ಲೇಖನ
– ಅವಿನಾಶ ಸೆರೆಮನಿ
ಬೈಲಹೊಂಗಲ
ಉದಯರಶ್ಮಿ ದಿನಪತ್ರಿಕೆ
ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ
ಕಾತುರದಿಂದ ಕಾಯುತ್ತಿದ್ದಾರೆ. ಮೊದಲು ದ್ವಿತೀಯ ಪಿಯುಸಿ ನಂತರ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತದೆ.
ಫಲಿತಾಂಶ ಎಂದಾಕ್ಷಣ ಬಹಳಷ್ಟು ವಿದ್ಯಾರ್ಥಿಗಳ ಎದೆಯಲಿ ಗುಡುಗು ಸಿಡಿಲಿನ ಮಿಂಚು, ಎದೆಯಲ್ಲಿ ಲಬ್ ಡಬ್ ಆರಂಭವಾಗಿರುತ್ತದೆ.
ಪರೀಕ್ಷೆಗಳು ಒಂದು ಭಾಗ ಮಾತ್ರ
ವಿದ್ಯಾರ್ಥಿಗಳೆ ನಮ್ಮ ಜೀವನದಲಿ ನೂರಾರು ಪರೀಕ್ಷೆಗಳು ಎದುರಾಗುತ್ತವೆ ಅದರಲ್ಲಿ ವಿದ್ಯಾರ್ಥಿ ಜೀವನದ ಪರೀಕ್ಷೆಗಳು ಒಂದು ಭಾಗ ಮಾತ್ರ. ಪರೀಕ್ಷೆ ಎಂಬುದು ನಮ್ಮೊಳಗಿನ ವಿಷಯದ ಜ್ಞಾನದ ಮಟ್ಟವನ್ನು ಪರೀಕ್ಷಿಸುವ ಸಾಧನ. ಪರೀಕ್ಷೆ ಎಂದರೆ ಬಹುತೇಕ ವಿದ್ಯಾರ್ಥಿಗಳಿಗೆ ಭಯ, ಒತ್ತಡ, ಆತಂಕವನ್ನುಂಟುಮಾಡುವ ಒಂದು ಪದ. ಆದರೆ ನಿಜವಾದ ಅರ್ಥದಲ್ಲಿ ಪರೀಕ್ಷೆ ಎಂದರೆ ಕೇವಲ ಅಂಕಗಳ ಅಳತೆಗೋಲು ಅಲ್ಲ; ಅದು ನಮ್ಮ ಜ್ಞಾನ, ಶ್ರಮ, ಶಿಸ್ತಿನ ಪ್ರತಿಬಿಂಬವಾಗಿದೆ.

ಮರೀಕ್ಷೆ ಫಲಿತಾಂಶ ಜೀವನದ ಫಲಿತಾಂಶವಲ್ಲ
ಇಂದಿನ ಸಮಾಜದಲ್ಲಿ ಪರೀಕ್ಷೆಯ ಫಲಿತಾಂಶಕ್ಕೆ ಅತಿಯಾದ ಮಹತ್ವ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಮೌಲ್ಯವನ್ನೇ ಅಂಕಗಳ ಮೂಲಕ ಅಳೆಯಲು ಆರಂಭಿಸಿದ್ದಾರೆ. ಆದ್ದರಿಂದ “ಪರೀಕ್ಷೆ ಫಲಿತಾಂಶ ಜೀವನದ ಫಲಿತಾಂಶವಲ್ಲ” ಎಂಬ ಸತ್ಯವನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಸಂಪೂರ್ಣ ಸಾಮರ್ಥ್ಯ ಅಳೆವ ಸಾಧನವಲ್ಲ
ವಿದ್ಯಾರ್ಥಿಗಳೇ ಪರೀಕ್ಷೆಗಳು ಸಂಪೂರ್ಣ ಸಾಮರ್ಥ್ಯವನ್ನು ಅಳೆಯುವ ಸಾಧನವಲ್ಲ. ಪರೀಕ್ಷೆಯಲ್ಲಿ ಕೆಲವರು ಹೆಚ್ಚು,ಕೆಲವರು ಕಡಿಮೆ ಅಂಕಗಳನ್ನು ಪಡೆಯುತ್ತಾರೆ.ಇಲ್ಲಿ ಯಾರು ದಡ್ಡರೂ ಅಲ್ಲ ಜಾಣರು ಅಲ್ಲ ವಿಷಯವನ್ನು ಅರ್ಥೈಸಿಕೊಳ್ಳುವಿಕೆ, ವ್ಯಕ್ತಪಡಿಸುವಿಕೆಯು ಬಹಳ ಮುಖ್ಯವಾದುದ್ದು.