ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯ, ಏಕಾಗ್ರತೆ, ಶಿಸ್ತು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯಗತ್ಯ. ಸದೃಢ ದೇಹದಲ್ಲಿ ಆರೋಗ್ಯಕರ ಮನಸ್ಸು ಮೂಡಲು ಕ್ರೀಡೆಗಳು ಸಹಕಾರಿ. ಕ್ರೀಡೆಗಳು ತಂಡದ ಕೆಲಸ, ನಾಯಕತ್ವ ಗುಣ, ಪರಸ್ಪರ ಸಹಕಾರ ಮತ್ತು ಕ್ರೀಡಾ ಮನೋಭಾವದಂತಹ ಗುಣಗಳನ್ನು ಬೆಳೆಸಲು ಸಹಾಯ ಮಾಡುತ್ತವೆ ಎಂದು ಬಸವನ ಬಾಗೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಬಿ.ಹೊಸಮನಿ ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎರಡನೇಯ ವಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕಬ್ಬಡ್ಡಿ ಪಂದ್ಯಾವಳಿಯ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸಮಯೋಚಿತ ಯೋಜನೆ, ಚಾಣಾಕ್ಷತನ, ಕ್ರೀಡಾ ಸಾಮರ್ಥ್ಯದೊಂದಿಗೆ ಎದುರಾಳಿ ತಂಡದ ಅಸಮರ್ಥತೆಯನ್ನು ಗುರುತಿಸಿ ತನ್ಮೂಲಕ ಪರಸ್ಪರ ಒಗ್ಗಟ್ಟಿನಿಂದ ಕಬ್ಬಡ್ಡಿ ಆಟವಾಡಿದಾಗ ಮಾತ್ರ ಗೆಲುವು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎ.ಐ.ಹಂಜಗಿ ಮಾತನಾಡಿ, ಕ್ರೀಡಾಪಟುಗಳು ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಸದಾ ಕ್ರೀಡಾ ಸ್ಪೂರ್ತಿಯಿಂದ ತಮ್ಮ ಆಟವನ್ನು ಪ್ರದರ್ಶಿಸಬೇಕು. ಕ್ರೀಡಾಪಟುಗಳ ರಾಷ್ಟ್ರೀಯ ಮಟ್ಟದ ಸಾಧನೆಗೆ ಸೂಕ್ತ ಉದ್ಯೋಗಾವಕಾಶ ದೊರೆಯುತ್ತವೆ. ಆ ನಿಟ್ಟಿನಲ್ಲಿ ತಾವೆಲ್ಲರೂ ಸಾಧನೆ ತೋರಿ ಉನ್ನತ ಹುದ್ದೆಗಳನ್ನು ಬಾಚಿಕೊಳ್ಳಬೇಕು ಎಂದರು.
ಆಯೇರಿಯ ಶ್ರೀ ಸಂಜಯ ಜಾಧವ, ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ. ಆರ್.ಎಸ್.ಕುರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸಂಗಮೇಶ ಗುರವ, ಕ್ರೀಡಾ ನಿರ್ದೇಶಕಿ ಶ್ರೀಮತಿ ರೇಣುಕಾ ಅಂಬಲಿ ಇನ್ನಿತರರು ವೇದಿಕೆಯ ಮೇಲಿದ್ದರು.
ಅಂತಿಮವಾಗಿ ಆತಿಥೇಯ ಸರ್ಕಾರಿ ಪದವಿ ಕಾಲೇಜು, ವಿಜಯಪುರ ತಂಡ ಹಾಗೂ ಬಂಜಾರಾ ಪದವಿ ಕಾಲೇಜು ತಂಡಗಳ ನಡುವೆ ನಡೆದ ಫೈನಲ್ ಪಂದ್ಯವು ಬಹಳ ರೋಚಕವಾಗಿತ್ತು. ಸಮಬಲದ ಹೋರಾಟ ನಡೆದರೂ ಅಂತಿಮವಾಗಿ ಬಂಜಾರಾ ಕಾಲೇಜು ತಂಡ ಗೆಲುವು ಸಾಧಿಸಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯಿತು ಮತ್ತು ಆತಿಥೇಯ ಸರ್ಕಾರಿ ಪದವಿ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು ೬ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಡಾ. ಚಿದಾನಂದ ಆನೂರ, ಡಾ. ಸುನೀಲ ತೋಂಟಾಪೂರ, ಪ್ರೊ. ಎಂ.ಎಸ್.ಖೊದ್ನಾಪೂರ, ಪ್ರೊ. ಸುನೀಲ ಹತ್ತಿ, ಸರ್ಕಾರಿ ನೌಕರ ಸಂಘದ ನಿರ್ದೇಶಕರ ಡಾ. ಚಂದ್ರಕಾಂತ.ಬಿ, ಡಾ. ದೇವೇಂದ್ರಗೌಡ, ಪ್ರೊ. ಸಿದ್ರಾಮ ಯರನಾಳ, ಡಾ. ರಮೇಶ ತೇಲಿ, ನವೀನ ಬಿರಾದಾರ, ಯು.ಬಿ.ಮುಜಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

