದನ್ನು ತೀರಾ ಹಗುರವಾಗಿ ತೆಗೆದುಕೊಂಡರೆ ಜೀವನದ ಕಥೆ ಮುಗಿದೇ ಹೋಯಿತು ಎಂದರ್ಥ. ಎಲ್ಲವೂ ಬದಲಾಗುತ್ತಿದೆ ಎಲ್ಲರೂ ಬದಲಾಗಿದ್ದಾರೆಂದು ಹಸಿ ಸುಳ್ಳು ಹೇಳಿ ಹುಸಿ ಪ್ರೀತಿ ಮಾಡಿದರೆ ಜೀವನದ ಹಳಿ ತಪ್ಪುವುದು ಖಂಡಿತ. ಎಂದೆಲ್ಲ ಬದುಕಿನ ಸಾಕಷ್ಟು ಸತ್ಯಗಳನ್ನು ಮನ ಮುಟ್ಟುವ ಹಾಗೆ ಹೇಳಿದ ಜೀವದ ಗೆಳತಿ ನೀನು.
ಅದೊಂದು ಸುಂದರ ದಿನ ಹೊರಗೆ ಸಂಜೆ ನಿಧಾನವಾಗಿ ಕತ್ತಲನ್ನು ಅಪ್ಪಿಕೊಳ್ಳುತ್ತಿತ್ತು. ಹೆದರಿದ ಜಿಂಕೆಯ ಕಂಗಳಲ್ಲಿ ನಿನ್ನ ಕಾಡಿಗೆ ಕಣ್ಣುಗಳ ನೋಟ ಕೈ ಬೀಸಿ ಕರೆದಂತೆ ಭಾಸವಾಯಿತು. ಚಂದ್ರನಂತಹ ಮುಖ, ತಾವರೆಯ ಕಣ್ಣು, ಕಾರ್ಗತ್ತಲಿನಂತಹ ಕೇಶ ಚೆಂದುಳ್ಳಿ ಚೆಲುವೆಯಂತಹ ನಿನ್ನ ಮೈಮಾಟ ಕವಿಯ ಕಲ್ಪನೆಗೆ ಕನ್ನಡಿ ಹಿಡಿದಂತಿರುವ ರೂಪ ರತ್ನ. ನಿನ್ನ ಸೌಂದರ್ಯವನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಲು ಕಾಳಿದಾಸನಿಗೆ ಮಾತ್ರ ಸಾಧ್ಯ. ನನ್ನ ಮಾತುಗಳೆಲ್ಲ ಸೋತು ಸುಮ್ಮನಾಗಿವೆ. ಹೀಗಿದ್ದಾಗಲೂ ನಿನ್ನ ಕಂಗಳು ಮೌನ ನಗುವ ಚೆಲ್ಲಿ, ಬೆರಳುಗಳು ನನ್ನ ಸೊಂಪಾದ ಕೂದಲನ್ನು ನೇವರಿಸುತ್ತಿವೆ. ಆ ಸಂಜೆ ಇರುಳು ಸಂಪೂರ್ಣವಾಗಿ ನನ್ನವಳಾಗಲು ಕಾದಂತಿರುವೆ ಎಂದು ನಾನು ಕಾಲೆಳೆದೆ ‘ಹುಚ್ಚ ನೀನು’ ಎಂದು ಕಿರುನಗೆ ಚೆಲ್ಲಿ ಭುಜದ ಮೇಲೆ ಅಂದದ ಸಿರಿದೇವಿಯಂತಹ ಮೊಗವನ್ನಿಟ್ಟು ಲಘುವಾಗಿ ತಬ್ಬಿಕೊಂಡು ಮೌನದಲ್ಲೇ ಅಗಾಧ ಭರವಸೆಯನ್ನಿತ್ತೆ. ಕೆಲವೊಮ್ಮೆ ಪ್ರೀತಿಗೆ ಮಾತುಗಳ ಹಂಗು ತೊರೆದ ಮೌನದ ಗಾಢವಾದ ಆಲಿಂಗನವೇ ಒಳಿತು ಎಂದೆನಿಸಿಬಿಡುತ್ತದೆ. ಆ ಆಲಿಂಗನಕೆ ಇನ್ನಿಲ್ಲದಂತೆ ಕಾಯುತಿದೆ.
