ಇಂದು (ಅಗಷ್ಟ ೧೯, ಬುಧವಾರ) “ವಿಶ್ವ ಮಾನವೀಯತೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ಉಪನ್ಯಾಸಕರು
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಶಿವರಾಂ ಕಾರಂತ ಅವರು “ಬಾಳ್ವೆ ಇರುವುದು ಕಲಿಯುವುದಕ್ಕೆ , ಕಲಿತು ತಿದ್ದಿಕೊಳ್ಳುವುದಕ್ಕೆ. ತಿದ್ದಿ ತೃಪ್ತಿ ಪಡುವುದಕ್ಕೆ, ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ” ಎಂದು ಹೇಳಿದ್ದಾರೆ.
ಮಾನವ ಧರ್ಮ ಮತ್ತು ಮನುಷ್ಯತ್ವವೇ ಶ್ರೇಷ್ಠವಾದುದು. ಈ ಜಗತ್ತಿನಲ್ಲಿ ಯಾರೇ ಸಂಕಷ್ಟದಲ್ಲಿದ್ದವರಿಗೆ ಅವರಿಗೆ ಸಹಾಯ ಹಸ್ತ ಮತ್ತು ನೊಂದವರ ಕಣ್ಣೀರು ಒರೆಸುವ ಮತ್ತು ಸಾಂತ್ವನದೊಂದಿಗೆ ಸಹಾಯ-ಸಹಕಾರ ನೀಡಬೇಕು. ಪರಸ್ಪರ ಪ್ರೀತಿ ಹಂಚಿಕೊಂಡು ಆತ್ವವಿಶ್ವಾಸದಿಂದೊಂದಿಗೆ ಬದುಕುತ್ತಾ, ಮಾನವೀಯತೆಯನ್ನು ಮೆರೆಯೋಣ ಮತ್ತು ಉಳಿಸಿ-ಬೆಳೆಸೋಣ. ತಮ್ಮ ಜೀವನವನ್ನೇ ಸದಾ ಮನುಕುಲದ ಸೇವೆಗಾಗಿ ಮುಡಿಪಾಗಿಟ್ಟ ಮತ್ತು ನಿಸ್ವಾರ್ಥತೆಯಿಂದ ಶ್ರಮಿಸುವ ಮತ್ತು ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ಮತ್ತು ಸಹಾಯ ಮಾಡುವವರನ್ನು ಸ್ಮರಿಸುವ ಉದ್ಧೇಶದಿಂದ ಪ್ರತಿವರ್ಷ ಅಗಷ್ಟ ೧೯ ರಂದು ವಿಶ್ವ ಮಾನವೀಯತೆ ದಿನವೆಂದು ಆಚರಿಸಲಾಗುತ್ತದೆ.

ಈ ದಿನದ ಆಚರಣೆಯ ಉದ್ಧೇಶ
ಪ್ರಕೃತಿ ವಿಕೋಪ, ಯುದ್ಧದ ಸಂದರ್ಭ, ತೀವ್ರ ಬಿಕಟ್ಟು ಮತ್ತು ಮಾರಣಾಂತಿಕ ಕೋವಿಡ್ನಂತಹ ಕಾಲಘಟ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ಮಾನವೀಯತೆಯೊಂದಿಗೆ ಯುದ್ಧೋಪಾದಿಯಲ್ಲಿ ಜನರನ್ನು ರಕ್ಷಿಸುವದು ಮತ್ತು ಕಷ್ಟಕಾಲದಲ್ಲಿ ಜನರಿಗೆ ಪರಸ್ಪರ ಸಹಾಯ ಸಹಕಾರ ಮತ್ತು ರಕ್ಷಣೆ ನೀಡುವ ಗುಣವನ್ನು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಮತ್ತು ಉತ್ತೇಜಿಸುವುದು ಈ ದಿನದ ಆಚರಣೆಯ ಪ್ರಮುಖ ಧ್ಯೇಯವಾಗಿದೆ.
