ಬೇಸಿಗೆಯಲ್ಲಿ ಗ್ರಾಹಕರಿಗೆ ಮತ್ತಷ್ಚು ಬಿಸಿಯೇರಿಸಿದ ನಿಂಬೆ | ನಿಂಬೆಯೊಂದಕ್ಕೆ 8 ರೂ.ಗಿಂತ ಹೆಚ್ಚು ಬೆಲೆ | ಇಳುವರಿ ಕಡಿಮೆ ಬಂದದ್ದೇ ಕಾರಣ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಏರಿಕೆಯಾಗುವ ನಿಂಬೆಹಣ್ಣಿನ ದರ ಈ ಬಾರಿ ಕೂಡಾ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಬಿಸಿಲು ಬೇಗೆಯ ನಡುವೆ ನಿತ್ಯ ಬಳಸುವ ನಿಂಬೆ ದರವೂ ಗ್ರಾಹಕರಿಗೆ ಬಿಸಿಯೇರಿಸಿದೆ.
ಪಟ್ಟಣದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕಂಡಿತೆಂದು ಖರೀದಿಗೆ ತೆರಳಿದರೆ ದರ ಬಲು ದುಬಾರಿಯಾಗಿದೆ. ನಿಂಬೆವೊಂದಕ್ಕೆ ಸುಮಾರು 7ರಿಂದ 8 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಗಾತ್ರದ ನಿಂಬೆ ಹಣ್ಣು ಮಾತ್ರ ಕಡಿಮೆ ದರಕ್ಕೆ ಲಭ್ಯವಿದೆ.
ನಿಂಬೆ ಹಣ್ಣು ಸಿಗುವುದು ಕಷ್ಟ
ಬಿಸಿಲ ಬೇಗೆಯ ನಡುವೆ ಗ್ರಾಹಕರಿಗೆ ಬಿಸಿಯೇರಿಸಿದೆ ನಿತ್ಯ ಬಳಸುವ ನಿಂಬುವಿನ ದರ ಸದ್ಯ ಗರಿಷ್ಠ ದರಲ್ಲಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಗುಣಮುಟ್ಟದ ನಿಂಬೆ ಹಣ್ಣು ಸಿಗುವುದು ಕಡಿಮೆಯಾಗಿದೆ. ಇದರಿಂದ ಅಗತ್ಯದಷ್ಟು ಕೊಳ್ಳಲೂ ಆಗದೇ ಬಿಡಲೂ ಆಗದೇ ಗ್ರಾಹಕರು ಪರಿತಪಿಸುವಂತಾಗಿದೆ.
ನಿಂಬೆಹಣ್ಣಿನ ದರ ಜೇಬಿಗೆ ಕುತ್ತು
ಆರೋಗ್ಯಕ್ಕೆ ಹಿತಕಾರಿಯಾದ ನಿಂಬೆಯನ್ನು ಆಹಾರ ಪದಾರ್ಥಗಳಲ್ಲಿಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಇಲ್ಲದಿದ್ದರೆ ಹೇಗೆ ಸಪ್ಪೆಯೋ ಹಾಗೇ ಕೆಲವು ಅಡುಗೆ ಪದಾರ್ಥ ತಯಾರಿಯಲ್ಲಿ ನಿಂಬೆ ಇರುವಿಕೆ ಬಹಳ ಮುಖ್ಯ. ಅದರಲ್ಲೂಈ ಬೇಸಿಗೆಯಲ್ಲಿ ಜ್ಯೂಸ್ ಮಾಡಿಕೊಳ್ಳಲು ಇದು ಇರಲೇಬೇಕು. ಅದಕ್ಕಿಂತ ಹೆಚ್ಚಾಗಿ ಉಪ್ಪಿನಕಾಯಿಗೆ ನಿಂಬೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಈ ಹಣ್ಣಿನ ದರ ಜೇಬಿಗೆ ಕುತ್ತು ತಂದಿಟ್ಟಿದೆ. ಒಳ್ಳೆಯ ಗುಣಮಟ್ಟದ ನಿಂಬೆಯೊಂದಕ್ಕೆ 8 ರೂ.ಗಿಂತ ಹೆಚ್ಚು ಬೆಲೆಯಿಂದೆ. ಸಣ್ಣಸಣ್ಣ ನಿಂಬೆ ಕೊಂಡೊಯ್ದರೆ ಅದರಲ್ಲಿ ರಸವೇ ಇರುವುದಿಲ್ಲ ಎನ್ನುತ್ತಾರೆ ಜ್ಯೂಸ್ ವ್ಯಾಪಾರಿ ಕಾಶೀನಾಥ ಜನಗೌಡ.
