ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಶ್ರೀ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣದ ಎದುರಿಗಿರುವ ಸಾರ್ವಜನಿಕ ಗ್ರಂಥಾಲಯ ಮೇಲ್ಛಾವಣೆ ಕಟ್ಟಡದ ಸಿಮೆಂಟ್ ಪದರು ಕುಸಿದು ಬಿದ್ದಿದೆ.
ನಗರದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸಿಮೆಂಟ್ ಪದರು ಉದುರಿ ಕೆಳಗಡೆ ಬಿದ್ದಿದೆ. ಇದರಿಂದ ಅಲ್ಲಿದ್ದ ಸಾಮಗಿಗಳು ಹಾಳಾಗಿದ್ದು, ಅದೃಷ್ಟವಶಾತ್ ಅಲ್ಲಿ ಓದುಗರು ಯಾರು ಇಲ್ಲದ ಕಾರಣ ಯಾರಿಗೂ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿ ಹೈಟೆಕ್ ಗ್ರಂಥಾಲಯ ನಿರ್ಮಿಸಬೇಕು ಎಂಬುದು ಓದುಗರ ಆಶಯವಾಗಿದೆ.
ಈ ಘಟನೆಯ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಂಥಾಲಯದ ಸಹವರ್ತಿ ರಾಜಶೇಖರ ಹತ್ತರಕಿ, ಗ್ರಂಥಾಲಯ ದುರಸ್ತಿಯ ಬಗ್ಗೆ ಮೇಲಾಧಿಕಾರಿಗಳಿಗೆ ಅನೇಕ ಬಾರಿ ವರದಿ ಸಲ್ಲಿಸುತ್ತಲೇ ಬಂದಿದ್ದೇವೆ. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ನಮ್ಮ ಮೇಲಾಧಿಕಾರಿಗಳಿಗೆ ಸಿಂದಗಿ, ಬಸವನ ಬಾಗೇವಾಡಿ, ತಾಳಿಕೋಟೆ ತಾಲೂಕಿಗೆ ಹೈಟೆಕ್ ಗ್ರಂಥಾಲಯ ಹೊಸ ಕಟ್ಟಡ ನಿರ್ಮಾಣ ಮಾಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಸ್ವಲ್ಪ ಕಾಯಿರಿ ಎಂದು ಹೇಳಿದ್ದಾರೆ. ಅದಕ್ಕಾಗಿ ಅವರ ಮಾತಿನಂತೆ ನಾವು ಕಾದು ಕುಳತಿದ್ದೇವೆ. ಈಗಾಗಲೇ ಕಟ್ಟಡಕ್ಕೆ ಸಂಬಂಧಿಸಿದಂತೆ ಅಳತೆ ಮತ್ತು ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಪ್ರತಿನಿತ್ಯ ನಾನು ಓದುವುದಕ್ಕಾಗಿ ಗ್ರಂಥಾಲಯಲಕ್ಕೆ ಹೋಗುತ್ತೇನೆ. ಪ್ರತಿನಿತ್ಯ ಅಲ್ಲಿಯೇ ಕುಳಿತು ಓದುತ್ತಿದ್ದೆ. ಅದೃಷ್ಟವಶಾತ್ ಇಂದು ಅಲ್ಲಿ ಕುಳಿತುಕೊಂಡಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ಹಿತದೃಷ್ಠಿಯಿಂದ ಇಂದಿನ ಯುವ ಜನಾಂಗಕ್ಕೆ ಉನ್ನತ ಶ್ರೇಣಿಯ ಗ್ರಂಥಾಲಯದ ಅವಶ್ಯಕತೆಯಿದ್ದು, ನೂತನ ಗ್ರಂಥಾಲಯ ಕಟ್ಟಡ ಅವಶ್ಯಕತೆ ಇದೆ. ಇನ್ನಾದರೂ ನಗರಕ್ಕೆ ಒಂದು ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಲಿ ಎಂದು ಓದುಗರ ಆಶಯ.”
– ಅನಿಲ ಎಸ್
ಓದುಗ