ಮಾನವೀಯತೆ ಬಗ್ಗೆ
ಸಮಾಜದಲ್ಲಿ ಅರಿವು ಮೂಡಿಸಿ
ಸಂಕಷ್ಟದಲ್ಲಿರುವ ಜನರು ಮತ್ತು ಸಂತ್ರಸ್ತರ ರಕ್ಷಣೆ ಮತ್ತು ಸಹಾಯ ಮಾಡುವಲ್ಲಿ ಜೀವನವನ್ನೇ ಅರ್ಪಿಸಿದ ಮತ್ತು ಪ್ರಾಣ ತ್ಯಾಗ ಮಾಡಿದ ಮಾನವೀಯತೆಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರನ್ನು ಗೌರವಿಸುತ್ತಾ, ಅವರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಲು ಈ ದಿನದ ಆಚರಣೆಯ ವಿಶೇಷತೆಯಾಗಿದೆ. ಜಾತಿ, ಮತ, ಧರ್ಮ, ಜನಾಂಗ ಮತ್ತು ದೇಶಗಳ ಗಡಿಗಳ ಎಲ್ಲೆ ಮೀರಿ ಇಡೀ ಮಾನವ ಕುಲಕ್ಕೆ ಸಹಾಯ ಮಾಡಲು ಈ ದಿನವು ಪ್ರೇರೇಪಿಸುತ್ತದೆ. ವಿಶ್ವದೆಲ್ಲೆಡೆ ನಡೆಯುವ ಮಾನವೀಯತೆ ಮತ್ತು ನಿಸ್ವಾರ್ಥ ಸೇವಾ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
೨೦೨೬ ನೇಯ ವರ್ಷದ ಘೋಷವಾಕ್ಯ

ಈ ವಿಶ್ವ ಮಾನವತಾ ದಿನದ ಆಚರಣೆಯು ೨೦೨೬ ನೇಯ ವರ್ಷಕ್ಕಾಗಿ “ಮಾನವತೆಗಾಗಿ ಕಾರ್ಯನಿರ್ವಹಿಸಿ” ಎಂಬ ಸಂದೇಶದೊಂದಿಗೆ ಜಾಗತಿಕ ಒಗ್ಗಟ್ಟನ್ನು ಬಲಪಡಿಸುವುದು ಮತ್ತು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದು” ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.
ಕೊನೆಯ ನುಡಿ
ಮಹಾತ್ಮಾ ಗಾಂಧೀಜಿಯವರು “ನಾವು ಮಾನವೀಯತೆಯ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆ ಎಂಬುದು ಸಾಗರವಿದ್ದಂತೆ. ಸಮುದ್ರದ ಒಂದೆರಡು ಹನಿಗಳು ಮಲಿನವಾದ ಮಾತ್ರಕ್ಕೆ ಇಡೀ ಸಮುದ್ರವೇ ಮಲಿನವಾಗುವುದಿಲ್ಲ” ಎಂದು ಹೇಳಿದ್ದಾರೆ. ಮನುಕುಲದ ಕಲ್ಯಾಣವೇ ನಮ್ಮ ಬದುಕಿನ ಗುರಿಯಾಗಬೇಕು. ಇದನ್ನೇ ೧೨ ನೇಯ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮ ಸಮಾಜದ ನಿರ್ಮಾಣ ಮತ್ತು ಕಲ್ಯಾಣ ರಾಜ್ಯಕ್ಕಾಗಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ಹೋಗಲಾಡಿಸಿದರು. ಜಾಗತಿಕ ಮಟ್ಟದಲ್ಲಿ ಎದುರಾಗುವ ಮಾನವೀಯತೆಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳನ್ನು ಎಲ್ಲ ದೇಶಗಳು ಒಗ್ಗಟ್ಟಾಗಿ ನಿಂತು ವಿಶ್ವದಲ್ಲಿ ಶಾಂತಿ, ಸಹಕಾರ, ಸಮನ್ವಯತೆ ಮತ್ತು ಐಕ್ಯತೆ ಮೂಡುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕೆಳವರ್ಗದ ಮತ್ತು ತಳಮಟ್ಟದ ಜನರಿಗೆ ಮತ್ತು ಸಮುದಾಯಗಳಿಗೆ ಎಲ್ಲ ರೀತಿಯ ಸಬಲರನ್ನಾಗಿಸುವಲ್ಲಿ ಶ್ರಮಿಸಬೇಕಾಗಿದೆ. ನಾವೆಲ್ಲರೂ ಒಂದೇ ಎಂಬ ಸಮಷ್ಠಿಭಾವದೊಂದಿಗೆ ‘ವಸುದೈವ ಕುಟುಂಬಕಂ’ ಎನ್ನುವಂತೆ ಸಹಬಾಳ್ವೆಯಿಂದ ಬಾಳಿ-ಬದುಕಬೇಕು. ಅಂದಾಗ ಮಾತ್ರ ಈ ದಿನದ ಆಚರಣೆಯು ಅರ್ಥಪೂರ್ಣ ಮತ್ತು ಸಾರ್ಥಕವಾಗಲು ಸಾಧ್ಯ.


