ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಆದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣಾ ಕಾವು ರಂಗೇರುತ್ತಿದ್ದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ನಡುವೆ ಮಾತಿನ ವಾಕ್ಸಮರ ಜೋರಾಗಿದೆ. ಮಧ್ಯಪ್ರಾಚ್ಯದಲ್ಲಿ ನಿಜವಾದ ಯುದ್ಧ ನಡೆಯುತ್ತಿದ್ದರೆ ವನಸಿರಿ ನಾಡಿನಲ್ಲಿ ಮಾತಿನ ಯುದ್ಧ ತುಸು ಜೋರಾಗಿಯೇ ನಡೆಯುತ್ತಿದೆ.
ಇತ್ತೀಚೆಗೆ ನಡೆದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಅವರು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಆರೋಪಗಳ ಸುರಿಮಳೆಗೈದ್ದಿದ್ದರು. ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹದಗೆಟ್ಟ ರಸ್ತೆಗಳ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಜೆಡಿಎಸ್ ಮುಖಂಡರು ಟೀಕೆಗಳ ಸುರಿಮಳೆಗೈದಿದ್ದರು. ಇದರಿಂದ ಕೇರಳಿ ಕೆಂಡವಾಗಿರುವ ಕಾಂಗ್ರೆಸ್ ನಾಯಕರು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ವಿರುದ್ಧ ತಿರುಗಿಬಿದ್ದಿದ್ದಾರೆ. ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಸೌಮ್ಯ ಮಂಜುನಾಥ್, ಶಾಸಕರ ಕೊಡುಗೆ ಏನು ಎಂಬುದನ್ನು ಸಾಕ್ಷಿ ಸಮೇತ ತೋರಿಸಿ ಕೆ.ಎಂ. ಕೃಷ್ಣನಾಯಕರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಶುಕ್ರವಾರ ತಾಲೂಕು ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ಮಂಜುನಾಥ್ ಅವರು, ಇತ್ತೀಚೆಗಷ್ಟೇ ಡಾಂಬರೀಕರಣಗೊಂಡಿರುವ ಹೆಚ್ ಡಿ ಕೋಟೆ ಟು ಚಿಕ್ಕ ಕೆರೆಯೂರು ರಸ್ತೆ ಹಾಗೂ ಸಮುದಾಯ ಭವನ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿರುವ ಪಡುಕೋಟೆ ಹಾಡಿಗೆ ತೆರಳಿ ಕೆ.ಎಂ. ಕೃಷ್ಣನಾಯಕರೇ ನೀವು ಕೂಡ ಇಲ್ಲಿಗೆ ಭೇಟಿ ನೀಡಿ, ಆದಿವಾಸಿಗಳ ಜೊತೆ ಮಾತನಾಡಿ. ಅವರಿಂದ ಪ್ರತಿಕ್ರಿಯೆ ಪಡೆದ ಬಳಿಕ ಶಾಸಕ ಅನಿಲ್ ಚಿಕ್ಕಮಾದು ಕಾರ್ಯವೈಖರಿ ಬಗ್ಗೆ ಮಾತನಾಡಿ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಅವರು ಕಳೆದ 8 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ದಶಕಗಳಿಂದಲೂ ತಿರುಗಾಡಲು ಕಷ್ಟವಾಗಿದ್ದ ರಸ್ತೆಗಳನ್ನು ಅಗಲೀಕರಣ ಮಾಡಿಸಿ ಡಾಂಬರ್ ಹಾಕಿಸಿದ್ದಾರೆ. ಬೈಕ್ ಗಳು ಕೂಡ ಹೋಗದಂತಹ ರಸ್ತೆಗಳು ಇವತ್ತು ಡಾಂಬರೀಕರಣಗೊಂಡಿದ್ದು, ವಾಹನ ಸವಾರರು ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಗದ್ದಿಗೆ ಸರ್ಕಲ್ ನಿಂದ ಚಿಕ್ಕಕೆರೆಯೂರು ರಸ್ತೆಗೆ ಡಾಂಬರೀಕರಣ ಮಾಡಿಸಿದ್ದಾರೆ. ಬಿದರಹಳ್ಳಿಯಿಂದ ಎನ್ ಬೇಗೂರುವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗೆ ಅನೇಕ ಕಡೆ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದೆ. ೭೫ ವರ್ಷಗಳಿಂದ ಆಗದಿದ್ದ ನೆನೆಗುದ್ದಿಗೆ ಬಿದ್ದಿದ್ದ ರಸ್ತೆಗಳು ಇಂದು ಡಾಂಬರು ಕಂಡಿದೆ. ಹಂತ ಹಂತವಾಗಿ ಅವಳಿ ತಾಲೂಕಿನಲ್ಲಿರುವ ರಸ್ತೆಗಳು ದುರಸ್ತಿಯಾಗುತ್ತಿವೆ. ಆದರೆ ಕೆ.ಎಂ .ಕೃಷ್ಣನಾಯಕರು ಶಾಸಕ ಅನಿಲ್ ಚಿಕ್ಕಮಾದು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಿಕೊಳ್ಳದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇವತ್ತು ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಬದುಕು ಹಸನಾಗಿದೆ. ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ಅರಣ್ಯವಾಸಿಗಳಿಗೆ ನೀಡುತ್ತಿರುವ ಆಹಾರಧಾನ್ಯ ಅವರನ್ನು ಹಸಿವು ಮುಕ್ತರನ್ನಾಗಿ ಮಾಡಿದೆ ಎಂದು ಸೌಮ್ಯ ಮಂಜುನಾಥ್ ಹೇಳಿದರು.
“ಶಾಸಕ ಅನಿಲ್ ಚಿಕ್ಕಮಾದು ಅವರು ನಮ್ಮ ಹಾಡಿಗೆ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ರಸ್ತೆ ಮಾಡಿಸುತ್ತಿದ್ದಾರೆ. ಇದರಿಂದ ನಮಗೆ ತಿರುಗಾಡಲು ಅನುಕೂಲವಾಗುತ್ತಿದೆ. ಪ್ರತಿ ತಿಂಗಳು ಆಹಾರ ಕಿಟ್ ಸಿಗುತ್ತೆ. ಸಮುದಾಯ ಭವನ ಮಾಡಿಸುತ್ತಿದ್ದಾರೆ. ಇದರಿಂದ ನಮಗೆ ಅನೇಕ ಅನುಕೂಲ ಆಗಲಿದೆ.”
– ಆದಿವಾಸಿ ಮಹಿಳೆ
ಪಡುಕೋಟೆ ಹಾಡಿ