ಈ ಬಾರಿ ಇಳುವರಿ ಕಡಿಮೆ
ಗ್ರಾಮಗಳ ತೊಟಗಳ ಬದುವು, ತಗ್ಗು ಪ್ರದೇಶದಲ್ಲಿ ಮನೆಯಂಗಳದಲ್ಲಿ ಹೆಚ್ಚಾಗಿ ನಿಂಬೆ ಗಿಡಗಳಿರುತ್ತವೆ. ಮನೆ ಖರ್ಚಿಗೆ ಸಾಕಾಗುವಷ್ಟು ನಿಂಬೆ ಹಣ್ಣು ಈ ಗಿಡಗಳಲ್ಲೇ ಸಿಗುತ್ತವೆ. ಆದರೆ, ಈ ಬಾರಿ ಮಳೆಗಾಲದಲ್ಲಿ ಅತಿಯಾದ ಮಳೆಯಿಂದಾಗಿ ಇದರ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಗಿಡಗಳಲ್ಲಿ ನಿಂಬೆ ಪ್ರಮಾಣ ತೀರಾ ಕಡಿಮೆಯಾಗಿದೆ. ಅದರಲ್ಲೂ ಬೇಸಿಗೆಯ ಅಬ್ಬರಕ್ಕೆ ಗಿಡಗಳನ್ನು ಬದುಕಿಸಿಡುವುದೇ ಸವಾಲಾಗಿದೆ.
“ಈಗ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಒಂದು ನಿಂಬೆ ಹಣ್ಣು 5 ರೂ.ದಿಂದ 6 ರೂ.ಗೆ ಮಾರಾಟವಾದರೆ, ದೊಡ್ಡ ಗಾತ್ರದ ನಿಂಬೆಹಣ್ಣಿನ ಬೆಲೆ 7 ರೂ.ದಿಂದ 10 ರೂ.ಇದೆ. ಮಾರುಕಟ್ಟೆಯ ಬೇಡಿಕೆಗೆ ಅನುಸಾರ ಬೆಳೆಗಾರರಿಂದ ನಿಂಬೆ ಸಿಗುತ್ತಿಲ್ಲ. ಕಳೆದ ವರ್ಷ ಇದ್ದ ದುಬಾರಿ ದರ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಾಗಬಹುದು.”
– ನಿಂಬೆಹಣ್ಣಿನ ವ್ಯಾಪಾರಿಗಳು
ಜಮಖಂಡಿ
“ರಾಜ್ಯದಲ್ಲಿ ಹೆಚ್ಚಾಗಿ ನಿಂಬೆ ಪೂರೈಸುವ ನಮ್ಮ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಇಳುವರಿ ಕುಸಿತವಾಗಿರುವುದು ದರ ಹೆಚ್ಚಲು ಕಾರಣವಾಗಿದೆ. ಚಳಿಗಾಲದಲ್ಲಿ 10-12 ಚೀಲ ಸಿಗುವಲ್ಲಿ ಈಗ 2 ಚೀಲ ಅವರು ಹೇಳಿದ ದರಕ್ಕೆ ಸಿಗುತ್ತಿದೆ. ಇನ್ನು ಆಂಧ್ರದಿಂದ ಬರುತ್ತಿದ್ದರೂ ಅದು ಇನ್ನೂ ಸರಿಯಾಗಿ ಬರುತಿಲ್ಲ. ಅದು ಸರಿಯಾಗಿ ಮಾರುಕಟ್ಟೆಗೆ ಬರಲು ಶುರುವಾದಾಗ ಬೆಲೆ ಇಳಿಯಬಹುದು.”
– ಮಲ್ಲು ನಾವಿ
ಹೊಕುಂಡಿ ಗ್ರಾಮದ ನಿಂಬೆ ಬೆಳೆಗಾರ.

