ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ತಿಂಗಳು ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಜೋರಾಗಿತ್ತು ಆದ್ರೆ ಈಗ ಕಾರ್ಖಾನೆಗಳೆಲ್ಲ ಬಂದಾಗಿ ಕಬ್ಬಿನ ಟ್ರ್ಯಾಕ್ಟರ್ ಗಳ ಓಡಾಟ ಬಂದಾಗಿದ್ದು ಸಧ್ಯ ಎಲ್ಲೆಡೆ ಜೋಳದ ಕಣಿಕೆ ಹೊತ್ತ ಟ್ರ್ಯಾಕ್ಟರ್ಗಳ ಓಡಾಟ ಹೆಚ್ಚಾಗಿದೆ. ಕಬ್ಬಿನ ಟ್ರ್ಯಾಕ್ಟರ್ಗಳು ಸಕ್ಕರೆ ಕಾರ್ಖಾನೆಗಳತ್ತ ಮುಖಮಾಡುತ್ತಿದ್ದವು, ಕಣಿಕೆ ಹೊತ್ತ ವಾಹನಗಳು ಒಣಬೇಸಾಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಹೋಗುತ್ತಿವೆ.
ನೆರೆ ರಾಜ್ಯಕ್ಕೂ ಸಾಗಣೆ : ಬಾಗಲಕೋಟೆˌ ಹುನಗುಂದ, ಬಾದಾಮಿ ಮತ್ತು ವಿಜಯಪೂರ ಜಿಲ್ಲೆಯ ಬಹುತೇಕ ತಾಲೂಕುಗಳ ಭಾಗದಲ್ಲಿ ಬೆಳೆದ ಬಿಳಿಜೋಳದ ಕಣಿಕೆ ಬೀಳಗಿ, ಮುಧೋಳ ಮತ್ತು ಜಮಖಂಡಿ ತಾಲೂಕಿನ ಗ್ರಾಮಗಳಿಗೆ ಬರುತ್ತಿದೆ. ಅಷ್ಟಾದರೆ ಪರವಾಗಿಲ್ಲ. ಬಾಗಲಕೋಟೆ ಮತ್ತು ವಿಜಯಪೂರ ಜಿಲ್ಲೆಯ ಕಣಿಕೆ ಅಕ್ಕಪಕ್ಕದ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರಕ್ಕೂ ಸಾಗಣೆ ಆಗುತ್ತಿದೆ. ರಾಜ್ಯ ಹೆದ್ದಾರಿಗಳ ಮೇಲೆ ಕಣಿಕೆ ಸಾಗಣೆ ಜೋರಾಗಿದೆ. ಟ್ರ್ಯಾಕ್ಟರ್ ಟೇಲರ್ˌ ಲಾರಿˌ ಚಕ್ಕಡಿಯಲ್ಲೂ ಕಣಿಕೆ ಸಾಗಣೆ ದೃಶ್ಯ ಕಾಣಬಹುದಾಗಿದೆ.
ಹೆಚ್ಚಿದ ಬೇಡಿಕೆ: ಬಾಗಲಕೋಟೆ ಜಿಲ್ಲೆಯ ಮುಧೋಳ, ಬೀಳಗಿ ಹಾಗೂ ಜಮಖಂಡಿ ತಾಲೂಕುಗಳಲ್ಲಿನ ರೈತರು ಹೆಚ್ಚಾಗಿ ಕಬ್ಬನ್ನೇ ಬೆಳೆಯುತ್ತಿರುವುದರಿಂದ ಜಾನುವಾರುಗಳಿಗೆ ಅಗತ್ಯವಾಗಿ ಬೇಕಿರುವ ಬಿಳಿಜೋಳ ಕಣಿಕೆಯನ್ನು ಒಣಬೇಸಾಯ ಪ್ರದೇಶದಿಂದಲೇ ಪಡೆದುಕೊಳ್ಳಬೇಕಾಗಿದೆ. ಜಾನುವಾರುಗಳಿಗೆ ಹಸಿರು ಹುಲ್ಲು ಈ ಪ್ರದೇಶದಲ್ಲಿ ಸಾಕಷ್ಟು ಲಭ್ಯವಿದ್ದರೂ ಜೋಳದ ಕಣಿಕೆಯ ಅಗತ್ಯವೂ ಸಾಕಷ್ಟಿದೆ. ಹಾಗಾಗಿ ಈ ಭಾಗದಲ್ಲಿನ ರೈತರು ಕಣಿಕೆ ಖರೀದಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.
7-10 ಸಾವಿರ ರೂಪಾಯಿ : ಜೋಳ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗಿ ನೀರಾವರಿ ವ್ಯಾಪ್ತಿ ಹೆಚ್ಚುತ್ತಿದೆ. ಪರಿಣಾಮವಾಗಿ ಬಿಳಿಜೋಳ ಮತ್ತು ಕಣಿಕೆ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿವೆ.