ಮದುವೆಗಳು ಮೊದಲೆಲ್ಲ ಕಡುಬೇಸಿಗೆಯ ದಿನಗಳಲ್ಲಿ ಮನೆಯ ಮುಂದೆ ಹಂದರದಲ್ಲಿ ಊರೆಲ್ಲ ಮೆರವಣಿಗೆಯಲ್ಲಿ ಬಹು ಸಡಗರದಿಂದ ನಡೆಯುತ್ತಿದ್ದವು. ಬೀಗರ ಬಿಜ್ಜರು ತಿಂಗಳಾನುಗಟ್ಟಲೇ ಮನೆಯಲ್ಲಿ ಟಿಕಾಣಿ ಹೂಡಿ ಊರಿನವರೆಲ್ಲ ಸಂಭ್ರಮದಿಂದ ಅತ್ಯುತ್ಸಾಹದಿಂದ ನವ ವಧುವರರ ಹೊಸ ಬಾಳಿಗೆ ಸಾಕ್ಷಿಯಾಗುತ್ತಿದ್ದರು..ಆದರೀಗ ಮದುವೆ ಮನೆಯಂಗಳ ದಾಟಿ ಕಲ್ಯಾಣ ಮಂಟಪಕ್ಕೆ ಕಾಲಿಟ್ಟಿವೆ. ಅನಗತ್ಯ ಆಡಂಬರ ದುಬಾರಿ ವೆಚ್ಚ ಬದಿಗೊತ್ತಿ ಮಿತವ್ಯಯದಲ್ಲಿ ವಿವಾಹ ಬಂಧನದಲ್ಲಿ ಬಂಧಿಯಾಗುವಾ. ರಾಷ್ಟ್ರಕವಿ ಕುವೆಂಪು ಅವರು ರೂಪಿಸಿದ ವೈಚಾರಿಕ ವಿವಾಹ ಪದ್ದತಿಯಂತೆ ಮುಹೂರ್ತದ ಹಂಗಿಲ್ಲದೆ ಪರಸ್ಪರ ಪ್ರಮಾಣ ವಚನ ಸ್ವೀಕರಿಸಿ ರೆಜಿಸ್ಟರ್ ಮದುವೆಯಾಗುವಾ ಎನ್ನುವ ನಿನ್ನ ವಿಚಾರ ಎಲ್ಲರಿಗೂ ಬಂದರೆ ಎಷ್ಟು ಚೆನ್ನ ಚೆಲುವೆ! ಮದುವೆಗಾಗಿ ಸಾಲ ಮಾಡಿ ಜೀವನಪೂರ್ತಿ ಅದನ್ನು ತೀರಿಸಲು ಕಷ್ಟಪಡುವುದು ತಪ್ಪುತ್ತದೆ. ಆಡಂಬರಕ್ಕೆ ಖರ್ಚು ಮಾಡುವ ಹಣವನ್ನು ಮುಂದಿನ ಸುಂದರ ಜೀವನಕ್ಕೆ ಬಳಸಬಹುದೆನ್ನುವ ನಿನ್ನ ನಿಲುವು ನನ್ನ ನಿನ್ನ ಹೆತ್ತವರು ಒಪ್ಪಿಯಾಗಿತ್ತು.

ಮದುವೆ ದಿನ ನಿನ್ನುಡುಗೆ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಮಿಶ್ರಣವಾಗಿತ್ತು. ಲೈಟ್ವೇಟ್ ಪೀಚ್ ಬಣ್ಣದ ಲೆಹೆಂಗಾ, ಕಣ್ಣುಗಳಿಗೆ ಸಾಫ್ಟ್ ಶೀಮರ್, ತುಟಿಗಳಿಗೆ ಗ್ಲಾಸಿ ಲಿಪ್ಸ್ಟಿಕ್, ಸ್ಪಟಿಕದಂತೆ ಶುಭ್ರವಾದ ಮುಖ, ಕೆನ್ನೆಗೆ ತಿಳಿ ಗುಲಾಬಿ ಬ್ಲಷ್, ಭಾರವಾದ ಆಭರಣಗಳ ಬದಲಾಗಿ ಲೈಟ್ ಜ್ಯುವೆಲರಿ ಮಾತ್ರ ಧರಿಸಿದ್ದೆ ಹೀಗಾಗಿ ನಿರಾಭರಣ ಸುಂದರಿಯಾಗಿ ಧರೆಗಿಳಿದ ಅಪ್ಸರೆಯಂತೆ ಎಲ್ಲರ ಕಣ್ಮನ ಸೆಳೆದಿದ್ದೆ. ನಿನ್ನನ್ನು ಸಂಗಾತಿಯಾಗಿ ಪಡೆಯುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದೆನಿಸಿದ ಕ್ಷಣವದು.
