ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಮೊನ್ನೆ ನಡೆದ ಜನರೊಂದಿಗೆ ಜನತಾದಳ ಸಮಾವೇಶಕ್ಕೆ ಮಾಜಿ ಶಾಸಕ ಚಿಕ್ಕಣ್ಣ ಅವರನ್ನು ಕರೆತಂದಿದ್ದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ NDA ಅಭ್ಯರ್ಥಿ ಗೆಲ್ಲುವ ಒಂದು ಅವಕಾಶವಿತ್ತು. ಆದರೆ ಆ ಕೆಲಸವನ್ನು ನಿಖಿಲ್ ಕುಮಾರಸ್ವಾಮಿ ಮಾಡಲಿಲ್ಲ. ಜೆಡಿಎಸ್ ಪಕ್ಷದಿಂದ ದೂರ ಇರುವ ಮಾಜಿ ಶಾಸಕ ಚಿಕ್ಕಣ್ಣ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಅಂದೇ ಪಂಚೆಯನ್ನು ಮೇಲಕ್ಕೆ ಕಟ್ಟಿ, ಟಿಕೆಟ್ ತರುವುದಾಗಿ ತೊಡೆ ತಟ್ಟಿದ್ದರು. ಆ ಕೆಲಸವನ್ನು ಮುಂಬರುವ ವಿಧಾನಸಭೆ ಚುನಾವಣೆಗೂ ಮಾಡುತ್ತಾರೆ, NDA ಮೈತ್ರಿಕೂಟದಲ್ಲಿ ಟಿಕೆಟ್ ತರುತ್ತಾರೆ. ಹೀಗಾಗಿ ಇಬ್ಬರ ಜಗಳದಲ್ಲಿ ಮೂವರಿಗೆ ಲಾಭ ಎನ್ನುವ ಗಾದೆ ಮಾತಿನಂತೆ 2028 ವಿಧಾನಸಭಾ ಚುನಾವಣೆಗೂ ಕಾಂಗ್ರೆಸ್ ಗೆ ಲಾಭವಾಗಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ವಿ. ಬಸವರಾಜು ಭವಿಷ್ಯ ನುಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಬಿ.ವಿ. ಬಸವರಾಜು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಆದರೆ ಹೆಚ್ ಡಿ ಕೋಟೆಯಲ್ಲಿ ಕಾರ್ಯಕ್ರಮ ಮಾಡುವಾಗ ಎಡವಿದ್ದಾರೆ. ಜನರೊಂದಿಗೆ ಜನತಾದಳ ಸಮಾವೇಶ ಮಾಡುವಾಗ ನಿಖಿಲ್ ಕುಮಾರಸ್ವಾಮಿ, ಚಿಕ್ಕಣ್ಣ ಅವರ ಮನೆಗೆ ಹೋಗಿ, ಅವರ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆತರಬೇಕಾಗಿತ್ತು. ಸದ್ಯ ಟಿಕೆಟ್ ಗೊಂದಲವಿದೆ. ಅಲ್ಲಿಯವರೆಗೆ ಇಬ್ಬರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಎಂದು ವೇದಿಕೆ ಮೇಲೆ ಹೇಳಬೇಕಾಗಿತ್ತು. ಆದರೆ ಆ ಕೆಲಸವನ್ನು ನಿಖಿಲ್ ಕುಮಾರಸ್ವಾಮಿ ಮಾಡಿಲ್ಲ. ಇದರಿಂದ ಕೋಪಗೊಂಡಿರುವ ಚಿಕ್ಕಣ್ಣ ಸುಮ್ಮನೇ ಕೂರಲ್ಲ, ಚುನಾವಣೆ ವೇಳೆಗೆ ಟಿಕೆಟ್ ತಂದೆ ತರುತ್ತಾರೆ. ಇದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹೆಚ್ ಡಿ ಕೋಟೆ ತಾಲೂಕು ಶಿಕ್ಷಣದಲ್ಲಿ ಹತ್ತನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಇದು ಹಸಿ ಸುಳ್ಳು. ಮೈಸೂರು ಜಿಲ್ಲೆಯಲ್ಲಿ ಇರುವುದೇ 9 ಸ್ಥಾನ ಮಾತ್ರ. ಮಾಹಿತಿ ತಿಳಿದುಕೊಳ್ಳದೆ ಕೆ.ಎಂ. ಕೃಷ್ಣನಾಯಕ ಆಧಾರರಹಿತ ಆರೋಪ ಮಾಡಿದ್ದಾರೆ. ಡಿಡಿಪಿಐ ಅವರನ್ನ ಕೇಳಿದ್ದಾಗ ನಮ್ಮ ತಾಲೂಕು 3ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಅವರು ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಿದ್ದಾರೆ. ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿ.ವಿ.ಬಸವರಾಜು ಹೇಳಿದರು.
