ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ
ಉದಯರಶ್ಮಿ ದಿನಪತ್ರಿಕೆ
ಬೀದರ್: ಗಾಂಧೀ ಮತ್ತು ಅಂಬೇಡ್ಕರ್ ಪತ್ರಕರ್ತರಾಗಿದ್ದರು. ಗಾಂಧೀಜಿಯವರ ಪತ್ರಿಕೆ ಸ್ವಾತಂತ್ರಕ್ಕೆ ಸಹಕಾರಿಯಾದರೆ, ಅಂಬೇಡ್ಕರ್ ಅವರು ಪತ್ರಿಕೆ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ಅನೇಕ ಜಾತಿ , ಧರ್ಮ ಭಾಷೆಗಳಿವೆ. ಇಂತಹ ವೈರುದ್ದ ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಲು ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಬಸವಣ್ಣನವರು ಕೂಡ ಈ ಉದ್ದೇಶದಿಂದ ಅನೇಕ ಕಾರ್ಯವನ್ನು ಮಾಡಿದ್ದರು. ಅದರೂ ಅಸಮಾನತೆ ನಿಂತಿಲ್ಲ. ಸಮಾಜದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಇದನ್ನು ಮುಂದುವರೆಸಲು ಕಾಯುತ್ತಿದ್ದಾರೆ. ಅದನ್ನು ನಾವೆಲ್ಲ ಹೊಗಲಾಡಿಸಬೇಕು ಎಂದರು.
ಬಸವಣ್ಣ ಕರ್ಮ ಸಿದ್ದಾಂತವನ್ನು ತಿರಸ್ಕರಿಸಿದ್ದರು. ಆದರೆ ಈಗ ಅದನ್ನು ಹೆಚ್ಚಾಗಿ ಶಿಕ್ಷಣವಂತರೆ ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣದಲ್ಲಿ ಸಿದ್ದಾಂತ ಮತ್ತು ವೈಚಾರಿಕತೆ ಇಲ್ಲದಂತಾಗಿರುವುದು. ಈಗಲು ಕೂಡ ಕೆಲವು ಮನುವಾದಿಗಳು ಕರ್ಮ ಸಿದ್ದಾಂತವನ್ನು ಹುಟ್ಟು ಹಾಕುತ್ತಿದ್ದಾರೆ. ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಯವರು ಬಲಗೊಳಿಸುತ್ತಿದ್ದಾರೆ. ಸಮ ಸಮಾಜ ನಿರ್ಮಾಣವಾದರೆ ಶೋಷಣೆ ನಿಂತು ಹೋಗುತ್ತದೆ ಹಾಗಾಗಿ ಶೋಷಣೆ ಮಾಡುವವರು ಸಮ ಸಮಾಜ ನಿರ್ಮಾಣ ಮಾಡಲು ಬಿಡದೆ ಅದನ್ನು ಇನ್ನಷ್ಟು ಗಟ್ಟಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಹಾಗಾಗಿ ಪತ್ರಕರ್ತರು ಸಾರ್ವಜನಿಕರಿಗೆ ಕೇವಲ ವಿಷಯ ತಿಳಿಸಿದರೆ ಸಾಕಾಗದು, ವೃತ್ತಿಯಲ್ಲಿ ಸಮಾಜ ಸುಧಾರಣೆಯನ್ನು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದರು.
ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು ಎಂದು ಸಿಎಂ ಹೇಳಿದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಸಚಿವ ರಹೀಂ ಖಾನ್ ಮಾತನಾಡಿದರು.
ಸಚಿವರುಗಳಾದ ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಜಿಲ್ಲಾಧ್ಯಕ್ಷರಾದ ಆನಂದ್ ದೇವಪ್ಪ, ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ಸಂಸದರಾದ ಸಾಗರ್ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ , ಹಾರಕುಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು ಇವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಇದ್ದರು.
ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನಿಯಮ ಸಡಿಲಿಕೆ
ಬೀದರ್: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗಿದ್ದು, ಇದರ ನಿಯಮಗಳಲ್ಲಿ ತೊಂದರೆ ಇದ್ದರೆ ಕೂಡಲೇ ಬಗೆ ಹರಿಸಲಾಗುತ್ತದೆ ಹಾಗೂ ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮಾವನ್ನು ಜಾರಿ ಮಾಡುವ ಕುರಿತು ಚಿಂತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಊಹೆ ಮೇಲಿನ ಬರವಣಿಗೆ ಬಹಳ ಅಪಾಯಕಾರಿ
ಇಂದಿನ ವಿದ್ಯಮಾನದಲ್ಲಿ ಸುದ್ದಿ ಮಾಧ್ಯಮಗಳು ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿದೆ. ಅವರು ಹೇಳಿದಂತೆ ಪತ್ರಕರ್ತರು ಕೇಳುವಂತಾಗಿದೆ. ಹಾಗಾಗಿ ಪತ್ರಕರ್ತರು ಬರೆಯುವಾಗ ವಸ್ತುನಿಷ್ಠವಾಗಿ, ಶೋಧನೆ ಮಾಡಿ ಬರೆಯಿರಿ. ಊಹೆ ಮೇಲೆ ಬರೆಯಬೇಡಿ ಅದು ಬಹಳ ಅಪಾಯಕಾರಿ. ಕ್ಷುಲಕ ವಿಚಾರಗಳನ್ನು ವೈಭವೀಕರಿಸಬೇಡಿ, ಇದರಿಂದ ವ್ಯಕ್ತಿಯ ಮೇಲೆ ಆತನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಬರೆಯುವ ಸುದ್ದಿಗಳು ಸಮಾಜಕ್ಕೆ, ರಾಜ್ಯ ರಾಷ್ಟ್ರಕ್ಕೆ ಉಪಯೋಗವಾಗುವಂತೆ ಇರಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಯಾರನ್ನೂ ಕೇಳಿಲ್ಲ
ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