ಒಂದು ದಿನ ಅಥವಾ ಕೆಲವು ಗಂಟೆಗಳ ಅವಧಿಯಲ್ಲಿ ಬರೆದ ಉತ್ತರಪತ್ರಿಕೆ ವಿದ್ಯಾರ್ಥಿಯ ಜ್ಞಾನ, ಪ್ರತಿಭೆ, ಸೃಜನಶೀಲತೆ, ವ್ಯಕ್ತಿತ್ವ ಇವುಗಳನ್ನು ಸಂಪೂರ್ಣವಾಗಿ ತೋರಿಸಲು ಸಾಧ್ಯವಿಲ್ಲ. ಕೆಲವರು ಓದಿನಲ್ಲಿ ಸಾಮಾನ್ಯರಾಗಿದ್ದರೂ, ಕಲೆ, ಕ್ರೀಡೆ, ಸಂಗೀತ, ಸಂವಹನ ಕೌಶಲ್ಯಗಳಲ್ಲಿ ಅಪಾರ ಪ್ರತಿಭೆ ಹೊಂದಿರುತ್ತಾರೆ. ಅಂಥವರನ್ನು ಕೇವಲ ಅಂಕಗಳ ಆಧಾರದ ಮೇಲೆ ತೀರ್ಮಾನಿಸುವುದು ತಪ್ಪಾಗಿದೆ.
ಜೀವನದ ಪರೀಕ್ಷೆ ಸವಾಲಾಗಿ ಸ್ವೀಕರಿಸಿದ ತೆಂಡೂಲ್ಕರ್
ಉದಾಹರಣೆ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಂಕಗಳ ಪರೀಕ್ಷೆಯಲ್ಲಿ ವಿಫಲವಾದರು. ಆದರೆ ಅವರೊಳಗೆ ಅಡಗಿದ ಕ್ರಿಕೆಟ್ ನ ಪ್ರತಿಭೆಯ ಮೂಲಕ ಜೀವನದ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಇಡೀ ಕ್ರಿಕೆಟ್ ಲೋಕದಲ್ಲೇ ಹೆಸರು ಗಳಿಸಿದರು. ಇಂದಿಗೂ ಎಂದೆಂದಿಗೂ ಸಚಿನ್ ತೆಂಡೂಲ್ಕರ್ ಹೆಸರು ಅಜರಾಮರ. ಅಂಕಗಳ ಪರೀಕ್ಷೆಗಿಂತ ಜೀವನದ ಪರೀಕ್ಷೆ ಬಹುಮುಖ್ಯ ಎಂಬುದನು ಅರಿಯಲು ಈ ಮಹಾನ್ ಸಾಧಕನ ಉದಾಹರಣೆ ವಿದ್ಯಾರ್ಥಿಗಳಿಗೆ ಸಾಕು.

ಅತಿಯಾದ ಒತ್ತಡದಿಂದ ಮನಸ್ಸಿನ ಮೇಲೆ ದುಷ್ಪರಿಣಾಮ
ಪರೀಕ್ಷಾ ಫಲಿತಾಂಶದ ಬಗ್ಗೆ ಅತಿಯಾದ ಒತ್ತಡವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಗಾಧ ದುಷ್ಪರಿಣಾಮ ಬೀರುತ್ತದೆ. ಆತಂಕ, ಭಯ, ಕೀಳರಿಮೆ ಹೀನ ಮನೋಭಾವ ಇವುಗಳಿಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತೀವ್ರ ನಿರಾಶೆಗೆ ಒಳಗಾಗಿ ತಪ್ಪು ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ, ಫಲಿತಾಂಶಕ್ಕಿಂತ ಅವರ ಪ್ರಯತ್ನವನ್ನು ಮೆಚ್ಚಬೇಕು.
ಆತ್ಮವಿಶ್ವಾಸದಿಂದ ಕನಸುಗಳ ಕಡೆಗೆ ಸಾಗಿ
ಪರೀಕ್ಷೆ ಫಲಿತಾಂಶವು ಜೀವನದ ಒಂದು ಸಣ್ಣ ಭಾಗ ಮಾತ್ರ. ಅದು ವ್ಯಕ್ತಿಯ ಸಂಪೂರ್ಣ ಜೀವನ ನಿರ್ಧರಿಸುವುದಿಲ್ಲ.
