ಉದಯ ರಶ್ಮಿ ದಿನಪತ್ರಿಕೆ
ಅಥಣಿ: ಸಮಾಜದಲ್ಲಿ ಪುರುಷರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ನೀಡುವಷ್ಟೇ ಗೌರವವನ್ನು ಇತರ ಮಹಿಳೆಯರಿಗೂ ನೀಡಿದಾಗ ಮಾತ್ರ ಒಂದು ಸುಸಂಸ್ಕೃತ ಕುಟುಂಬ ಮತ್ತು ಸಮಾಜ ನಿರ್ಮಾಣ ಸಾಧ್ಯ, ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌಧರಿ ಪ್ರತಿಪಾದಿಸಿದರು.
ಪಟ್ಟಣದ ‘ಭರವಸೆ ಬೆಳಕು ಫೌಂಡೇಶನ್’ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಕೂಡ ಅಂತರಜಾತಿ ವಿವಾಹವಾಗಿದ್ದು, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ನಾವೆಲ್ಲರೂ ಬಸವ ತತ್ವಗಳನ್ನು ಪಾಲಿಸಿದರೆ ಕರ್ನಾಟಕವು ವಿಶ್ವಕ್ಕೆ ಮಾದರಿಯಾಗಬಲ್ಲದು ಇಂದು ಮಹಿಳೆಯರು ಕಾನೂನು ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೆ ದೊಡ್ಡ ಶಕ್ತಿಯಾಗಿದೆ, ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿದ ಅವರು, ಸ್ಥಳೀಯ ಮಹಿಳೆಯರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸರ್ಕಾರಿ ವಿವಿಧ ಇಲಾಖೆಗಳಲ್ಲಿನ ಲೋಪದೋಷಗಳ ಬಗ್ಗೆ ಬಂದ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡಲು ಸೂಚಿಸಿದರು.
ಈ ವೇಳೆ ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷರಾದ ರೂಪಾ ಕಾಂಬಳೆ, ತಾಲೂಕಾ ದಂಡಾಧಿಕಾರಿ ಸಿದರಾಯ ಭೋಸಗಿ, ತಾಲೂಕು ಪಂಚಾಯತ ಇ ಒ ಶಿವಾನಂದ ಕಲ್ಲಾಪುರ, ಪಿಎಸ್ಐ ಜಿ ಎಸ್ ಉಪ್ಪಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಸೌಂದಲಗೇಕರ ತಾಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ವೆಂಕಟೇಶ ಕುಲಕರ್ಣಿ,ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ,ಸವಿತಾ ಕಾಂಬಳೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನುರಾರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು

