ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ತುಂಬಸೋಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಹೇಶ್ ಡಿಪಿ ದೇವಲಾಪುರ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಾ ಕೆಂಡಗಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ನಿರ್ದೇಶಕರಿದ್ದು ನಾಮಪತ್ರ ಸಲ್ಲಿಸಲು ಶುಕ್ರವಾರ ಬೆಳಿಗ್ಗೆ 11:30 ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಹೇಶ್. ಉಪಾಧ್ಯಕ್ಷ ಸ್ಥಾನಕ್ಕೆ ಜಯ ಕೆಂಡಗಣಸ್ವಾಮಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ, ಚುನಾವಣಾಧಿಕಾರಿ ರವೀಶ್ ಅವರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು. ಹೆಸರು ಘೋಷಣೆ ಬಳಿಕ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊರಗಡೆ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಅಭಿಮಾನಿಗಳು ಅಧ್ಯಕ್ಷ ಮಹೇಶ್ ಹಾಗೂ ಉಪಾಧ್ಯಕ್ಷರಾಗಿರುವ ಜಯ ಅವರಿಗೆ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಮಹೇಶ್ ಡಿಪಿ, ಸುತ್ತಮುತ್ತಲಿನ ಗ್ರಾಮಗಳ ರೈತರ ಸಹಕಾರ ಮತ್ತು ಎಲ್ಲ ನಿರ್ದೇಶಕರ ಸಹಕಾರದಿಂದ ಇವತ್ತು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ನಮ್ಮ ಸಂಘದ ರೈತರ ಅಭಿವೃದ್ಧಿಗೆ, ಬಡ್ಡಿ ರಹಿತ ಸಾಲವನ್ನು ನೀಡಲು ಕ್ರಮವಹಿಸುತ್ತೇನೆ. ಅಲ್ಲದೆ ಸಾಲ ಮರುಪಾವತಿ ಮಾಡಿಕೊಂಡು ಸಂಘದ ಆರ್ಥಿಕತೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗೋದಾಮು ತೆರೆದು, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು, ಅದರಿಂದ ಬರುವ ಹಣದಿಂದ ಸಂಘವನ್ನು ಆರ್ಥಿಕವಾಗಿ ಸದೃಢವಾಗಿ ಮಾಡುವ ಅಸೆ, ಗುರಿ ಹೊಂದಿದ್ದೇನೆ ಎಂದು ಹೇಳಿದರು.
ನಿರ್ದೇಶಕ ಗೋಪಾಲಯ್ಯ ಮಾತನಾಡಿ, ರೈತರ ಏಳಿಗೆಗಾಗಿ, ಸಂಘದ ಆರ್ಥಿಕತೆ ಬಲಪಡಿಸಲು ನೂತನ ಅಧ್ಯಕ್ಷರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಿರ್ದೇಶಕರಾದ ಗೋಪಾಲಯ್ಯ ನಿಲುವಾಗಿಲು, ನಾಗರಾಜು, ಚೆನ್ನಾನಾಯಕ, ಮಲ್ಲಿಕಾರ್ಜುನ, ನಾಗರಾಜಪ್ಪ, ಕೆಂಪಾಲಮ್ಮ, ಸಣ್ಣನಾಯಕ, ಸಿದ್ದಮ್ಮ, ಸಣ್ಣೆಗೌಡ, ಜೆಡಿಎಸ್ ಮುಖಂಡ ಪ್ರಕಾಶ್ ಗುಂಡತ್ತೂರು, ಗೋಪಾಲಸ್ವಾಮಿ, ರಾಜೇಂದ್ರ, ಬೈರೇಗೌಡ, ಚರಣ್, ನಂಜೇಗೌಡ, ಪುಟ್ಟಸ್ವಾಮಿ ತುಂಬಸೋಗೆ, ಹನುಮಂತನಾಯಕ ನಿಲುವಾಗಿಲು, ರಂಗೇಗೌಡ, ಲಕ್ಕೇಗೌಡರು, ತಿಮ್ಮನಾಯಕ ಹೆಬ್ಬಲಗುಪ್ಪೆ, ಮಹೇಶ್ ಗ್ರಾಮಸ್ಥರು, ಸುತ್ತಮುತ್ತಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಮುಂಬರುವ ಚುನಾವಣೆಗೆ ದಿಕ್ಸೂಚಿ
“ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೆಲುವು ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಮುಖಂಡರು ಯಾರೇ ಏನೇ ಹೇಳಿದರೂ, ಏನೇ ಸವಾಲು ಹಾಕಿದರೂ 2028 ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಗೆದ್ದೇ ಗೆಲ್ಲುತ್ತಾರೆ.
– ಪ್ರಕಾಶ್ ಗುಂಡತ್ತೂರು ಜೆಡಿಎಸ್ ಮುಖಂಡರು