ಶಿಕ್ಷಣದ ಉದ್ದೇಶ ಕೇವಲ ಅಂಕ ಗಳಿಸುವುದಲ್ಲ; ಒಳ್ಳೆಯ ವ್ಯಕ್ತಿತ್ವವನ್ನು ನಿರ್ಮಿಸುವುದಾಗಿದೆ. ನೈತಿಕ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ, ಜೀವನ ಕೌಶಲ್ಯಗಳು ಇವುಗಳೇ ವ್ಯಕ್ತಿಯನ್ನು ಯಶಸ್ವಿಯಾಗಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು, ಆತ್ಮವಿಶ್ವಾಸದಿಂದ ತಮ್ಮ ಕನಸುಗಳ ಕಡೆಗೆ ಸಾಗಬೇಕು.
ತಪ್ಪುಗಳಿಂದ ಕಲಿತು ಮುಂದಕ್ಕೆ ಸಾಗಿ
ವಿದ್ಯಾರ್ಥಿಗಳು ತಮ್ಮ ವೈಫಲ್ಯವನ್ನು ಸೋಲಾಗಿ ಕಾಣದೆ, ಅದನ್ನು ಪಾಠವಾಗಿ ಪರಿಗಣಿಸಬೇಕು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದು ಜೀವನದ ಅಂತ್ಯವಲ್ಲ. ಅದು ಮುಂದಿನ ಯಶಸ್ಸಿಗೆ ಒಂದು ಹೆಜ್ಜೆಯಾಗಬಹುದು. ತಪ್ಪುಗಳಿಂದ ಕಲಿತು ಮುಂದಕ್ಕೆ ಸಾಗುವುದು ಜೀವನದ ನಿಜವಾದ ಪಾಠವಾಗಿದೆ.
ಜೀವನದಲ್ಲಿ ಯಶಸ್ಸು ಪಡೆಯಲು ಕೇವಲ ಪರೀಕ್ಷಾ ಫಲಿತಾಂಶವೇ ನಿರ್ಣಾಯಕವಲ್ಲ. ಪರಿಶ್ರಮ, ದೃಢಸಂಕಲ್ಪ, ಆತ್ಮವಿಶ್ವಾಸ ಮತ್ತು ನಿರಂತರ ಕಲಿಕೆಯ ಮನೋಭಾವವೇ ಯಶಸ್ಸಿನ ನಿಜವಾದ ಕೀಲಿಕೈಗಳು. ಇತಿಹಾಸದಲ್ಲೂ ಮತ್ತು ಇಂದಿನ ಸಮಾಜದಲ್ಲೂ ಹಲವು ಮಹಾನ್ ವ್ಯಕ್ತಿಗಳು ಪರೀಕ್ಷೆಯಲ್ಲಿ ದೊಡ್ಡ ಸಾಧನೆ ಮಾಡದಿದ್ದರೂ ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಇದರಿಂದ ಪರೀಕ್ಷೆಯು ಜೀವನದ ಒಂದು ಭಾಗವೇ ಹೊರತು ಜೀವನದ ಅಂತ್ಯವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕೊನೆ ಹನಿ
ವಿದ್ಯಾರ್ಥಿಗಳೆ ಪರೀಕ್ಷೆಯ ಫಲಿತಾಂಶದಿಂದ ನಿರಾಶರಾಗಬೇಡಿ. ಅದು ನಿಮ್ಮ ಜೀವನದ ಒಂದು ಭಾಗ ಮಾತ್ರ, ಅಂತಿಮ ಗುರಿ ಅಲ್ಲ. ನಿಮ್ಮ ಕನಸುಗಳನ್ನು ನಂಬಿ, ನಿಮ್ಮ ಮೇಲೆ ವಿಶ್ವಾಸ ಇಡಿ, ಮುಂದುವರಿಯಿರಿ.ನಿಮ್ಮ ಜೀವನದ ಫಲಿತಾಂಶ ನಿಮ್ಮ ಕೈಯಲ್ಲಿದೆ, ಪರೀಕ್ಷೆಯ ಫಲಿತಾಂಶದಲ್ಲಲ್ಲ.


