ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳ ದೈಹಿಕ, ಮಾನಸಿಕ ಶ್ರೇಯೋಭಿವೃದ್ಧಿಗೆ ಶಾಲೆ ಆವರಣದ ಪರಿಸರವು ಪರಿಣಾಮ ಬೀರುತ್ತದೆ. ಈ ಶಾಲೆಯಲ್ಲಿ ಮಕ್ಕಳ ಪ್ರಗತಿಗೆ ಪೂರಕ ವಾತರಣವಿರುವುದು ತುಂಬಾ ಹರ್ಷ ತಂದಿದೆ. ಕೇವಲ ಎರಡೇ ವರ್ಷದಲ್ಲಿ ಶಾಲೆ ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕಾದರೆ ಶಾಲಾ ವ್ಯವಸ್ಥಾಪಕ ಮಂಡಳಿಯ ಜೊತೆಗೆ ಸಿಬ್ಬಂದಿಗಳ ಶ್ರಮವೂ ಪ್ರಮುಖವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಹೇಳಿದರು.
ಪಟ್ಟಣದ ಕಿಡ್ಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸಂಸ್ಕಾರ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ, ಸಾಂಸ್ಕೃತಿಕ ಚಟುವಟಕೆಗಳು ಮತ್ತು ಸ್ನೇಹ ಬಾಂಧವ್ಯವನ್ನು ಉತ್ತೇಜಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಇಂತಹ ಸಮಾರಂಭಗಳು ಮಕ್ಕಳಲ್ಲಿ ನಾಯಕತ್ವದ ಗುಣ, ಶಿಸ್ತು, ಸಂಸ್ಕಾರ, ಸಂಸ್ಕೃತಿ ಮತ್ತು ಮೌಲ್ಯಯುತ ಶಿಕ್ಷಣವನ್ನು ಬೆಳೆಸುವ ವೇದಿಕೆಯಾಗುತ್ತದೆ ಎಂದರು.
ಈ ವೇಳೆ ೫೦೦ಕ್ಕೂ ಅಧಿಕ ವಚನಗಳ ವಾಚನ, ಭಗವದ್ಗೀತೆಯ ೧೮ ಅಧ್ಯಾಯಗಳ ಹೆಸರು, ಶ್ರೀರಾಮ ವಂಶಸ್ಥರ ಹೆಸರು, ೪೦ ಶ್ಲೋಕಗಳು, ೬೦ ಸಂವಸ್ತರಗಳ ಹೇಸರು, ೨೦೦ಕ್ಕೂ ಅಧಿಕ ಗಾದೆಗಳು, ೩೦ಕ್ಕೂ ಅಧಿಕ ಒಡಪುಗಳು, ಅಶೋಕ ಚಕ್ರದೊಳಗಿನ ೨೪ ಗೆರೆಗಳ ಅರ್ಥ, ಕರ್ನಾಟಕದ ಜಿಲ್ಲೆಗಳು, ದೇವಸ್ಥಾನಗಳ ವಿಶೇಷತೆಗಳು, ಸಿದ್ದೇಶ್ವರ ಶ್ರೀಗಳ ಹಿತನುಡಿಗಳು, ಭಾರತ ಸಂವಿಧಾನ ಪೀಠಿಕೆ, ಭೂಗೋಳ, ಸಾಮಾನ್ಯ ಜ್ಞಾನ ಸಂಬಂಧಿತ ಸೇರಿ ಸುಮಾರು ೫ಸಾವಿರಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ವಿಶ್ವ ದಾಖಲೆ ಮಾಡಿದ ವಿಜಯಪರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ನಾಲ್ಕು ವರ್ಷದ ಬಾಲಕಿ ದಿತಿ ಹಣಮಂತ ಶಿರಶ್ಯಾಡ ಕುವರಿಗೆ ಕಿಡ್ಜಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಮಕ್ಕಳಿಂದ ವಿವಿಧ ನೃತ್ತ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಜ್ಯೋತಿ ರಾಜು ಗುತ್ತೇದಾರ, ವೈಭವ ಗುತ್ತೇದಾರ, ವೆಂಕಟೇಶ ಗುತ್ತೇದಾರ, ಶಿವು ಆಲಮೇಲ, ಪ್ರವೀಣ ಬಿರಾದಾರ, ಹಣಮಂತ ಶಿರಶ್ಯಾಡ, ಅನಿಲ ಕೆಂಭಾವಿ, ನವೀನ ತಾರಾಪೂರ, ದಿನೇಶ ಬಸರಕೋಡ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪಾಲಕ ವರ್ಗ ಮತ್ತು ಮಕ್ಕಳು ಇದ್ದರು.