ನೀನಿಲ್ಲದೇ ಕಪ್ಪು ರಾತ್ರಿ ಕಳೆಯುತ್ತಿರುವೆ. ಸನಿಹ ಬಂದರೆ ನಿನ್ನ ಕಂಗಳ ದೀಪದಡಿಯಲ್ಲಿ ದಾಹ ತೀರದ ಮಡಿಲೊಳಗೆ ಬೆಳ್ಳನೆಯ ಹಣೆ ಕುತ್ತಿಗೆ ಎದೆ ಹೊಕ್ಕಳಿಗೆಲ್ಲ ತುಟಿಗಳ ಮುದ್ರೆ ಒತ್ತುವೆ. ಗಡಗಡಿಸುವ ಚಳಿಯ ಛಳುಕಿಗೆ ಬಳ್ಳಿಯಂತೆ ಬಳಕುವ ನಡುವನು ಬಳಸುವ ಕನವರಿಕೆ ದಿನದಿನಕ್ಕೆ ಹೆಚ್ಚುತ್ತಿದೆ. ಅರ್ಧರಾತ್ರಿಯಲ್ಲಿ ಮುಚ್ಚಿದ ಬಾಗಿಲೊಳಗೆ ಅಧರಗಳ ನಡುಕದಲಿ ಪಾದಗಳ ಬೆರಳುಗಳನು ಹಾಗೆ ಮೀಟಿ ನಟ್ಟ ನಡುವೆ ಹೀಗೆ ದಾಟಿ ಶೃಂಗಾರ ಸಾಗರ ಮೈಮೇಲೆ ಹರಿಸಲು ನಿಂತಿರುವೆ. ನಿನ್ನ ನಾಚಿಕೆಯ ಕರಗಿಸಿ ಪ್ರೀತಿ ಕಮಲ ಅರಳಿಸುವೆ ಪ್ರತಿ ಸೂರ್ಯೋದಯದ ಒಳಗೆ. ಇನ್ನೇಕೆ ತಡ ಬಂದು ಬಿಡು ನಿನ್ನಿಷ್ಟದಂತೆ ಸರಳ ವಿವಾಹದಿ ಜೋಡಿಯಾಗಿ ಆಗಿದೆ. ಹೆಸರಿಗೆ ಹೆಸರು ಸೇರಿಯಾಗಿದೆ. ನಾಲ್ಕು ಕೈಗಳು ಒಂದಾಗಿ ಅನುರಾಗ ರಾಗಕೆ ಶೃತಿ ಮೀಟಿದರೆ ಹೃದಯದಿ ಪ್ರೀತಿನಾದ ಹೊಮ್ಮುವುದು. ಬೇಸಿಗೆ ಬಿಸಿಲಿಗೆ ಕಾದ ಭುವಿಗೆ ಮಳೆರಾಯನ ಒಲವಿನಲಿ ರಸಧಾರೆ ಹರಿಯುವುದು. ಪೂರ್ಣ ಚಂದಿರನ ಹಾಲು ಬೆಳದಿಂಗಳ ಕೆಳಗೆ ಕೊಳದ ಮೊಗ್ಗು ಅರಳುವಂತೆ, ಮೃದು ಪದಗಳ ಬಳಕೆಯಲ್ಲಿ ಹೃದಯ ಕದ್ದವಳ ಒಡಲಲಿ ಪುಟ್ಟ ಮುದ್ದು ಗೊಂಬೆಯ ಮೂಡಿಸುವ ಹೆಬ್ಬಯಕೆ ಕಾಡುತಿದೆ. ಇನ್ನೇನಿದ್ದರೂ ಬಿಸಿಯುಸಿರಲಿ ಬೆರೆಯುವ ಜಗವ ಮರೆಯುವ ಆಟದಲ್ಲಿ ಮೈಮರೆಯಬೇಕಿದೆ.
ಇಂತಿ ನಿನ್ನ ವೇದಾಂತ