ಪಕ್ಕದ ವಿಜಯಪೂರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾನಾ ಹಳ್ಳಿಗಳ ಭಾಗದ ಜೋಳದ ಕಣಿಕೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿನ ಕಣಿಕೆಯ ರುಚಿ ಇತರ ಭಾಗಗಗಳಿಗಿಂತ ಚೆನ್ನಾಗಿರುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಹಾಗಾಗಿ ಇಲ್ಲಿನ ಪ್ರತಿ ಟ್ರ್ಯಾಕ್ಟರ್ ಕಣಿಕೆ 7 ಸಾವಿರದಿಂದ 10 ಸಾವಿರ ರೂಪಾಯಿಗಳಿದ್ದು, ಒಂದು ಚಕ್ಕಡಿಗೆ ಕನಿಷ್ಠ 2500 ರಿಂದ 3 ಸಾವಿರ ರೂಪಾಯಿ ಇದೆ. 5 ಮಾರು ಉದ್ದ ಮತ್ತು 2 ಮಾರು ಅಗಲದ ಬಣಿವೆಗಳಿಗೆ 25 ಸಾವಿರದಿಂದ 30 ಸಾವಿರಗಳವರೆಗೆ ಬೆಲೆ ಇದೆ. ಆಗಷ್ಟ ವೇಳೆಗೆ ಈ ಬೆಲೆ 40ರಿಂದ 50 ಸಾವಿರ ರೂ.ಗಳ ವರೆಗೂ ತಲುಪಲಿದೆ ಎನ್ನುವುದು ರೈತರ ನಿರೀಕ್ಷೆ.

ನೀರಾವರಿ ಹೆಚ್ಚಳ ಪರಿಣಾಮ
ಮಾರುಕಟ್ಟೆಯಲ್ಲಿ ಜೋಳ ಸಿಕ್ಕರೂ ಅದರ ಕಣಿಕೆ ಸಿಗುವುದು ಕಷ್ಟವಾಗಿದೆ. ಜೋಳ ಬೆಳೆಯುವ ಬಹುತೇಕ ರೈತರು ತಮ್ಮ ಜಾನುವಾರುಗಳಿಗಾಗಿಯೇ ಕಣಿಕೆ ಬೇಕಾಗುತ್ತದೆ ಎಂದು ಬಣಿವೆ ಒಟ್ಟುತ್ತಾರೆ. ಹೆಚ್ಚಾದ ಕಣಿಕೆಯನ್ನು ಮಾತ್ರ ಮಾರಾಟ ಮಾಡುತ್ತಾರೆ. ಹಾಗಾಗಿ ಬಿಳಿಜೋಳದ ಕಣಿಕೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇಂತಹುದೇ ಸ್ಥಿತಿ ಉತ್ತರ ಕರ್ನಾಟಕದ ಇತರ ಭಾಗಗಳಲ್ಲೂ ಇದೆ. ಕಾರಣವಿಷ್ಟೇ ರೈತರು ಒಣಬೇಸಾಯ ಬಿಟ್ಟು ನೀರಾವರಿಯತ್ತ ಚಿತ್ತ ಹರಿಸಿದ್ದರ ಫಲವಾಗಿ ನೀರಾವರಿ ಪ್ರದೇಶದ ರೈತರು ಕಣಿಕೆಗಾಗಿ ಪರದಾಡಬೇಕಾಗಿದೆ.
ಕೋಟ್
“ನಮ್ಮ ಭಾಗದಲ್ಲಿ ಇಲ್ಲಿಯವರೆಗೂ ಕಬ್ಬು ಕಟಾವು ಜೋರಾಗಿತ್ತು ಅದರಿಂದ ಕಬ್ಬಿನ ಮೇಲಿನ ಹಸಿರು ಮೇವು ಸಿಗುತ್ತಿತ್ತು ಆದರೆ ಬೀರು ಬೆಸಿಗೆಯ ಪರಿಣಾಮ ಮುಂಬರುವ ದಿನಗಳಲ್ಲಿ ಮೇವಿನ ಕೊರತೆ ಆಗಬಾರದೆಂಬ ಮುನ್ನೆಚ್ಚರಿಕೆಯಿಂದ ದೂರದ ಜೋಳದ ಕಣಿಕೆ ಕರಿದಿಸುತ್ತಿದ್ದೆವೆ.”
– ಸಂಗಮೇಶ ಕೋಹಳ್ಳ
ಆಲಗೂರ ಗ್ರಾಮದ ಯುವ ರೈತ