ತಹಸೀಲ್ದಾರ್ ಪ್ರಾಮಾಣಿಕ, ಸಬ್ ಇನ್ಸ್ಪೆಕ್ಟರ್ ದಕ್ಷ ಅಧಿಕಾರಿ
ಹೆಚ್ ಡಿ ಕೋಟೆ ತಾಲೂಕು ಕಚೇರಿಯಲ್ಲಿ ಸಾಗುವಳಿ ಪತ್ರ ಪಡೆಯಲು ಒಂದು ಎಕರೆಗೆ 50 ಸಾವಿರದಿಂದ ಒಂದು ಲಕ್ಷ ಫಿಕ್ಸ್ ಮಾಡಲಾಗಿದೆ ಎಂಬ ಆರೋಪವನ್ನು ಬಿ.ವಿ ಬಸವರಾಜು ತಳ್ಳಿಹಾಕಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ದರ್ಖಾಸ್ ಸಮಿತಿ ಸದಸ್ಯರು, ಒಬ್ಬರ ಬಳಿಯೂ ಒಂದೇ ಒಂದು ರೂಪಾಯಿ ಲಂಚ ತೆಗೆದುಕೊಂಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಇದ್ದ ಮಂಜುನಾಥ್ ಹಾದಿಯಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಸಾಗುತ್ತಿದ್ದಾರೆ. ಯಾರ ಬಳಿಯೂ ಲಂಚ ಸ್ವೀಕಾರ ಮಾಡದೇ ಪ್ರಾಮಾಣಿಕವಾಗಿ ಸಾರ್ವಜನಿಕ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಸಬ್ ಇನ್ಸ್ಪೆಕ್ಟರ್ ಗಂಗಾಧರ್ ಕೂಡ ಒಬ್ಬ ದಕ್ಷ ಅಧಿಕಾರಿಯಾಗಿದ್ದು, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಜಾಗಕ್ಕಾಗಿ ಅರ್ಜಿಯನ್ನೇ ಹಾಕಿರಲಿಲ್ಲ
ಜನರೊಂದಿಗೆ ಜನತಾದಳ ಸಮಾವೇಶ ಕಾರ್ಯಕ್ರಮಕ್ಕೆ ಜಾಗ ಕೊಡದಂತೆ ಶಾಸಕ ಅನಿಲ್ ಚಿಕ್ಕಮಾದು ಅವರು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮೇಲೆ ಒತ್ತಡ ಹಾಕಿದ್ದರು ಎಂಬುದು ಶುದ್ಧ ಸುಳ್ಳು, ಜಾಗ ಕೊಡಿ ಎಂದು ಕೆ.ಎಂ.ಕೃಷ್ಣನಾಯಕ ಪುರಸಭೆಗೆ ಅರ್ಜಿಯನ್ನೇ ಹಾಕಿರಲಿಲ್ಲ. ಕಾರ್ಯಕ್ರಮ ಆಯೋಜಕರು ಅರ್ಜಿಯನ್ನೇ ಹಾಕದಿರುವಾಗ ಹೇಗೆ ತಾನೇ ಜಾಗ ಕೊಡಲು ಸಾಧ್ಯ ಎಂದು ಬಿ.ವಿ ಬಸವರಾಜು ಪ್ರಶ್ನಿಸಿದರು.
“ರಸ್ತೆ ದುರಸ್ತಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಮೈಸೂರು ಟು ಬಾವಲಿ ಜೋಡಿ ರಸ್ತೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲಾಗಿದೆ. ಬಿದರಹಳ್ಳಿಯಿಂದ ಎನ್ ಬೇಗೂರು ರಸ್ತೆ ಕಾಮಗಾರಿ ನಡೆಯುತ್ತಿದೆ. ಮುಳ್ಳೂರು, ಬರಗಿ ರಸ್ತೆ ದುರಸ್ತಿ ನಡೀತಿದೆ. ಇಷ್ಟೆಲ್ಲ ಕೆಲಸ ಮಾಡುವ ಅನಿಲ್ ಚಿಕ್ಕಮಾದು ಅವರನ್ನು ಗುದ್ದಲಿ ಪೂಜೆಗಷ್ಟೇ ಸೀಮಿತವಾಗಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ.”
– ಬಿ.ವಿ. ಬಸವರಾಜು
ಕಾಂಗ್ರೆಸ್ ಮುಖಂಡರು

