ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾಲವಾದ ಗ್ರಾಮದ ರೈತರ ಜಮೀನುಗಳಿಗೆ ಏಕದರ ನಿಗದಿಮಾಡಿ ಖರೀದಿಸುವಂತೆ ಆಗ್ರಹಿಸಿ ರೈತರ ಸಂಘ ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ಪ್ರತಿಭಟನೆ ಕೈಗೊಂಡರು.
ಗ್ರಾಮದ ರೈತರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಕರ್ನಾಟಕ ರೈತರ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡ ಮಾತನಾಡಿ, ಜಾಲವಾದ ಗ್ರಾಮದಲ್ಲಿ ಹರಿಯಾಣ ಮೂಲದ ಆರ್ಇಝಡ್ ಟ್ರಾನ್ಸಮಿಷನ್ ಸೋಲಾರ್ ಪಾರ್ಕ್ ಲಿಮಿಟೆಡ್ ಕಾರ್ಪೊರೇಟ್ ಕಂಪನಿಯು ರೈತರಿಗೆ ನಿಗದಿತ ಏಕರೂಪದ ಬೆಲೆ ನೀಡದೆ ವಂಚಿಸಿದೆ. ಈ ಕಂಪನಿಯು ತನ್ನ ನೀತಿಗಳಿಗೆ ಅನುಗುಣವಾಗಿ ನಿಗದಿತ ಅರ್ಹತಾ ಮಾನದಂಡಗಳಿಗೆ ಒಳಗೊಂಡAತೆ ಕರ್ನಾಟಕ ರಾಜ್ಯದಲ್ಲಿ ಬಿಆರ್ಐಜೆ ಯೋಜನೆಗೆ ರೈತರ ಭೂಮಿ ಖರೀದಿಸಿ ಸ್ಥಳೀಯ ನಿರಾಶ್ರಿತರಿಗೆ ಪ್ರತಿಯೊಂದು ಕುಟುಂಬಕ್ಕೆ ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಸರ್ಕಾರಿ ನಿಯಮಗಳ ಪ್ರಕಾರ ದೃಢಪಡಿಸಿ, ಈಗ ಸ್ಥಳೀಯ ರೈತರಿಗೆ ಅನ್ಯಾಯ ಮಾಡಿದೆ.
ರಾಜಕೀಯ ಬಲ ಮತ್ತು ಕಾನೂನಿನ ಅರಿವುಳ್ಳ ರೈತರಿಗೆ ಪ್ರತಿ ಎಕರೆಗೆ ೨೮ ರಿಂದ ೩೦ ಲಕ್ಷ ರೂಪಾಯಿ ಕೊಟ್ಟು ಜಮೀನು ಖರೀದಿಸಿದೆ. ಆದರೆ ಅಮಾಯಕ ರೈತರಿಗೆ ೧೫ ರಿಂದ ೧೬ ಲಕ್ಷಗಳಿಗೆ ಏಜೆಂಟಗಳ ಮೂಲಕ ಭೂಮಿ ಖರೀದಿಸಿ ವಂಚಿಸಿದೆ. ಆದ್ದರಿಂದ ಕೂಡಲೇ ಅಮಾಯಕ ರೈತರಿಗೆ ಪ್ರತಿ ಎಕರೆಗೆ ೩೫ ಲಕ್ಷ ಕೊಟ್ಟು ಖರೀದಿಸಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಸದ್ದಿದರೆ ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರ ರೂಪದ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿ, ಆಗ್ರಹಿಸಿದರು.
ತಾಲ್ಲೂಕು ಘಟಕದ ನೂತನ ಡಿಎಸ್ಎಸ್ ಸಂಚಾಲಕ ಸಿದ್ದಾರ್ಥ ರೂಗಿ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಸುನೀಲ ಕನಮಡಿ, ಶಾಂತಾಬಾಯಿ ನೀರಲಗಿ, ಶಂಕರ ನಾಯ್ಕೋಡಿ, ಪ್ರಕಾಶ ನಾಯ್ಕೋಡಿ, ಅಲ್ಲಾಭಕ್ಷ್ ಇನಾಮದಾರ, ಮಲ್ಲಿಕಾರ್ಜುನ ನಾಯ್ಕೋಡಿ, ಮಾಳಪ್ಪ ನೀರಲಗಿ, ಸಾಯಬಣ್ಣ ಕಣ್ಣಿ, ಮುದಕಪ್ಪ ಮುಳಸಾವಳಗಿ ಇದ್ದರು.

