ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರು, ಸಾರ್ವಜನಿಕರ ಪಾಲಿಗೆ ಜೀವಜಲ ಆಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿರುಬೇಸಿಗೆಯಿಂದ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.
ಸದ್ಯ 2.80 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಿದ್ದು, ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡದಿದ್ದರೆ ಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.
ಹಿಪ್ಪರಗಿ ಜಲಾಶಯದಿಂದ ಪ್ರತಿದಿನ 0.07 ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಜನತೆಯ ಬಳಕೆ ಒಂದು ಕಾರಣವಾದರೆ, ಬಿರುಬಿಸಿಲಿನ ತಾಪಕ್ಕೆ ನೀರು ಆವಿಗೊಂಡು ಜಲಾಶಯದಲ್ಲಿನ ನೀರು ಕಡಿಮೆಯಾಗುತ್ತಿದೆ.
ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ಇದೇ ರೀತಿ ಪ್ರತಿ ದಿನ ಖಾಲಿಯಾದರೆ ಮೇ ಎರಡನೇ ವಾರದಲ್ಲಿ ನೀರು ಸಂಪೂರ್ಣ ಖಾಲಿ ಯಾಗಬಹುದೆಂದು ಅಂದಾಜಿಸಲಾಗಿದೆ.
ಕುಡಿಯುವ ನೀರು ಬಿಡುಗಡೆಯಾದರೆ ಕೊಂಚ ನಿರಾಳ: ಪ್ರತಿವರ್ಷ ಬೇಸಿಗೆ ಸಂದರ್ಭ ಹಿಪ್ಪರಗಿ ಜಲಾಶಯದಿಂದ ಮುಂಭಾಗಕ್ಕೆ ಅಂದಾಜು ಸುಮಾರು 0.5 ಟಿಎಂಸಿಯಷ್ಟು ನೀರನ್ನು ಜಮಖಂಡಿ ಭಾಗಕ್ಕೆ ನೀರಿನ ಸಲುವಾಗಿ ಬಿಡುಗಡೆಗೊಳಿಸುತ್ತಿದ್ದರು. ಪ್ರಸಕ್ತ ವರ್ಷ ಗೇಟ್ ನಂ.22ರಲ್ಲಿ ಆಗಿರುವ ಅವಘಡದಿಂದ 2 ಟಿಎಂಸಿಗೂ ಹೆಚ್ಚು ನೀರು ಪೋಲಾಗಿದ್ದು, ಇದರ ಪರಿಣಾಮವಾಗಿ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಲ್ಲಿರುವ ನಗರ, ಗ್ರಾಮ ಹಾಗೂ ರೈತ- ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಬೇಸಿಗೆ ಮುಗಿಯುವವರೆಗೂ ಇದೇ ನೀರು ನಿಯಂತ್ರಣದಲ್ಲಿದ್ದರೆ ಮಾತ್ರ ಮೇ ಮಧ್ಯಂತರವರೆಗೆ ಪರಿಸ್ಥಿತಿ ನಿಭಾಯಿಸಬಹುದು.
ಹಿಪ್ಪರಗಿ ಜಲಾಶಯದ ಗೇಟು ಕಿತ್ತುಹೋದಾಗ ಭಾರೀ ಪ್ರಮಾಣದಲ್ಲಿ ಹೈಡ್ರಾಮಾ ನಡೆಸಿದ್ದ ಜನಪ್ರತಿನಿಧಿಗಳು, ವಿಪಕ್ಷ ಧುರೀಣರು ಇದೀಗ ಕೃಷ್ಣೆಯ ಒಡಲು ಸಂಪೂರ್ಣ ಖಾಲಿಯಾಗುತ್ತಿದ್ದರೂ ತುಟಿ ಪಿಟಕ್ ಎನ್ನುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿ ಕೃಷ್ಣಗೆ ನೀರು ಬಿಡಿಸಲು ಕಾಳಜಿ ತೋರಿಸುತ್ತಿಲ್ಲವೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಜನರ ಆಶೋತ್ತರಕ್ಕೆ ಯಾರು ಸ್ಪಂದಿಸುವರೋ ಕಾದು ನೋಡಬೇಕಿದೆ.
“ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತು ಮುಂಬರುವ ದಿನಗಳಲ್ಲಿ ಕೄಷ್ಣಾತಿರದಲ್ಲಿ ನೀರಿನ ಕೊರತೆ ಆಗದಂತೆ ಈಗಲೇ ಮುನ್ನೆಚ್ಚರಿಕೆ ವಹಿಸಿ ಸೂಕ್ತಕ್ರಮಗಳನ್ನು ಕೈಗೋಳ್ಳಬೇಕು.”
– ಕಾಶೀನಾಥ ಚನವೀರ
ಬಿಜೆಪಿ ಯುವ ಮುಖಂಡ, ಜಮಖಂಡಿ
ಬಾಕ್ಸ : ಹಿಪ್ಪರಗಿ ಜಲಾಶಯದಲ್ಲಿ ಗೇಟ್ ಅವಘಡದಿಂದ ನೀರಿನ ಪ್ರಮಾಣ ಕಡಿಮೆಯಿದೆ. ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೋಲು ಮಾಡದೇ ಕಾಳಜಿಯಿಂದ ಬಳಕೆ ಮಾಡಬೇಕು.
ಅನೀಲ ಬಡಿಗೇರ.
ತಹಶೀಲ್ದಾರರು ಜಮಖಂಡಿ.

