ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅಹಿಂಸಾ ಪರಮೋ ಧರ್ಮ ಎಂದು ಸಾರಿದ ಭಗವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ ಹೇಳಿದರು.
ಪಟ್ಟಣದ ಅರಿಹಂತ ಕಾಲೇಜಿನ ಆವರಣದಲ್ಲಿರುವ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದಲ್ಲಿ ೨೬೨೫ ನೇ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮದಲಲಿ ಅವರು ಮಾತನಾಡಿದರು.
ಮಹಾವೀರ ಭಗವಾನರ ತತ್ವಗಳು ಇಂದಿನ ಮನಕುಲಕ್ಕೆ ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಆಸ್ತೆಯ, ಬ್ರಹ್ಮಚರ್ಯ ಅಪರಿಗ್ರಹ, ಅನೇಕಾಂತವಾದ, ಶಾಧ್ವಾದ ಮೂಲ ತತ್ವಗಳು ಅಹಿಂಸೆಯಿಂದ ಜೀವಿಗಳ ರಕ್ಷಣೆಯಾಗುತ್ತದೆ. ಮಹಾವೀರ ತತ್ವಗಳು ಲೋಕೋದ್ಧಾರಕ್ಕೆ ಮಾರ್ಗಗಳಾಗಿವೆ ಎಂದರು.
ಪರಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೇಡನ್ನು ಬಯಸುವದರಿಂದ ಕರ್ಮವು ಬಿಡದೆ ಬೆಂಬತ್ತಿ ಬರುವುದು, ತನಗಿಂತ ಕನಿಷ್ಟರಾದವರ ಬಗ್ಗೆ ಪಶು-ಪಕ್ಷಿ, ಪ್ರಾಣಿ ಸಸ್ಯ ಸಂಕುಲನದ ಬಗ್ಗೆ ಜೀವ ದಯೇ ಇರಲಿ, ಅನ್ನದಾನ, ಅಭಯದಾನ ಶಾಸ್ತçದಾನ, ವಿದ್ಯಾದಾನ ಶ್ರೇಷ್ಠದಾನಗಳು ಎಂದು ಭಗವಾನ್ ಮಹಾವೀರರು ಸಾರಿದ ಮಹಾನ್ ಸನ್ಯಾಸಿ ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ ಬಡಿಗೇರ ವಕೀಲರು ಹಾಗೂ ಉಪನ್ಯಾಸಕ ರಾಜನಾರಾಯಣ ನಲವಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಭಗವಾನ ಮಹಾವೀರರು ಭೋದಿಸಿದ ಅಹಿಂಸಾ ಪರಮೋ ಧರ್ಮ ಎಂಬ ತತ್ವವನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅನಿಲಕುಮಾರ ಸಗರಿ, ಮಹಾವೀರ ಮಂಕಣಿ, ಸುನೀಲ ಸಗರಿ, ವಿಪುಲ್ ಸಗರಿ, ಅಕ್ಷತಾ ಸಗರಿ, ನಮ್ರತಾ ಸಗರಿ, ಜಿ.ಡಿ.ಬಡಿಗೇರ, ಹೆಚ್.ಎಸ್.ಗೌಡರ್, ಸಮೀರ್ ಬಿ, ರೋಹಿನಿ ನಾಯ್ಕೋಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

