ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಲಚ್ಯಾಣದಲ್ಲಿ ನಡೆದ ಸದ್ಗುರು ಶ್ರೀ ಶಂಕರಲಿಂಗ ಶಿವಯೋಗಿಗಳ ಮಹಾರಥೋತ್ಸವ ಅಂಗವಾಗಿ ಬುಧವಾರದಂದು ಅಗ್ನಿ ಶಮನ ಕಾರ್ಯಕ್ರಮ ನೆರೆದ ಸಹಸ್ರಾರು ಭಕ್ತರ ಜಯಘೋಷಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ನಿಗಧಿಯಂತೆ ಲಚ್ಯಾಣ ಹಾಗೂ ಬಂಥನಾಳ ಮಠದ ಪ್ರಸ್ತುತ ಪೀಠಾಧೀಶರಾದ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಬೇಕಿತ್ತು. ಆದರೆ ಬಂಥನಾಳ ಪೂಜ್ಯರ ಅಪ್ಪಣೆಯ ಮೇರೆಗೆ ಯರನಾಳ ಮಠದ ಪೀಠಾಧೀಶರಾದ ಪೂಜ್ಯ ಗುರು ಸಂಗನಬಸವ ಮಹಾಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಪ್ರವೇಶ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆಯಿತು. ಅಪರೂಪದ ಈ ದೃಶ್ಯಕ್ಕೆ ನೆರೆದ ಸಹಸ್ರಾರು ಜನರು ಸಾಕ್ಷಿಯಾಗಿ ಪೂಜ್ಯರ ದರ್ಶನ ಪಡೆದು ಪುನೀತರಾದರು.
ಶ್ರೀ ಸಿದ್ದಲಿಂಗ ಮಹಾರಾಜರ ಐಕ್ಯ ಮಂಟಪದಿಂದ ಆರಂಭವಾದ ಯರನಾಳ ಪೂಜ್ಯರ ಪಲ್ಲಕ್ಕಿ ಉತ್ಸವ ಭವ್ಯ ಮೆರವಣಿಗೆಯೊಂದಿಗೆ ಉತ್ತರ ದಿಕ್ಕಿನ ಮಠದ ಮಹಾದ್ವಾರ ಬಾಗಿಲಿನ ಮುಂಭಾಗದ ಪಾದಗಟ್ಟೆಯ ವರೆಗೆ ವಾದ್ಯ ಮೇಳದೊಂದಿಗೆ ನಡೆಯಿತು.
ಬಳಿಕ ಪುರವಂತರೊAದಿಗೆ ಅಗ್ನಿ ಶಮನ ಕಾರ್ಯಕ್ರಮ ಮಠದ ಸಂಪ್ರದಾಯದಂತೆ ಸಂಭ್ರಮದಿಂದ ನೇರವೇರಿತು.
ಸುಕ್ಷೇತ್ರ ಯರನಾಳ ಮಠಕ್ಕೂ ಲಚ್ಯಾಣ ಮಠಕ್ಕೂ ಅವಿನಾಭಾವ ಸಂಬಂಧ. ಲಚ್ಯಾಣ ಮಠ ಬಂಥನಾಳ ಮಠದ ಶಾಖಾ ಮಠವಾಗಿದೆ. ಲಚ್ಯಾಣ ಹಾಗೂ ಬಂಥನಾಳ ಮಠದ ಈ ಹಿಂದಿನ ಪೀಠಾಧೀಶ ರಾಗಿದ್ದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಈ ಮಠದ ಪೀಠಾಧೀಶರಾಗುವ ಮುನ್ನ ಯರನಾಳದ ಮಠದ ಪೀಠಧೀಶರಾಗಿದ್ದರು. ಇಂತಹ ವೀರಕ್ತ ಮಠ ಯರನಾಳ ಮಠದ ಪ್ರಸ್ತುತ ಪೀಠಧೀಶರಾದ ಶ್ರೀ ಗುರು ಸಂಗನಬಸವ ಮಹಾಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ನಡೆದದ್ದು ಭಕ್ತರ ಸಂತಸ ಇಮ್ಮಡಿಗೊಳಿಸಿದೆ. ಲಚ್ಯಾಣ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಉತ್ಸವದಲ್ಲಿ ಯರನಾಳ ಮಠದ ಈ ಹಿಂದಿನ ಪೀಠಾಧೀಶರಾಗಿದ್ದ ಶ್ರೀ ದಯಾನಂದ ಪೂಜ್ಯರ ಅಡ್ಡಪಲ್ಲಕ್ಕಿ ಉತ್ಸವ ಭವ್ಯವಾಗಿ ಜರುಗಿತ್ತು ಎಂದು ಭಕ್ತಿಯಿಂದ ಸ್ಮರಿಸುತ್ತಾರೆ ಸ್ಥಳೀಯ ನಿವೃತ್ತ ಪ್ರಾಚಾರ್ಯ ಎ. ಪಿ. ಕಾಗವಾಡ.
ಇದೇ ದಿನ ರಾತ್ರಿ ಖ್ಯಾತ ಕಲಾವಿದ ಸಿದ್ದು ನಾಲವತವಾದ ನೇತೃತ್ವದಲ್ಲಿ ಬಂಜೆಯ ತೊಟ್ಟಿಲು ಎಂಬ ಸಾಮಾಜಿಕ ನಾಟಕದ ಯಶಸ್ವಿ ಪ್ರದರ್ಶನಗೊಂಡು ನೆರೆದ ಪ್ರೇಕ್ಷಕರ ಮನಗೆದ್ದಿತು.
ಈ ದಿನ ಇಲ್ಲಿನ ಅನ್ನ ದಾಸೋಹ ಕೇಂದ್ರದಲ್ಲಿ ಭಕ್ತರು ವಿಶೇಷ ಅನ್ನ ಪ್ರಸಾದ ಸವಿದು ಕೃತಾರ್ಥರಾದರು.

